ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿಯನ್ನು ಪೊಲೀಸ್ರು ಬಂಧನ ಮಾಡಿದ್ದರು. ಎವಿಆರ್ ಗ್ರೂಪ್ ಮಾಲೀಕನಾಗಿರೋ ಅರವಿಂದ್ ರೆಡ್ಡಿಯನ್ನು ಎಸಿಪಿ ಚಂದನ್ ಮತ್ತು ತಂಡ ಅರೆಸ್ಟ್ ಮಾಡಿ ಕೋರ್ಟ್ ಎದುರು ಹಾಜರು ಮಾಡಿತ್ತು. 2021ರಲ್ಲಿ ಪರಿಚಯವಾಗಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. ಲೈಂಗಿಕ ಕಿರುಕುಳ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐದು ದಿನದ ಹಿಂದೆ ಗೋವಿಂದರಾಜನಗರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು. ಆರೋಪಿ ಬಂಧನಕ್ಕೆ ಎಸಿಪಿ ಚಂದನ್ ಮತ್ತು ಸುಬ್ರಹ್ಮಣಿ ತಂಡ ರಚಿಸಲಾಗಿತ್ತು. ಶ್ರೀಲಂಕದಿಂದ ಬೆಂಗಳೂರಿಗೆ ಬರುವಾಗ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಆರೋಪಿ ದೇಶದಲ್ಲಿ ಇಲ್ಲದ ಕಾರಣಕ್ಕೆ ಬಂಧನ ಮಾಡಲು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದ ಪೊಲೀಸರು, ಶನಿವಾರ ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಿದ್ದರು.

ರಿಯಲ್ ಎಸ್ಟೇಟ್ ಉದ್ಯಮಿ ಯಾಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕರೂ ಹೌದು. ಜೊತೆಗೆ ಚಲನಚಿತ್ರ ನಿರ್ಮಾಪಕ ಕೂಡ ಆಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ, ಸಿನಿಮಾ ಇಂಡಸ್ಟ್ರಿ ಜೊತೆಗೆ ಹೆಚ್ಚಾಗಿ ಗುರ್ತಿಸಿಕೊಂಡಿದ್ದರು. ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು. ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆ ನಡೆದ ಟೂರ್ನಮೆಂಟ್ನ ಪ್ರಮುಖ ಸ್ಪಾನ್ಸರ್ ಆಗಿದ್ದರು. 9 ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ಕೊಡಗಿನ ನಟಿಗೆ 2021 ನಟಿಗೆ ಪರಿಚಯವಾಗಿದ್ದ ಅರವಿಂದ್ ರೆಡ್ಡಿ, ಶ್ರೀಲಂಕದ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು. ಮಾರ್ಚ್ 2022 ರಂದು ಅತಿಥಿ ಆಗಿ ಭಾಗವಹಿಸಿದ್ದ ನಟಿ ಜೊತೆಗೆ ಅರವಿಂದ್ ವೆಂಕಟೇಶ್ ರೆಡ್ಡಿ ಸ್ನೇಹ ಆತ್ಮೀಯತೆಗೆ ತಿರುಗಿತ್ತು.

ಶ್ರೀಲಂಕಾ ಕಾರ್ಯಕ್ರಮ ಮುಗಿಸಿ ಬಂದ ಬಳಿಕ ಪರಸ್ಪರ ಮಾತನಾಡಲು ಆರಂಭಿಸಿದ್ದ ಜೋಡಿ, ಆ ಬಳಿಕ ಮೂರ್ನಾಲ್ಕು ತಿಂಗಳಲ್ಲಿ ನಟಿ ಮೇಲೆ ಕಾಳಜಿ, ಪ್ರೀತಿ ತೋರಿಸಿದ್ರಂತೆ. 2022ರ ಆಗಸ್ಟ್ನಲ್ಲಿ ನಟಿ ಜೊತೆಗೆ ಅಂತರ ಕಾಯ್ದುಕೊಂಡಿದ್ರಂತೆ ಅರವಿಂದ್ ರೆಡ್ಡಿ. ಅರವಿಂದ್ ರೆಡ್ಡಿಯ ಮಾನಸಿಕ ಸ್ಥಿತಿ, ಕುಡಿತದ ಚಟದ ಬಗ್ಗೆ ನಟಿಗೆ ಅರಿವು ಆಗಿತ್ತಂತೆ.. ನಂತರ ಜನವರಿ 2023 ರಲ್ಲಿ ನಟಿ ಭೇಟಿ ಮಾಡಲು ಮುಂದಾಗಿದ್ದ ಅರವಿಂದ್ ರೆಡ್ಡಿಯನ್ನು ಭೇಟಿ ಮಾಡದೆ ನಟಿ ಅಂತರ ಕಾಯ್ದುಕೊಂಡಿದ್ರಂತೆ. ಆದರೆ ಬಲವಂತವಾಗಿ ನಟಿ ಹಿಂದೆ ಓಡಾಡುವುದು, ಲೋಕೇಷನ್ ಟ್ರಾಕ್ ಮಾಡುವುದು. ಇನ್ಸ್ಟಾಗ್ರಾಂನಲ್ಲಿ ನಟಿಯ ಮಾರ್ಫ್ ಮಾಡಿದ ಫೋಟೊ ಪೋಸ್ಟ್ ಮಾಡೋದು. ಈ ಮೂಲಕ ನಟಿಗೆ ಅವಮಾನ ಮಾಡಲು ಯತ್ನ ಮಾಡಿದ ಆರೋಪ ಇದೆ. ಮನೆ ಬಳಿ ಹುಡುಗರನ್ನು ಕಳುಹಿಸಿ ನಟಿಯ ತಂದೆ-ತಾಯಿಗೆ ಬೆರದರಿಕೆ ಹಾಕೋದು, ತಮ್ಮನನ್ನ ಕೊಲೆ ಮಾಡೋದಾಗಿ ಬೆದರಿಸಿದ್ದ ಆರೋಪವೂ ಇದೆ.

