ಕೋಲಾರ ಜಿಲ್ಲೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೆ.ವೈ ನಂಜೇಗೌಡ ಅವರ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿಲ್ಲ.
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡದ ಸುಪ್ರೀಂಕೋರ್ಟ್ 4 ವಾರದೊಳಗೆ ಮರು ಮತಎಣಿಕೆ ನಡೆಸುವಂತೆ ಸುಪ್ರೀಂಕೋರ್ಟ್ ಅದೇಶ ಮಾಡಿದೆ. ಹೈಕೋರ್ಟ್ ಮರು ಮತಎಣಿಕೆ ಮಾಡಬೇಕು ಹಾಗೂ ಶಾಸಕ ಸ್ಥಾನ ಅಸಿಂಧು ಎಂದು ಆದೇಶವನ್ನು ಪ್ರಶ್ನಿಸಿ ಕೆ.ವೈ ನಂಜೇಗೌಡ ಮೇಲ್ಮನವಿ ಸಲ್ಲಿಸಿದ್ದರು.
ಕೋಲಾರದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ರೀಕೌಟಿಂಗ್ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಸುಪ್ರೀಂಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆದೇಶ ನೀಡಿದೆ.

4 ವಾರದಲ್ಲಿ ರೀ-ಕೌಟಿಂಗ್ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಲು ಸೂಚನೆ ಕೊಟ್ಟಿರುವ ಸುಪ್ರೀಂಕೋರ್ಟ್, ನಂಜೇಗೌಡ ಶಾಸಕ ಸ್ಥಾನವನ್ನು ಅಸಿಂಧು ಮಾಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಹೈಕೋರ್ಟ್ನಲ್ಲಿ 2023ರ ಚುನಾವಣೆ ಬಳಿಕ ಮಾಜಿ ಶಾಸಕ ಮಂಜುನಾಥಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು.
2023ರ ವಿಧಾನಸಭೆ ಚುನಾವಣೆ ಕೌಂಟಿಂಗ್ನಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಮಂಜುನಾಥಗೌಡ ಅರ್ಜಿ ವಿಚಾರಣೆ ನಡೆಸಿ ಮರು ಎಣಿಕೆಗೆ ಆದೇಶಿಸಿದ್ದ ರಾಜ್ಯ ಹೈಕೋರ್ಟ್, ಮಾಲೂರು ಶಾಸಕ ಕೆ.ವೈ ನಂಜೇಗೌಡ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ, 4 ವಾರ ತಡೆಯಾಜ್ಞೆ ನೀಡಿತ್ತು. ಇದೀಗ ಅಸಿಂಧು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಆದರೆ ರೀಕೌಟಿಂಗ್ ಮಾಡುವಂತೆಯೂ ಸುಪ್ರೀಂಕೋರ್ಟ್ ಆದೇಶ ಮಾಡಿದೆ.
ಮಾಲೂರು ಶಾಸಕ ನಂಜೇಗೌಡ ಅಸಿಂಧುಗೆ ಸುಪ್ರೀಂಕೋರ್ಟ್ ತಡೆ ನೀಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸುಪ್ರೀಂಕೋರ್ಟ್ ಆದೇಶ ಏನು ಅಂತ ಓದಿಲ್ಲ. ಈಗ ನಮ್ಮ ಪಿಎ ಹೇಳಿದ್ರು. ಸುಪ್ರೀಂಕೋರ್ಟ್ ರೀ ಕೌಂಟಿಂಗ್ ಮಾಡೋಕೆ ಹೇಳಿದೆ. ಮುಚ್ಚಿದ ಲಕೋಟೆಯಲ್ಲಿ ಕೊಡಿ ಅಂತನೂ ಹೇಳಿದೆ. ಕಾನೂನು ಪ್ರಕಾರ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದಿದ್ದಾರೆ.


