ಕಳೆದೊಂದು ವಾರದಿಂದ ವಿಷ್ಣು ಸಮಾಧಿ ವಿಚಾರವಾಗಿ ಭಾರೀ ಚರ್ಚೆ ಆಗ್ತಿದೆ. ಅಭಿಮಾನ್ ಸ್ಟೂಡಿಯೋದಲ್ಲಿದ್ದ ಸಮಾಧಿಯನ್ನು ದಿವಂಗತ ನಟ ಬಾಲಣ್ಣ ಮೊಮ್ಮಕ್ಕಳು ಅಗೆದು ಹಾಕಿದ್ರಿಂದ ಕೋಪಗೊಂಡಿದ್ದ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಕುಟುಂಬಸ್ಥರು ಮೈಸೂರಿನಲ್ಲಿ ಸ್ಮಾರಕ ಮಾಡಿದ್ದೇವೆ ಎಂದು ಹೇಳಿದರೂ ಅಭಿಮಾನಿಗಳ ಆಕ್ರೋಶ ಕಡಿಮೆ ಆಗಿರಲಿಲ್ಲ. ಆದರೆ ಅಂತಿಮವಾಗಿ ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ ಕೆಂಗೇರಿ ಬಳಿ ಅರ್ಧ ಎಕರೆ ಭೂಮಿ ಖರೀದಿ ಮಾಡಿಸಿ ಕೊಟ್ಟಿದ್ದಾರೆ ಎಂದು ವಿಷ್ಣುಸೇನಾ ಸಮಿತಿ ಮಾಹಿತಿ ನೀಡಿದೆ.

ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹಾಗೂ ಸಮಿತಿ ಸದಸ್ಯರು ಒಟ್ಟಾಗಿ ಸುದ್ದಿಗೋಷ್ಟಿ ನಡೆಸಿದ್ದು, ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ನೆಲಸಮ ಆದ್ಮೇಲೆ ವಾದ-ವಿವಾದ ಎಲ್ಲರಿಗೂ ಗೊತ್ತಿದೆ, ವಿವಾದಕ್ಕೆ ಯಜಮಾನ್ರ ಹೆಸರು ಮುನ್ನಲೆಗೆ ಬರೋದು ನೋವಿನ ವಿಷಯ. ಅಮೃತ ಮಹೋತ್ಸವ ಮಾಡಲು ಸಂಕಲ್ಪ ಮಾಡ್ಕೊಂಡಿದ್ವಿ, ಅದು ಕೈಗೂಡುವ ಮೊದಲೇ ಸಮಸ್ಯೆ ಆಯ್ತು. ವಿಷ್ಣುವರ್ಧನ್ ಅವರನ್ನ ಎರಡನೇ ಸಲ ಮಣ್ಣಲ್ಲಿ ಸಾಯುವಂತೆ ಮಾಡ್ಬಿಟ್ರು ಎಂದು ಬೇಸರ ಹೊರ ಹಾಕಿದ್ದಾರೆ.

ಕೆಂಗೇರಿ ಬಳಿ ಅರ್ಧ ಎಕರೆ ಜಾಗವನ್ನು ಸುದೀಪ್ ಖರೀದಿ ಮಾಡಿದ್ದಾರೆ.. ಅಲ್ಲಿ ವಿಷ್ಣುವರ್ಧನ್ ಸ್ಮಾರಕ ಮಾಡಲಿದ್ದಾರೆ. ಸೆಪ್ಟೆಂಬರ್ 18ರಂದು ವಿಷ್ಣು ಹುಟ್ಟುಹಬ್ಬದ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುತ್ತದೆ. ಪುಣ್ಯಭೂಮಿಗೆ ಸಮ ಅಂತ ಅಥವಾ ಮೈಸೂರಿನ ಸ್ಮಾರಕಕ್ಕೆ ಸಮ ಅಂತ ನಾವು ಹೇಳಲ್ಲ. ಇದು ಪ್ರವಾಸಿ ಕೇಂದ್ರವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸೆಪ್ಟೆಂಬರ್ 2 ಕ್ಕೆ ಈ ಬಗ್ಗೆ ಎಲ್ಲಾ ಮಾಹಿತಿ ನೀಡ್ತೇವೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದರ್ಶನ ಕೇಂದ್ರ ಮಾಡ್ತೇವೆ, 25 ಅಡಿಯ ವಿಷ್ಣು ಪುತ್ಥಳಿ ಇರಲಿದೆ ಎಂದಿದ್ದಾರೆ.

ಅಭಿಮಾನಿಗಳು ಹಾಗೂ ಕುಟುಂಬದ ಮಧ್ಯೆ ಅನ್ನೋ ಮಾತು ಕೇಳಿಬಂತು. ಕಿಚ್ಚ ಸುದೀಪ್ ಸರ್ ಮಾತನಾಡ್ತಾ ಹೇಳಿದ್ರು. ಶುಭಸುದ್ದಿ ಇದೆ ಅಂತ ಮಾತನ್ನ ಮುಂದುವರಿಸಿದ್ದಾರೆ. ಸೆಪ್ಟೆಂಬರ್ 18 ಬಂದ್ರೆ ನಾವು ಯಜಮಾನರನ್ನ ಎಲ್ಲಿ ಹೋಗಿ ನೋಡೋದು ಅನ್ನೋದಕ್ಕೆ ಉತ್ತರ ಇರಲಿಲ್ಲ. ವಿಷ್ಣುವರ್ಧನ್ ಪುಣ್ಯ ಭೂಮಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಜಾಗ ಯಾವ ಉದ್ದೇಶಕ್ಕೆ ಸಿಕ್ಕಿತ್ತೋ ಅದಕ್ಕೆ ಉಪಯೋಗ ಆಗ್ತಿದೆಯಾ..? ಅನ್ನೋದ್ರ ಬಗ್ಗೆ ತನಿಖೆ ಆಗಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಅದನ್ನ ದರ್ಶನ ಕೇಂದ್ರ ಮಾಡ್ತೀವಿ, ಸ್ಮಾರಕ ನಿರ್ಮಾಣ ಮಾಡ್ತೀವಿ.. ಸ್ಮಾರಕ ಹೇಗಿರುತ್ತೆ ಅನ್ನೋದ್ರ ರೂಪುರೇಷೆ ತೋರಿಸುತ್ತೀವಿ ಎಂದಿದ್ದಾರೆ.


