ಲೋಕಸಭಾ ಚುನಾವಣೆ ವೇಳೆ ಹಲ್ಚೆಲ್ ಎಬ್ಬಿಸಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾಮಕೇಳಿ ಬಗ್ಗೆ ತಿಳಿಯದವರೇ ಇಲ್ಲ. ಪೊಲೀಸ್ ಅಧಿಕಾರಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತೆಯರು, ಮನೆಯಲ್ಲಿ ಕೆಲಸ ಮಾಡುವ ವಯೋವೃದ್ಧ ಮಹಿಳೆಯನ್ನೂ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದು ಮಾತ್ರವಲ್ಲದೆ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿದು ಮೊಬೈಲ್ನಲ್ಲಿ ಸಂಗ್ರಹಿಸಿದ್ದು ಬಹಿರಂಗ ಆಗಿತ್ತು. ಆ ಕೇಸ್ನ ವಿಚಾರಣೆ ನಡೆಸಿದ ಸಿಐಡಿ ಟೀಂ ಕೋರ್ಟ್ನಲ್ಲಿ ಜೀವಾವಧಿ ಶಿಕ್ಷೆ ಆಗುವಂತೆ ಕಾರ್ಯನಿರ್ವಹಣೆ ಮಾಡಿತ್ತು. ಈ ಪ್ರಕರಣದಲ್ಲಿ ಕೆಲಸ ಮಾಡಿದ ಅಧಿಕಾರಿಗಳ ತಂಡಕ್ಕೆ 30 ಲಕ್ಷ ರೂಪಾಯಿ ಹಣವನ್ನು ಸರ್ಕಾರ ಘೋಷಣೆ ಮಾಡಿದೆ.

ಪೊಲೀಸ್ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗದು ಬಹುಮಾನ ಘೊಷಣೆ ಆಗಿದೆ. ಸರ್ಕಾರದಿಂದ ವಿವಿಧ ದರ್ಜೆ ಅಧಿಕಾರಿಗಳು, ಸಿಬ್ಬಂದಿಗೆ ನಗದು ಬಹುಮಾನ ಮಂಜೂರು ಆಗಿದ್ದು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ತಂಡಕ್ಕೂ ಬಹುಮಾನ ಘೋಷಣೆ ಆಗಿದೆ. ಒಟ್ಟು 35 ಲಕ್ಷ ಬಹುಮಾನ ಮಂಜೂರು ಮಾಡಿರುವ ಪೊಲೀಸ್ ಇಲಾಖೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಪರಾಧ ಸಾಬೀತು ಹಿನ್ನೆಲೆಯಲ್ಲಿ ತನಿಖಾ ತಂಡಕ್ಕೆ 25 ಲಕ್ಷ ಬಹುಮಾನ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತನಿಖಾ ತಂಡದದಲ್ಲಿ 30 ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಿದ್ದು ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಎಸ್ಐಟಿ ಮುಖ್ಯಸ್ಥ ಬಿ ಕೆ ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್ಪಿ ಸುಮನ್ ಡಿ ಪೆನ್ನೇಕರ್, ಎಸ್ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್ಗಳಾದ ರಾವ್ ಗಣೇಶ್ ಜನಾರ್ಧನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ ಸಿಬ್ಬಂದಿಗೆ ನಗದು ಬಹುಮಾನ ಸಿಗಲಿದೆ. 30 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗೆ 25 ಲಕ್ಷ ನಗದು ಬಹುಮಾನ ಹಂಚಿಕೆ ಆಗಲಿದೆ.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೊಲೀಸರಿಗೆ ನಗದು ಬಹುಮಾನ ಸಿಕ್ಕಿದೆ. ಅತ್ತ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ, ಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಲು ಮತ್ತು ಬೇರೆ ಕೇಸ್ನಲ್ಲಿ ಜಾಮೀನು ಪಡೆಯಲು ಹರಸಾಹಸ ಮಾಡ್ತಿದ್ದಾರೆ. ಇತ್ತ ಪ್ರಕರಣದಲ್ಲಿ ರಾಜ್ಯ ಸರ್ಕಾರ ದುರುದ್ದೇಶದಿಂದ ಇಷ್ಟೆಲ್ಲಾ ಮಾಡಿತು ಅನ್ನೋ ಆರೋಪವೂ ಇದೆ. ರಾಜಕೀಯ ವೈಷಮ್ಯದಿಂದಲೇ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ತನಗೆ ಬೇಕಾದ ಹಾಗೆ ನಿರ್ವಹಿಸಿತು ಎನ್ನಲಾಗ್ತಿದೆ. ಆದರೂ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದು, ಅಷ್ಟು ಮಾತ್ರವಲ್ಲದೆ ಇಷ್ಟವಿಲ್ಲದ ಮಹಿಳೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದೂ ಸರಿಯಲ್ಲ ಅಲ್ಲವೇ..?


