ಬಳ್ಳಾರಿಯಲ್ಲಿ ಹೊಸ ವರ್ಷದ ದಿನ ನಡೆದ ಗಲಾಟೆ ವಿಚಾರದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಗಲಾಟೆ ನಡೆದಿತ್ತು. ಐಜಿಪಿ ವರ್ತಿಕಾ ಕಟಿಯಾರ್ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಘಟನೆಯನ್ನು ತಹಬದಿಗೆ ತರಲು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ವರದಿ ನೀಡಿದ ಬಳಿಕ ಸರ್ಕಾರ ಅಮಾನತು ಮಾಡಿದೆ. ಸರ್ಕಾರ ಈ ನಿರ್ಧಾರ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಈ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಕರ್ತವ್ಯ ಲೋಪ ಆಗಿದೆ. ಹೀಗಾಗಿ ಅಮಾನತು ಮಾಡಿದ್ದೇವೆ ಎಂದಿದ್ದಾರೆ.
ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಸಕ ನಾ.ರಾ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಆಗಿದೆ. ಈ ಘಟನೆಯಲ್ಲಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಹೊಣೆಗಾರಿಕೆ ಮಾಡಿ ಅಮಾನತು ಆದೇಶ ಮಾಡಿದ್ದು ಸರಿಯಲ್ಲ ಎನ್ನುವ ವಾದ ಕೇಳಿ ಬರ್ತಿದೆ. ಐಜಿ ವರ್ತಿಕಾ ಕಟಿಯಾರ್ ಹಾಗೂ ಡಿಜಿಪಿ ಸಲೀಂ ಆಹಮದ್ ನಡೆ ಬಗ್ಗೆ ಹಲವು ಐಪಿಎಸ್ ಅಧಿಕಾರಿಗಳು ಅಸಮಾಧಾನ ತೋಡಿಕೊಂಡಿದ್ದಾರೆ. ಆದರೆ ಸರ್ಕಾರಕ್ಕೆ ಯಹಾವಾಗಲೂ ಬೀಸುವ ದೊಣ್ಣೆಯಿಂದ ಪಾರಾಗುವುದು ಅಷ್ಟೇ ಮುಖ್ಯ. ಕಳೆದ ಬಾರಿ IPL ಫೈನಲ್ ಗೆದ್ದ ಬಳಿಕ ಉಂಟಾದ ಕಾಲ್ತುಳಿತಕ್ಕೂ ಪೊಲೀಸ್ ಅಧಿಕಾರಿಗಳನ್ನೇ ಬಲಿಪಶು ಮಾಡಲಾಗಿತ್ತು.

ರಾಜಕಾರಣಿಗಳನ್ನು ಉಳಿಸಲು ಪೊಲೀಸ್ ಅಧಿಕಾರಿಗಳನ್ನು ಗುರಾಣಿಯಾಗಿ ಬಳಲುಸುವ ಚಾಳಿ ಸದಾ ಕಾಲ ನಡೆದುಕೊಂಡು ಬಂದಿದೆ. ಈ ಬಳ್ಳಾರಿ ಘಟನೆಯಲ್ಲಿ ಶಾಸಕ ನಾ.ರಾ ಭರತ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಬೇಕಿತ್ತು. ಶ್ರೀರಾಮುಲು ಮನೆ ಹಾಗೂ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕಲು ಹೋಗಿದ್ದು ಮೊದಲ ತಪ್ಪು, ಜನಾರ್ದನ ರೆಡ್ಡಿ ಮನೆ ಮುಂದೆ ನಾರಾ ಭರತ್ ರೆಡ್ಡಿ ಕುರ್ಚಿ ಹಾಕಿ ಕುಳಿತು ಧಮ್ಕಿ ಹಾಕುವ ರೀತಿಯಲ್ಲಿ ವರ್ತಿಸಿದ್ದೂ ತಪ್ಪು. ಆದರೂ ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಿದ್ದು ನಾಚಿಕೆಗೇಡು ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಆದರೆ ಕಾಂಗ್ರೆಸ್ ಶಾಸಕರು ಮಾತ್ರ ನಮ್ಮದೇನು ತಪ್ಪೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಟಿ ನಡೆಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾ.ರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಸುದ್ದಿಗೋಷ್ಠಿ ನಡೆಸಿ, ವಾಲ್ಮೀಕಿ ಅವರಿಗೆ ದೊಡ್ಡ ಗೌರವ ಸಲ್ಲಿಕೆ ಮಾಡಬೇಕು ಎಂದಿತ್ತು. ಭರತ್ ರೆಡ್ಡಿ ಅವರ ಕೆಲಸವನ್ನು ಬಿಜೆಪಿ ನಾಯಕರು ಸಹಿಸಿಕೊಳ್ತಿಲ್ಲ. ಬ್ಯಾನರ್ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಯುವಕ ಪ್ರಾಣ ಕಳೆದುಕೊಂಡಿದ್ದಾನೆ, ಬೆಲೆ ಕಟ್ಟಲಾಗದು. ಕಾಂಗ್ರೆಸ್ ಪಕ್ಷ ಯಾವತ್ತೂ ವಾಲ್ಮೀಕಿ ಪರ ಇರೋ ಪಕ್ಷ ಎಂದಿದ್ದಾರೆ. ಇದು ರಿಪಬ್ಲಿಕ್ ಆಫ್ ಬಳ್ಳಾರಿ ಅಲ್ಲ, ನಾವೆಲ್ಲಾ ಅದಕ್ಕೆ ಅವಕಾಶ ಕೊಡೋಲ್ಲ. ಇವತ್ತು ಅಮಾಯಕ ಬಲಿಯಾಗಿದ್ದಾನೆ. ಕಲ್ಲು ತೂರಾಟ, ದೊಣ್ಣೆ, ಕುಡಗೋಲು ತಗೊಂಡು ಬರ್ತಿದ್ದಾರೆ. ಬಾಂಬ್ ಹಾಕಿ ಅಂತಿದ್ರು ಬಿಜೆಪಿ ನಾಯಕರು. ಬಳ್ಳಾರಿ ಬಿಹಾರ ಮಾಡೋಕೆ ಬಿಡಲ್ಲ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್ ಸಮಿತಿ ರಚನೆ ಮಾಡಿ ಬಳ್ಳಾರಿಗೆ ಕಳುಹಿಸಿದೆ.

ಬಳ್ಳಾರಿ ಗಲಾಟೆ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್ ಆಗಿದೆ. ಸ್ಥಳೀಯ ಪರಿಸ್ಥಿತಿ ಅವಲೋಕಿಸಲು ನಿಯೋಗ ಕಳುಹಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಎಂ. ರೇವಣ್ಣ, ಜಯಪ್ರಕಾಶ್ ಹೆಗ್ಡೆ, ಟಿ. ರಘುಮೂರ್ತಿ, ಕುಮಾರ್ ನಾಯಕ್, ಜಕ್ಕಪ್ಪನವರ್, ಬಸವನಗೌಡ ಬಾದರ್ಲಿ ನಿಯೋಗ ರಚನೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್ ನಿಯೋಗ ರಚಿಸಿದ್ದು, ಇಂದೇ ಘಟನಾ ಸ್ಥಳಕ್ಕೆ ಭೇಟಿ ನೀಡಿ, ವಾಸ್ತವ ಸ್ಥಿತಿ ಬಗ್ಗೆ ವರದಿ ಮಾಡಲಿದ್ದಾರೆ. ಡಿ.ಕೆ. ಶಿವಕುಮಾರ್ ಸೂಚನೆಯಂತೆ ಆರು ಮಂದಿ ನಾಯಕರ ತಂಡ ರಚನೆ ಆಗಿದ್ದು, ಬಳ್ಳಾರಿಗೆ ತೆರಳಿ ಮಾಹಿತಿ ಕಲೆಹಾಕಲಿದೆ.


