ಉತ್ತರ ಪ್ರದೇಶ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿಯ ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ನವೆಂಬರ್ 25ರಂದು ಅಂದ್ರೆ ನಾಳೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಐತಿಹಾಸ ಕ್ಷಣಕ್ಕೆ ಸಾಕ್ಷಿಯಾಗಲು ಸ್ವತಃ ಪ್ರಧಾನಿ ಆಗಮಿಸುತ್ತಿದ್ದು, ಈಗಾಗಲೇ ಬಿಗಿ ಬಂದೋಬಸ್ತ್ ಮಾಡಲಾಗ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಸ್ಥಗಿತ ಮಾಡಿದ್ದು, SPG ಟೀಂ ರಾಮಭೂಮಿಗೆ ಎಂಟ್ರಿ ಆಗಿದ್ದು, ಪ್ರತಿಯೊಂದು ಚಟುವಟಿಕೆ ಮೇಲೆ ನಿಗಾ ವಹಿಸಿದೆ. 191 ಅಡಿ ಎತ್ತರದಲ್ಲಿ ಕೇಸರಿ ಧ್ವಜಾರೋಹಣ ಮಾಡಲಾಗುತ್ತದೆ. ರಾಮಮಂದಿರ ಸಂಪೂರ್ಣ ಆಗಿರುವ ಸಂಭ್ರಮದಲ್ಲಿರುವ ಉತ್ತರ ಪ್ರದೇಶ ಸರ್ಕಾರ, ಕಿಂಚಿತ್ತೂ ಸಂಭ್ರಮಕ್ಕೆ ಕೊರತೆ ಆಗದಂತೆ ಕಾರ್ಯಕ್ರಮ ರೂಪಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜೊತೆಗೆ ಕೈ ಜೋಡಿಸಿದೆ.

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ರಾಮನ ಭೂಮಿಯಲ್ಲಿ ಸಿದ್ಧತೆಗಳ ಪರಿಶೀಲನೆ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಬೀದಿ ಬೀದಿಯಲ್ಲೂ ಬ್ಯಾರಿಕೇಡ್ ಹಾಕಿ ಭದ್ರತೆಯನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಅಯೋಧ್ಯೆಯಲ್ಲಿ ಸೇನಾ ಹೆಲಿಕಾಪ್ಟರ್ಗಳ ಗಸ್ತು ಶುರುವಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಅಯೋಧ್ಯೆ ರಸ್ತೆಗಳಲ್ಲಿ ಹೂ ಕುಂಡಗಳ ಅಳವಡಿಕೆ ಮಾಡಲಾಗಿದೆ. ನವೆಂಬರ್ 24, 25ರಂದು ಬುಕ್ಕಿಂಗ್ ಆಗಿದ್ದ ಎಲ್ಲಾ ಅಡ್ವಾನ್ಸ್ ಬುಕ್ಕಿಂಗ್ ರದ್ದು ಮಾಡಲಾಗಿದೆ.
ಕಳೆದ ಬಾರಿ ದ್ರೌಪದಿ ಮುರ್ಮು ಅವರನ್ನು ಆಹ್ವಾನ ಮಾಡಿರಲಿಲ್ಲ, ಜಾತಿಕಾರಣಕ್ಕೆ ಅನ್ನೋ ಆರೋಪವೂ ಕೇಳಿ ಬಂದಿತ್ತು. ಆದರೆ ಈ ಬಾರಿ ಬೃಹತ್ ಕಾರ್ಯಕ್ರಮಕ್ಕೆ 7 ಸಾವಿರ ಜನ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಹಿಂದುಳಿದ ವರ್ಗದ ಜನರನ್ನು ಈ ಬಾರಿ ಆಹ್ವಾನ ಮಾಡುವ ಮೂಲಕ ಸಮಾನತೆ ಸಂದೇಶ ಸಾರಿದ್ದ ರಾಮನ ಭೂಮಿ ಸಮಾನತೆಗೆ ಸಾಕ್ಷಿ ಆಗಲಿದೆ. ತೃತೀಯ ಲಿಂಗಿಗಳು, ದಲಿತರು, ಅಘೋರಿ ಸಮುದಾಯಕ್ಕೂ ಆಹ್ವಾನ ಕೊಡಲಾಗಿದೆ ಅನ್ನೋದು ವಿಶೇಷ. ಅಯೋಧ್ಯೆಯಲ್ಲಿ ಕಳೆದ ವರ್ಷ ಜನವರಿ 22ರಂದು ರಾಮ್ಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೀಗ ಇಡೀ ದೇವಸ್ಥಾನ ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಭಗವಾನ್ ರಾಮನ ಕಣ್ತುಂಬಿಕೊಳ್ಳಲು ಕೋಟ್ಯಂತರ ಕಣ್ಗಳು ಕಾತುರರಾಗಿವೆ..

ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸಾಕೇತ್ ಕಾಲೇಜು ಬಳಿಯಿಂದ ರಾಮ ಜನ್ಮಭೂಮಿ ತನಕ ತೆರೆದ ವಾಹನದಲ್ಲಿ ಱಲಿ ನಡೆಸಲಿದ್ದಾರೆ. ಆ ಬಳಿಕ ಅಭಿಜಿತ್ ಮುಹೂರ್ತದಲ್ಲಿ ನಮೋ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಶ್ರೀರಾಮ ಮತ್ತು ಸೀತಾದೇವಿಯ ವಿವಾಹ ನಡೆದಿತ್ತು ಎನ್ನುವ ಕಾರಣಕ್ಕೆ ಅಭಿಜಿತ್ ಮುಹೂರ್ತ ನಿಗದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಅಯೋಧ್ಯೆಗೆ ಬಂದಿಳಿಯುತ್ತಿದ್ದು, ಎಲ್ಲರನ್ನೂ ಸ್ವಾಗತಿಸಲು ರಾಜಬೀದಿಯಲ್ಲಿ ಪುಷ್ಪಗಳು ವಿವಿಧ ಗಿಡಗಳನ್ನಿಟ್ಟು ಸಿಂಗರಿಸಲಾಗ್ತಿದೆ. ಅಯೋಧ್ಯೆಯ ಪ್ರತಿಯೊಂದು ಬೀದಿಗಳೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗ್ತಿದ್ದು, ಹಿಂದೂಗಳ ಆರಾಧ್ಯ ದೈವ ರಾಮನ ರಾಜ್ಯ ಝಗಮಗಿಸುತ್ತಿದೆ.



