ಹಾಸನದ ಬೇಲೂರಿನಲ್ಲಿ ಗಣೇಶ ಮೂರ್ತಿ ಮೇಲೆ ಚಪ್ಪಲಿ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಗಣೇಶ ಮೂರ್ತಿ ಮೇಲೆ ಚಪ್ಪಲಿ ಇಟ್ಟಿದ್ದಾರೆ. ಇದರ ಹಿಂದೆ ಬೇರೆ ಯಾರೋ ಇದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆ ಗಣೇಶ ಮೂರ್ತಿ ಬಳಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಮಹಿಳೆ ಮೇಲೆ ಯಾರದಾರೂ ಒತ್ತಡ ಹಾಕಿದ್ದಾರಾ..? ಎಂಬುದರ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಪ್ರಕರಣವನ್ನ ಇತ್ಯರ್ಥ ಪಡಿಸುವಂತೆ ಶಾಸಕ ಹೆಚ್ಕೆ ಸುರೇಶ್ ಆಗ್ರಹಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗಣಪತಿ ಮೂರ್ತಿ ಮೇಲೆ ಚಪ್ಪಲಿ ಇಟ್ಟ ಪ್ರಕರಣ ಸಂಬಂಧ ಸಿಸಿಟಿವಿ ಕ್ಯಾಮೆರಾ ಆಧರಿಸಿ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಸಿಸಿಟಿವಿಯಲ್ಲಿ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ. ಚಪ್ಪಲಿ ಹಾಕಿಕೊಂಡು ದೇಗುಲಕ್ಕೆ ಎಂಟ್ರಿ ಕೊಡುವ ಮಹಿಳೆ, ವಾಪಸ್ ಬರುವಾಗ ಬರಿಗಾಲಿನಲ್ಲಿ ಬಂದಿದ್ದಾಳೆ. ಮೇಲ್ನೋಟಕ್ಕೆ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನಲಾಗ್ತಿದೆ. ದೇವರ ಮೂರ್ತಿ ಮೇಲಿರುವ ಚಪ್ಪಲಿಗೂ ಅಸ್ವಸ್ಥ ಮಹಿಳೆ ಕಾಲಿನ ಚಪ್ಪಲಿಗೂ ಹೊಂದಾಣಿಕೆ ಆಗ್ತಿದೆ. ಹೀಗಾಗಿ ಮಹಿಳೆಯೇ ಚಪ್ಪಲಿ ಇಟ್ಟಿರುವ ಅನುಮಾನದ ಮೇಲೆ ಪೊಲೀಸರು ಬಂಧನ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಿಜೆಪಿ ನಾಯಕ ಸಿ.ಟಿ ರವಿ ಭೇಟಿ ನೀಡಿದ್ದಾರೆ. ಬೇಲೂರು ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ಸಿ.ಟಿ ರವಿ ಕೂಡ ಭಾಗಿಯಾಗಿ, ತಪ್ಪಿತಸ್ಥರನ್ನ ಕೂಡಲೇ ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿರುವ ಸಿ.ಟಿ ರವಿ, ಗಣಪತಿ ಮೇಲೆ ಮಹಿಳೆ ಚಪ್ಪಲಿ ಇಟ್ಟಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ಮಾನಸಿಕ ಅಸ್ವಸ್ಥೆಯೋ ಅಲ್ಲವೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕು. ನಮಗೆ ಕಾಗಕ್ಕ ಗೂಬಕ್ಕ ಕಥೆ ಬೇಡ. ಪೂರ್ತಿ ತಲೆಕೆಟ್ಟವರು ಯಾರು ದೇವಸ್ಥಾನಕ್ಕೆ ಬಂದು ದೇವರಿಗೆ ಚಪ್ಪಲಿ ಇಡಲ್ಲ. ಇದೆಲ್ಲಾ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, ಸಿದ್ದರಾಮಯ್ಯ ಸಿಎಂ ಆದ್ಮೇಲೆ ದಿನನಿತ್ಯ ಈ ರೀತಿ ಘಟನೆಗಳು ನಡೆಯುತ್ತಿದೆ. ಮದ್ದೂರು, ಚಾಮುಂಡೇಶ್ವರಿ ಆಯ್ತು.. ಈಗ ಗಣೇಶನ ಸರದಿ ಶುರುವಾಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.. ಕಾನೂನು ಸುವ್ಯವಸ್ಥೆ ಬಗ್ಗೆ ಕೇಳೋರಿಲ್ಲ. ಯಾರೇ ಸಿಕ್ಕಿ ಹಾಕಿಕೊಂಡರೂ ಮಾನಸಿಕ ಅಸ್ವಸ್ಥರು ಅಂತಾರೆ ಎಂದು ಕಿಡಿಕಾರಿದ್ದಾರೆ.

ಬೇಲೂರಿನ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಶಾಸಕ ಹುಲ್ಲಳ್ಳಿ ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ನೂರಾರು ಹಿಂದೂಪರ ಕಾರ್ಯಕರ್ತರು ರಸ್ತೆ ತಡೆದು ಶೀಘ್ರದಲ್ಲೇ ಸಂಬಂಧಪಟ್ಟವರನ್ನ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇವತ್ತು ಘಟನೆ ಖಂಡಿಸಿ ಸ್ವಯಂಪ್ರೇರಿತ ಬೇಲೂರು ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಬಿಜೆಪಿ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಈಗಾಗಲೇ ಗಣೇಶನ ಮೇಲೆ ಚಪಲಿ ಇಟ್ಟು ಹೋಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬಂಧನ ಮಾಡಲಾಗಿದೆ. ಆದರೂ ಬಿಜೆಪಿ ಜನರನ್ನು ಈ ವಿಚಾರದಲ್ಲಿ ಪ್ರಚೋದನೆ ಮಾಡುತ್ತಿದೆ ಎನ್ನಲಾಗ್ತಿದೆ.


