ಧರ್ಮಸ್ಥಳದಲ್ಲಿ ಮಾಸ್ಕ್ಮ್ಯಾನ್ ತೋರಿಸಿದ ಜಾಗಗಳಲ್ಲಿ ಅಗೆಯೋದಕ್ಕೆ SIT ತಾತ್ಕಾಲಿಕ ಬ್ರೇಕ್ ಕೊಟ್ಟು ವಿಚಾರಣೆ ನೆಸುತ್ತಿದೆ. ಈ ನಡುವೆ ಸಾಕಷ್ಟು ವಿಚಾರಗಳು ಹೊರಬರುತ್ತಿದ್ದು ರಾಜಕೀಯವೂ ಶುರುವಾಗಿದೆ. SIT ತನಿಖೆ ಮುಗಿಯುವ ತನಕ ಕಾಯುವ ತಾಳ್ಮೆ ಇಲ್ಲದ ಕೆಲವರು ಪ್ರತಿಭಟನೆ ಮೊರೆ ಹೋಗಿದ್ದಾರೆ. ಈ ನಡುವೆ ಅನನ್ಯಾ ಭಟ್ ಎನ್ನುವ ಯುವತಿಯೇ ಇರಲಿಲ್ಲ, ಅದೆಲ್ಲವೂ ಕಟ್ಟುಕಥೆ ಅನ್ನೋ ಬಗ್ಗೆ ಕೆಲವರು ತೀರ್ಪು ಕೊಡುವ ಹಂತಕ್ಕೆ ಬಂದು ನಿಂತಿದ್ದಾರೆ. ಇದೀಗ ಸಾಮಾನ್ಯ ಜನರ ಮನಸ್ಸಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆಯಲಾಗಿದೆ.
ಬಿಜೆಪಿ ನಾಯಕ ಚಿಕ್ಕಮಗಳೂರು – ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದು, ಜಾರಿ ನಿರ್ದೇಶನಾಯಲದ ಮೂಲಕ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ಯೂ ಟ್ಯೂಬರ್ಗಳಿಗೆ ವಿದೇಶಗಳಿಂದ ಫಂಡ್ ಬರುತ್ತಿದೆ ಎಂದು ಬಿಜೆಪಿ ನಾಯಕರ ಆರೋಪ ಬೆನ್ನಲ್ಲೇ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದಾರೆ. ಇನ್ನೊಂದು ಕಡೆ ದೇಶ ವಿದೇಶಗಳಿಂದ ಕೆಲವು ಯೂಟ್ಯೂಬರ್ಸ್ ಅಕ್ರಮ ಹಣ ಪಡೆದಿರೋದಾಗಿ ಮಾಹಿತಿ ಇದ್ದು ತನಿಖೆ ನಡೆಸುವಂತೆ ಬೆಂಗಳೂರಿನ ಇಡಿ ಕಚೇರಿಗೆ ತೇಜಸ್ ಗೌಡ ಎನ್ನುವವರು ದೂರು ಸಲ್ಲಿಸಿದ್ದಾರೆ.

ಈ ನಡುವೆ ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆಯೇ ಅತೃಪ್ತಿ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ಸಹಾನುಭೂತಿ ಬಗ್ಗೆ ಅನುಮಾನವಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಗೆ ಸಾಧು ಸಂತರ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹುಬ್ಬಳ್ಳಿಯ ಜೈನಮುನಿ ಗುಣಧರನಂದಿ ಮಹಾರಾಜ ಹೇಳಿದ್ದಾರೆ.
ಈ ನಡುವೆ ಅನನ್ಯಾ ಭಟ್ ನನ್ನ ಮಗಳು 2003 ರಲ್ಲಿ ನಾಪತ್ತೆ ಆಗಿದ್ದಳು. ಆಕೆಯ ಅಸ್ಥಿ ಪಂಜರ ಸಿಕ್ಕರೆ ಡಿಎನ್ಎ ಟೆಸ್ಟ್ ಮಾಡಿ ನನಗೆ ಕೊಡಿ ಎಂದು ಎಸ್ಐಗೆ ದೂರು ನೀಡಿರುವ ಸುಜಾತ ಭಟ್ ಒಂದು ಫೋಟೋ ತೋರಿಸಿದ್ದರು. ಆದರೆ ಸುಜಾತ ಭಟ್ ತೋರಿಸಿದ ಫೋಟೋ ಅವರ ಮಗಳು ಅನನ್ಯಾ ಭಟ್ ಅವರದ್ದು ಅಲ್ಲ. ಅದು ನನ್ನ ತಂಗಿ ವಾಸಂತಿ ಫೋಟೋ. ನನ್ನ ಸಹೋದರಿ ಶ್ರೀವತ್ಸ ಎಂಬುವರನ್ನು ಪ್ರೀತಿಸಿ 2007ರಲ್ಲಿ ಮದುವೆಯಾಗಿದ್ದರು. ಆ ಬಳಿಕ ಮದುವೆಯಾದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ತಂಗಿ ವಾಸಂತಿ ಫೋಟೋ ದುರ್ಬಳಕೆ ಆಗ್ತಿದೆ . ಸುಜಾತಾ ಭಟ್ಗೆ ನನ್ನ ತಂಗಿ ವಾಸಂತಿ ಫೋಟೋ ಹೇಗೆ ಸಿಕ್ತು ಗೊತ್ತಿಲ್ಲ ಎಂದು ಕೊಡಗಿನಲ್ಲಿ ವಿಜಯ್ ಎಂಬುವರು ದೂರಿದ್ದಾರೆ. ಇದೆಲ್ಲವೂ ಮಾಧ್ಯಮಗಳಲ್ಲಿ ಬರುತ್ತಿದ್ದು, ಜನರಿಗೆ ಯಾವುದು ಸರಿ..? ಯಾವುದು ತಪ್ಪು ಅನ್ನೋದೇ ಗೊಂದಲದ ಗೂಡಾಗಿದೆ. ಈ ನಡುವೆ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯಲಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತಾ..? ಅನ್ನೋದನ್ನು ಕಾದು ನೋಡ್ಬೇಕು.