ತನ್ನ ಜೊತೆಗೆ ಸಂಬಂಧ ಇಟ್ಟುಕೊಳ್ಳುವಂತೆ ಕಿರುಕುಳ ಕೊಡುವ ಕೆಲಸ ಮಾಡಿದ್ರಂತೆ ಅರವಿಂದ್ ರೆಡ್ಡಿ. 2024ರ ಏಪ್ರಿಲ್ ತಿಂಗಳಿನಲ್ಲಿ ಅರವಿಂದ ರೆಡ್ಡಿ ಕಿರುಕುಳ ಹೆಚ್ಚಾಗಿ, ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಒದ್ದಾಡಿದ್ದ ನಟಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೂ ಯತ್ನಿಸಿದ್ರಂತೆ. ಆ ನಂತರ ಆರೋಪಿ ಅರವಿಂದ್ ಸ್ನೇಹಿತ ಶೈಲೇಶ್ ಮೂಲಕ ಜೆ.ಪಿ.ನಗರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಪಟ್ಟಿದ್ರಂತೆ. ಅಲ್ಲಿಗೂ ಬಂದು ಕಾಡಿದಾಗ, ನನ್ನ ಬಿಟ್ಟು ಬಿಡು, ನಮ್ಮಿಬ್ಬರ ಸಂಬಂಧ ಮುಂದುವರಿಸುವುದು ಕಷ್ಟ ಎಂದು ಹೇಳಿದ್ದರಂತೆ. ಆಗ ಬಟ್ಟೆಯನ್ನು ಹರಿದು ಅರೆಬೆತ್ತಲೆ ಮಾಡಿ ಹಿಂಸೆ ಕೊಟ್ಟ ಆರೋಪವೂ ಇದೆ. ಒಂದು ವಾರದ ಬಳಿಕ ನಾನು ನೀಡಿದ್ದ ವಸ್ತುಗಳನ್ನು ವಾಪಸ್ಸು ಕೊಡುವಂತೆ ಹೇಳಿದ್ದ ಆರೋಪಿ. ಜೊತೆಗೆ ಒಂದು ಕೋಟಿ ಹಣ ಕೊಡುವಂತೆಯೂ ಡಿಮ್ಯಾಂಡ್ ಮಾಡಿದ್ರಂತೆ. ಇದೆಲ್ಲದರ ಬಗ್ಗೆ ಜೂನ್ 14, 2024 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದ ನಟಿ, ತನಗೆ ಆಗುತ್ತಿದ್ದ ಕಿರುಕುಳದ ಬಗ್ಗೆ ದೂರು ಮಾಹಿತಿ ನೀಡಿದ್ರಂತೆ.

ಗೋವಿಂದಾರಜನಗರ ಠಾಣೆ ಇನ್ಸ್ ಪೆಕ್ಟರ್ ಸುಬ್ರಮಣಿಯಿಂದ ಆರೋಪಿಯನ್ನು ವಿಚಾರಣೆ ಮಾಡಿದಾಗ ನಟಿ ಜೊತೆಗಿನ ಸಂಬಂಧದ ಬಗ್ಗೆ ಆರೋಪಿ ಅರವಿಂದ್ ರೆಡ್ಡಿ ಹೇಳಿಕೆ ಕೊಟ್ಟಿದ್ದು, ನಟಿಗಾಗಿ ಮೂರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇನೆ. ಆಕೆಗೆ ಸೈಟ್, ಮನೆ ಕೊಡಿಸಿದ್ದೇನೆ. ದುಬಾರಿ ಪೋರ್ಷೆ ಕಾರನ್ನು ಗಿಫ್ಟ್ ಮಾಡಿದ್ದೇನೆ. ನನ್ನನ್ನು ಬಿಟ್ಟು ಆಕೆ ಬೇರೆ ವ್ಯಕ್ತಿ ಜೊತೆಗೆ ಕಾಣಿಕೊಳ್ಳುತ್ತಿದ್ದಳು. ಹೀಗಾಗಿ ಅದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಕೇಸ್ ಮಾಡಿರೋದಾಗಿ ನಟಿ ಮೇಲೆ ಆರೋಪ ಹೊರಿಸಿದ್ದನು. ಆ ಬಳಿಕ ಕೋರ್ಟ್ಗೆ ಹಾಜರು ಮಾಡಿದಾಗ ಕೋರ್ಟ್ನಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ಜಾಮೀನು ಸಿಕ್ಕಿದೆ. ಸ್ಟೇಷನ್ ಬೇಲ್ ಕೊಡುವಂತಹ ಕೇಸ್ನಲ್ಲಿ ಪೊಲೀಸರು ಬಂಧಿಸಿದರು ಎಂದು ಅರವಿಂದ್ ರೆಡ್ಡಿ ಬೇಸರ ಹೊರ ಹಾಕಿದ್ದಾರೆ.


