The Public Spot
ರಾಜ್ಯ

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು..?

ಹುಬ್ಬಳ್ಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಗಾಳಿ ಹೊಡೆತಕ್ಕೆ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿರುವ ಬೈಕ್​ ಶೋ ರೂಂನ ಗ್ಲಾಸ್​​ ಪುಡಿಪುಡಿಯಾಗಿದೆ. ಬಿರುಗಾಳಿಗೆ ಹಾರಿ ಬಂದ ವಸ್ತು ಬಡಿದು, ಶೋ ರೂಮ್​​ನ ಗ್ಲಾಸ್​​ ಪೀಸ್​ ಪೀಸ್​ ಆಗಿದೆ. ಶೋ ರೂಮ್​ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಓಡಿ ಹೋಗಿದ್ದಾರೆ. ಶಾಸಕ ಅರವಿಂದ ಬೆಲ್ಲದ್​​ಗೆ ಸೇರಿದ ಶೋ ರೂಂ ಮಳೆ ಗಾಳಿಯಿಂದ ಹಾನಿಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಒಂದು ಗಂಟೆ ಕಾಲ ಸುರಿದ ಬಿರುಗಾಳಿ ಮಳೆಗೆ ಮರಗಳು ಧರೆಗೆ ಉರುಳಿ ಅವಾಂತರ ಸೃಷ್ಟಿಯಾಗಿದೆ. ಜೋರಾದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಬೆಳಕೂಡ-ದೋಣವಾಡ ಗ್ರಾಮಗಳ ರಸ್ತೆ ಮಧ್ಯೆ 2 ಬೃಹತ್ ಮರಗಳು ಧರೆಗೆ ಉರುಳಿವೆ. ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ಬೆಳಗಾವಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಬೈಲಹೊಂಗಲ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಬೈಲಹೊಂಗಲ-ಮುನವಳ್ಳಿ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ಮಳೆ ಹೊಡೆತಕ್ಕೆ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಇದ್ರಿಂದ ಬೈಲಹೊಂಗಲದಿಂದ ಮುನವಳ್ಳಿಗೆ ಸಂಪರ್ಕಿಸುವ ರಸ್ತೆ ಸಂಪರ್ಕ ಕಟ್ ಆಗಿದ್ದು, ನೂತನ ಸೇತುವೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮಹಾ ಮಳೆಗೆ ಗದಗ ಜಿಲ್ಲೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ನಗರದ ಗಂಗೀಮಡಿ ಬಡಾವಣೆಯಲ್ಲಿ 70ಕ್ಕೂ ಹೆಚ್ಚು ಶೆಡ್​ಗಳ ಶೀಟ್​ಗಳು ಗಾಳಿಗೆ ಹಾರಿ ಹೋಗಿವೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೆಲ್ಲಾ ನೀರು ಪಾಲಾಗಿದ್ದು, 70 ಕುಟುಂಬಗಳು ಬೀದಿ ಪಾಲಾಗಿದ್ದಾರೆ. ಅಡುಗೆ ಮಾಡಿ ಊಟ ಮಾಡಲು ಆಗದೆ ಚಳಿಯಲ್ಲೇ ವೃದ್ಧರು, ಮಹಿಳೆಯರು, ಮಕ್ಕಳು ಗೋಳಾಡಿದ್ದಾರೆ. ಚುನಾವಣೆ ವೇಳೆ ಕೈಮುಗಿದು ಬರ್ತಾರೆ. ಆದ್ರೀಗ ನಮ್ಮ ಗೋಳು ಕೇಳೋರು ಯಾರಿಲ್ಲ ಅಂತಾ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮಳೆಯ ಅಬ್ಬರದಲ್ಲಿ ಸಿಡಿಲು ಬಡಿದು 7 ತಿಂಗಳ ಗರ್ಭಿಣಿ ಹಳ್ಳಿಕಾರ್ ಹಸು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಸ್ವಾಮಿ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಸಿಡಿಲು ಬಡಿಯುತ್ತಿದ್ದಂತೆ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.‌ ನೊಂದ ರೈತ ಚಂದ್ರಸ್ವಾಮಿ ತನ್ನ ನೆಚ್ಚಿನ ಹಸುವಿನ ಸಾವಿನಿಂದ ಕಂಗಾಲಾಗಿದ್ದಾರೆ.

ಬಾಗಲಕೋಟೆಯಲ್ಲಿ ಸಿಡಿಲು ಬಡಿದು ಎರಡು ಎಮ್ಮೆಗಳು ಸಾವನ್ನಪ್ಪಿವೆ. ತುಳಸಿಗೇರಿ ಗ್ರಾಮದ ಮುತ್ತಪ್ಪ ವಾಲಿಕಾರ ಎಂಬುವರಿಗೆ ಸೇರಿದ ಎಮ್ಮೆಗಳು ಸಾವನ್ನಪ್ಪಿವೆ. ಸಿಡಿಲು ಮರಕ್ಕೆ ಬಡಿದಿದ್ದು, ಮರದ ಬಳಿಯಿದ್ದ ಎಮ್ಮೆಗಳು ಸಾವನ್ನಪ್ಪಿವೆ. ಮರದ ಕೆಳಗೆ ಕಟ್ಟಿದ್ದ ಎಮ್ಮೆಗಳು ಸಾವನ್ನಪ್ಪಿದ್ದು, ಸೂಕ್ತ ಪರಿಹಾರಕ್ಕೆ ರೈತರು ಆಗ್ರಹ ಮಾಡಿದ್ದಾರೆ.

ಹವಾಮಾನ ಇಲಾಖೆ ರಾಜ್ಯದ 7 ಜಿಲ್ಲೆಗಳಿಗೆ ಇವತ್ತು ಆರೆಂಜ್ ಅಲರ್ಟ್ ನೀಡಿದೆ. ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮೇ 21ರವರೆಗೆ ರಾಜ್ಯಾದ್ಯಂತ ಭಾರೀ ಮಳೆ ಆಗಲಿದ್ದು, ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ವಾತಾವರಣ ಇರಲಿದೆ ಎನ್ನಲಾಗಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ.

Related posts

ಹೋಟೆಲ್‌‌ಗಳಿಗೆ ಗ್ಯಾಸ್‌ ಸಿಗ್ತಿಲ್ಲ.. ಆದರೂ ಬಾಗಿಲು ಮುಚ್ಚಲ್ಲ.. ಮುಚ್ಚುತ್ತಿವೆ..

Publicspot

Farmers Suicide; ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆ.. ಒಂದೇ ದಿನ ಇಬ್ಬರು ಸಾವು.. ಆಕ್ರೋಶ

Publicspot

KARNATAKA SCHOOL LEAVE: ಇವತ್ತು 4 ಜಿಲ್ಲೆಗೆ ಮಳೆಯಬ್ಬರ.. 8 ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ

Publicspot

CM ಕೆಲಸ ವರ್ಗಾವಣೆ ಮಾಡೋದಲ್ಲ.. ಹೈಕೋರ್ಟ್​ ಗರಂ ಆಗಿದ್ಯಾಕೆ..?

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin