ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಟ್ಟಾಳು ಡಿ.ಕೆ ಶಿವಕುಮಾರ್, ಕರ್ನಾಟಕದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಅಜ್ಜಯ್ಯನ ಫೋಟೋಗೆ ನಮಸ್ಕರಿಸಿದ್ದಾರೆ. ಲೋಕಭವನದಲ್ಲಿ ಸಂಜೆ 4.05ಕ್ಕೆ ಸರಿಯಾಗಿ ಪ್ರಮಾಣ ವಚನ ಕಾರ್ಯಕ್ರಮ ಆರಂಭ ಆಯ್ತು. ಆದರೆ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು ಸಂಜೆ 4.15ಕ್ಕೆ. ವೀರಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದ್ರು.. ಈ ಮೂಲಕ ಡಿ.ಕೆ ಶಿವಕುಮಾರ್ ಕರ್ನಾಟಕದ 25ನೇ ಮುಖ್ಯಮಂತ್ರಿ ಆಗಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಕುರ್ಚಿ ಮೇಲೆ ಕುಳಿತು ಡಿ.ಕೆ ಶಿವಕುಮಾರ್ ಅಧಿಕಾರ ಆರಂಭಿಸಿದ್ದಾರೆ.

ಡಿ.ಕೆ ಶಿವಕುಮಾರ್ ಜೊತೆಗೆ 13 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದ್ದಾರೆ. ಡಾ. ಜಿ. ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಕೆ.ಜೆ ಜಾರ್ಜ್ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ರೆ, ಎಂ.ಬಿ ಪಾಟೀಲ್ ಬಸವಾಧಿ ಶರಣರು, ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ್ದಾರೆ. ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರು ಯಾವುದೇ ಹೆಸರು ಹೇಳದೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನುಳಿದಂತೆ ಈಶ್ವರ್ ಖಂಡ್ರೆ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ಯತೀಂದ್ರ ಸಿದ್ದರಾಮಯ್ಯ ಸಂವಿಧಾನದ ಹೆಸರಲ್ಲಿ, ಬೈರತಿ ಸುರೇಶ್, ಯುಟಿ ಖಾದರ್, ಶರಣಪ್ರಕಾಶ್ ಪಾಟೀಲ್ ದೇವರ ಹೆಸರಲ್ಲಿ ಪ್ರಮಾಣ ಮಾಡಿದ್ರು.
ಪ್ರಮಾಣವಚನಕ್ಕೂ ಮುನ್ನ ಡಿಕೆ ಶಿವಕುಮಾರ್, ವೇದಿಕೆ ಮೇಲಿದ್ದ ಗಣ್ಯರಿಗೆ ಸನ್ಮಾನ ಮಾಡಿದ್ರು. ಮೊದಲು ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಲು ಹೊದಿಸಿ, ಹೂಗುಚ್ಚ ಕೊಟ್ಟು ಸನ್ಮಾನ ಮಾಡಿದ್ರು.. ಆ ಬಳಿಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ಬಂದಿದ್ದ ಗಣ್ಯರಿಗೆ ಸನ್ಮಾನ ಮಾಡಿದ್ರು. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಿದ್ದಂತೆ ವಿಧಾನಸೌಧದಲ್ಲಿ ಪೂಜೆ ಮಾಡಿಸಿದ್ದಾರೆ. ನೊಣವಿನಕೆರೆ ಅಜ್ಜಯ್ಯನ ನೇತೃತ್ವದಲ್ಲಿ ಪೂಜೆ ಮಾಡಿಸಿದ್ದಾರೆ. ಸಿಎಂ ಡಿ.ಕೆ ಶಿವಕುಮಾರ್ ಆಗಮಿಸುವ ಮುನ್ನವೇ ವಿಧಾನಸೌಧಕ್ಕೆ ಬಂದ ಅಜ್ಜಯ್ಯ, ಕೆಂಗಲ್ ಗೇಟ್ ಮೆಟ್ಟಿಲುಗಳಿಗೆ ಅಕ್ಷತೆ ಪ್ರೋಕ್ಷಣೆ ಮಾಡಿದ್ರು. ಆ ಬಳಿಕ ಸಿಎಂ ಕಚೇರಿಗೆ ತೆರಳಿ ಸಿಎಂ ಕುರ್ಚಿಗೆ ವಿಶೇಷ ಪೂಜೆ ನೆರವೇರಿಸಿದ್ರು.
ಲೋಕಭವನದಲ್ಲಿ ಪ್ರಮಾಣವಚನ ಸಮಾರಂಭ ಮುಗಿಸಿಕೊಂಡು ಸಿಎಂ ಡಿ.ಕೆ ಶಿವಕುಮಾರ್ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ರು.. ಲೋಕಭವನದ ಮುಂಭಾಗ ಕಾರ್ಯಕರ್ತರ ಕೈ ಕುಲುಕಿದ ಡಿಕೆಶಿ, ಕಾರು ಹತ್ತಿದ್ರು. ತಿಮ್ಮಯ್ಯ ಸರ್ಕಲ್ನಿಂದ ವಿಧಾನಸೌಧ ಗೇಟ್ ತನಕ ಸಿಎಂ ಡಿ.ಕೆ ಶಿವಕುಮಾರ್ ತೆರೆದ ವಾಹನದಲ್ಲಿ ಆಗಮಿಸಿದ್ರು. ಆ ಬಳಿಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ರು.. ಬಳಿಕ ಬಸವಣ್ಣ ಹಾಗೂ ಕೆಂಪೇಗೌಡ ಪ್ರತಿಮೆ, ನೆಹರು, ಗಾಂಧಿ ಪ್ರತಿಮೆಗೂ ಪುಷ್ಪಾರ್ಚನೆ ಮಾಡಿದ್ರು. ಈ ವೇಳೆ ಸಚಿವರಾದ ಎಂ.ಬಿ ಪಾಟೀಲ್, ಕೆ.ಹೆಚ್ ಮುನಿಯಪ್ಪ, ಶರಣ ಪ್ರಕಾಶ್ ಪಾಟೀಲ್ ಸಾಥ್ ಕೊಟ್ಟರು.


