ಸ್ಯಾಂಡಲ್ವುಡ್ನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದರೂ ಕೂಡ ಹೊರಗಡೆ ಸಾಕಷ್ಟು ವಿಚಾರಗಳು ಹೊರಕ್ಕೆ ಬರುತ್ತಲೇ ಇವೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸ್ರು ಪವಿತ್ರಾಗೌಡ ಹಾಗೂ ದರ್ಶನ್ ಅವರನ್ನು ಸ್ನೇಹಿತರು ಎಂದು ಉಲ್ಲೇಖ ಮಾಡಿದ್ದರು. ಇದೀಗ ಹೊಸ ಸುದ್ದಿ ಹೊರಬಿದ್ದಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆ ಆಗಿದ್ದಾರೆ ಅನ್ನೋ ಬಗ್ಗೆ ಅನುಮಾನ ಹುಟ್ಟಿಕೊಂಡಿವೆ. ದರ್ಶನ್ ಹಾಗೂ ಪವಿತ್ರಾ ಗೌಡ ಮದ್ವೆಯಾಗಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿವೆ.

ದರ್ಶನ್ ಹಾಗೂ ಪವಿತ್ರಾ ನಡುವಿನ ಸ್ನೇಹ ಸಂಬಂಧಕ್ಕೆ ದಶಕಗಳೇ ಆಗಿವೆ. ಸ್ನೇಹ ಅನುರಾಗ ಶುರುವಾಗಿ ದಶಕ ಕಳೆದಿದ್ದು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ್ಮೇಲೆ ದರ್ಶನ್ ಹಾಗೂ ಪವಿತ್ರಾ ನಡುವಿನ ಸಂಬಂಧದ ಬಗ್ಗೆ ನೂರಾರು ರೀತಿಯಲ್ಲಿ ಚರ್ಚೆ ಆಗಿದ್ದವು. ಎಲ್ಲಾ ನೆನಪುಗಳು ಪರಪ್ಪನ ಅಗ್ರಹಾರ ಜೈಲು ಸೇರ್ಕೊಂಡಿರುವ ಈ ಹೊತ್ತಿನಲ್ಲಿ ಇವ್ರಿಬ್ಬರ ನಡುವಿನ ರಹಸ್ಯ ಕಹಾನಿ ತೆರೆದುಕೊಂಡಿದೆ. ಈ ಫೋಟೋಗಳನ್ನ ಏಳೆಂಟು ವರ್ಷಗಳ ಹಿಂದೆಯೇ ತೆಗೆಸಿಕೊಂಡಿದ್ದಾರೆ. ಬಿಳಿ ಪಂಚೆ ಬಿಳಿ ಅಂಗಿಯಲ್ಲಿ ದರ್ಶನ್ ಮಿಂಚಿದ್ರೆ, ರೇಷ್ಮೆ ಸೀರೆಯಲ್ಲಿ ಪವಿತ್ರಾ ಗೌಡ ಮದುವಣಗಿತ್ತಿಯಂತೆ ಮಿಂಚ್ತಿದ್ದಾರೆ. ಕುತ್ತಿಗೆಯಲ್ಲಿ ಮಾಂಗಲ್ಯವೂ ಎದ್ದು ಕಾಣ್ತಿದೆ. ದರ್ಶನ್ ಹಾಗೂ ಪವಿತ್ರಾ ಮದ್ವೆ ಆಗಿದ್ದಾರೆ ಅನ್ನೋ ಅಂತೆ ಕಂತೆಗೆ ರೆಕ್ಕೆ ಬಂದಂತೆ ಆಗಿದೆ. ದರ್ಶನ್ ಫ್ಯಾಮಿಲಿ ಕಡೆಯಿಂದ ಅಥವಾ ಪವಿತ್ರಾ ಕುಟುಂಬದ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.

ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಡಿ ಗ್ಯಾಂಗ್ಗೆ ಅಸಲಿ ಸಂಕಷ್ಟ ಎದುರಾಗಿದೆ. ಎಲ್ಲಾ ಕೊಲೆ ಆರೋಪಿಗಳ ವಿರುದ್ಧ ದೋಷಾರೋಪ ನಿಗಧಿ ಮಾಡಲು ದಿನಾಂಕ ಫಿಕ್ಸ್ ಮಾಡಲಾಗಿದೆ. ವಾರದ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶುಕ್ರವಾರ (ನಿನ್ನೆ) ಚಾರ್ಜ್ ಫ್ರೇಮ್ ಮಾಡುವ ಬಗ್ಗೆ ಸೂಚನೆ ನೀಡಿತ್ತು. ಆದರೆ 16 ಮತ್ತು 17ನೇ ಆರೋಪಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಮಾಡಲು ಸಾಧ್ಯವಾಗಲಿಲ್ಲ. ಆ ಬಳಿಕ ಗರಂ ಆದ ಜಡ್ಜ್ ನವೆಂಬರ್ 3ರಂದು ಚಾರ್ಜ್ ಫ್ರೇಮ್ ಮಾಡುತ್ತೇವೆ. ಒಂದು ವೇಳೆ ಕೋರ್ಟ್ಗೆ ಆರೋಪಿಗಳು ಗೈರು ಹಾಜರಾದರೆ ಜಾಮೀನು ರಹಿತ ವಾರೆಂಟ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜೈಲಲ್ಲಿರೋ ಎಲ್ಲಾ ಆರೋಪಿಗಳ ಭೇಟಿಗೆ ಅವಕಾಶ ಕೊಡ್ಬೇಕು ಅಂತಾ ದರ್ಶನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಆರೋಪಿಗಳು ದೋಷಾರೋಪ ಒಪ್ಪಿಕೊಂಡರೆ ಸಮಸ್ಯೆ ಆಗುತ್ತದೆ. ಹೀಗಾಗಿ ಜೈಲಲ್ಲಿರೋ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಭೇಟಿಗೆ ಅವಕಾಶ ಮಾಡಿಕೊಡಬೇಕು ಅಂತಾ ವಕೀಲರು ಮನವಿ ಮಾಡಿದ್ದಾರೆ. ಹೀಗಾಗಿ ವಕೀಲರು ಬಂದಾಗ ಜೈಲಾಧಿಕಾರಿಗಳು ಭೇಟಿಗೆ ಅವಕಾಶ ಕೊಡಬೇಕು ಅಂತಾ ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಎಲ್ಲಾ ಆರೋಪಿಗಳು ಹಾಜರಾಗದಿದ್ರೆ ಚಾರ್ಜ್ ಫ್ರೇಮ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲದಿದ್ರೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡೋದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ವಿಳಂಬ ಮಾಡುವ ಅವಕಾಶವೂ ಇಲ್ಲದಂತಾಗಿದೆ.


