ಪರಪ್ಪನ ಅಗ್ರಹಾರ ಜೈಲು ನಮ್ಮ ಕರ್ನಾಟದಲ್ಲೇ ಅತ್ಯಂತ ಸುಸಜ್ಜಿತ ಕಾರಾಗೃಹಗಳಲ್ಲಿ ಒಂದು. ಇಲ್ಲಿನ ವ್ಯವಸ್ಥೆ ಸಂಪೂರ್ಣ ತಾಂತ್ರಿಕತೆಯಿಂದ ಕೂಡಿದ್ದು, ಅಪರಾಧಿಗಳು ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಒಂದು ಸೂಜಿಮೊನೆಯೂ ಜೈಲು ಒಳಗೆ ಹೋಗಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಜೈಲಿನಲ್ಲಿ ತಪಾಸಣೆ ಇರುತ್ತದೆ. ಆದರೆ ಜೈಲಿನಲ್ಲಿ ನಡೆಯುವ ಕರ್ಮಕಾಂಡಗಳನ್ನು ನೋಡಿದಾಗ ಇದನ್ನು ಜೈಲು ಎನ್ನುವುದು ಯಾಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

2024ರ ಜೂನ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿತ್ತು. ಅಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಲಾಗಿತ್ತು. ಕೊಲೆ ಆರೋಪಿ ದರ್ಶನ್, ರೌಡಿಶೀಟರ್ಗಳ ಜೊತೆ ಕುಳಿತು ಬಿಂದಾಸ್ ಆಗಿ ಕೈಯಲ್ಲಿ ಸಿಗರೇಟ್ ಹಿಡಿದು ಟೀ ಕುಡಿಯುತ್ತಾ ಕುಳಿತಿದ್ದ ಫೋಟೋ ವೈರಲ್ ಆಗಿತ್ತು. ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದ ದರ್ಶನ್, ಬರ್ತ್ ಡೇ ವಿಶ್ ಮಾಡಿದ್ದ ದೃಶ್ಯ ಕೂಡ ವೈರಲ್ ಆಗಿತ್ತು. ಇದೇ ವಿಚಾರದಲ್ಲಿ ಸುಪ್ರೀಂಕೋರ್ಟ್, ಜೈಲು ಅಧಿಕಾರಿಗಳಿಗೆ ಛೀಮಾರಿ ಕೂಡ ಹಾಕಿತ್ತು. ದೇಶದ ಯಾವುದೇ ಜೈಲುಗಳಲ್ಲೂ ಕೈದಿಗಳಿಗೆ ರಾಜಾತಿಥ್ಯ ಕೊಟ್ಟರೆ ಬಂಧೀಖಾನೆ ಮುಖ್ಯಸ್ಥರನ್ನೇ ಕಟಕಟೆಗೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

ಕಾರಾಗೃಹ ಇಲಾಖೆ ಸಚಿವರನ್ನೂ ಕೋರ್ಟ್ ಕಟಕಟೆಗೆ ಕರೆಸಿ ಸಂವಿಧಾನದ ಪಾಠ ಮಾಡ್ಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಆಗಿದ್ದರೂ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ನೀಚ ಕೃತ್ಯ ಮಾತ್ರ ಬದಲಾಗಿಲ್ಲ. ಸುಪ್ರೀಂ ಕೋರ್ಟ್ ಎಚ್ಚರಿಕೆ ನಡುವೆಯೂ ಜೈಲು ಅಧಿಕಾರಿಗಳು ಕೈದಿಗಳಿಗೆ ಸುಖದ ಸುಪ್ಪತ್ತಿಗೆ ವಾತಾವರಣ ಸೃಷ್ಟಿಸಿಕೊಟ್ಟಿದ್ದಾರೆ. ಹಣ ಪಡೆದು ಸಕಲ ಸೌಲಭ್ಯವನ್ನೂ ನೀಡಿರೋದು ದೃಶ್ಯ ಸಮೇತ ಬಯಲಾಗಿದೆ. ಭಯೋತ್ಪಾಧಕ, ಅತ್ಯಾಚಾರಿ, ಸ್ಮಗ್ಲರ್ಗಳಿಗೆ ಜೈಲಿನಲ್ಲಿ ನೀಡಿರುವ ಐಶಾರಾಮಿ ವ್ಯವಸ್ಥೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜುಹಾದ್ ಹಮೀದ್ ಶಕೀಲ್ ಮನ್ನಾ ಎಂಬಾತ ಮೋಸ್ಟ್ ವಾಂಟೆಡ್ ಐಸಿಸ್ ಉಗ್ರ. ಈತ ಯುವಕರನ್ನ ಐಸಿಸ್ಗೆ ನೇಮಕಾತಿ ಮಾಡ್ತಿದ್ದ ಆರೋಪದಲ್ಲಿ 3 ವರ್ಷಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ. NIA ವಿಚಾರಾಣಾಧೀನ ಕೈದಿಯಾಗಿರೋ ಈತನಿಗೆ ಜೈಲಲ್ಲಿ ಸರ್ವ ವ್ಯವಸ್ಥೆ ಆಗಿದೆ. ಕೈಯಲ್ಲಿ ಆ್ಯಂಡ್ರಾಯ್ಡ್ ಮೊಬೈಲ್, ಕೂತಲ್ಲಿಯೇ ಕಾಫಿ, ಟೀ ಎಲ್ಲವೂ ಬರುತ್ತದೆ. ಜೈಲಿನಲ್ಲಿ ಐಷಾರಾಮಿ ಜೀವನಕ್ಕೆ ವ್ಯವಸ್ಥೆ ಆಗಿದೆ.

ಇನ್ನೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿಗೂ ಪರಪ್ಪನ ಅಗ್ರಹಾರ ಜೈಲು ಸ್ವರ್ಗ ಆಗಿದೆ. 1996ರಿಂದ 2022ರವರೆಗೆ ಉಮೇಶ್ ರೆಡ್ಡಿ, 20 ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅವರಲ್ಲಿ 18 ಮಹಿಳೆಯರನ್ನು ಕೊಲೆ ಮಾಡಿ ಜೈಲಿದ್ದಾನೆ.. 30 ವರ್ಷಗಳ ಕಠಿಣ ಶಿಕ್ಷೆಯನ್ನೂ ಕೋರ್ಟ್ ವಿಧಿಸಿದೆ. ಈತ ಇರುವ ಸೆಲ್ನಲ್ಲೂ ಸಕಲ ಸೌಲಭ್ಯ ಮಾಡಿಕೊಡಲಾಗಿದೆ. ಉಮೇಶ್ ರೆಡ್ಡಿ ಆ್ಯಂಡ್ರಾಯ್ಡ್ ಮೊಬೈಲ್ ಫೋನ್, ಒಂದು ಕೀ ಪ್ಯಾಡ್ ಫೋನ್, ಟಿವಿ, ಪ್ರತ್ಯೇಕ ಅಡುಗೆಗೆ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾನೆ.
ಇನ್ನು ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ದೇಶದಲ್ಲಿ ಬಂಧನ ಆಗಿರುವ ಆಕೆಯ ಪ್ರಿಯಕರ ನಟ ಕಮ್ ಬ್ಯುಸಿನೆಸ್ ಮ್ಯಾನ್ ತರುಣ್ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ತೆಲುಗು ಸಿನಿಮಾ ನಟ ಸಹ ಆಗಿರುವ ತರುಣ್, ರನ್ಯಾಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಜೈಲಿಗೆ ಕಳಿಸಿದ್ದರು. ಆದ್ರೆ ಈತನಿಗೆ ಜೈಲು ಜೈಲಾಗಿಲ್ಲ.. ಬದಲಿಗೆ ಫೈವ್ ಸ್ಟಾರ್ ಹೋಟೆಲ್ನಂತಿದೆ. ಕೈನಲ್ಲಿ ಮೊಬೈಲ್ ಜೊತೆಗೆ ತನ್ನ ಸೆಲ್ನಲ್ಲಿ ಟಿವಿ ನೋಡ್ಕೊಂಡು ಆರಾಮಾಗಿದ್ದಾನೆ.


