ಬಳ್ಳಾರಿ ಬ್ಯಾನರ್ ಘರ್ಷಣೆಯಲ್ಲಿ ರಾಜಶೇಖರ್ ಎಂಬಾತ ಗುಂಟೇಡಿಗೆ ಬಲಿಯಾಗಿದ್ದ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮೃತನ ಕುಟುಂಬಸ್ಥರನ್ನು ಭೇಟಿ ಮಾಡಿ ವೈಯಕ್ತಿಕವಾಗಿ 25 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಿದ್ದಾರೆ. ಶಾಸಕ ಭರತ್ ರೆಡ್ಡಿ ಸೇರಿದಂತೆ ನಾವು ನಿಮ್ಮೊಂದಿಗೆ ಇರ್ತೇವೆ ಎಂದು ಧೈರ್ಯ ಹೇಳಿದ್ದಾರೆ.
ಜಿಂದಾಲ್ ಏರ್ಪೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಶಾಸಕ ನಾ.ರಾ. ಭರತ್ ರೆಡ್ಡಿಯನ್ನು ಭೇಟಿ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಜೊತೆ ಭೇಟಿಯಾದ ಭರತ್ ರೆಡ್ಡಿ, ಗುಂಡಿನ ದಾಳಿ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ಪಡೆದ್ದರು.

ಕಾಂಗ್ರೆಸ್ನಿಂದ ರಚನೆ ಆಗಿರುವ ಸತ್ಯಶೋಧನಾ ಸಮಿತಿ ಘಟನಾ ಸ್ಥಳಕ್ಕೆ ಹಾಗೂ ಮೃತ ರಾಜಶೇಖರ್ ಮನೆಗೂ ಭೇಟಿ ಮಾಡಿ ಮಾಹಿತಿ ಸಂಗ್ರಹ ಮಾಡಿದೆ. ಆ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ HM ರೇವಣ್ಣ, ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆ ಎಂದಿದ್ದಾರೆ. ಎಲ್ಲಾ ಪಾರ್ಟಿ, ವರ್ಗದ ಜನ ನೋಡಿ ಮಾಡುವ ಕಾರ್ಯಕ್ರಮ ಇತ್ತು. ಹೊಟ್ಟೆ ಉರಿಯಿಂದ ಗಲಾಟೆ ಮಾಡಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ರು. ಇದೀಗ ಮತ್ತೆ ಅದನ್ನೇ ಮಾಡಲು ಹೊರಟಿದ್ದಾರೆ ಎಂದಿದ್ದಾರೆ. ಇನ್ನೂ ಸಮಿತಿ ಸದಸ್ಯ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮುಖಂಡರು, ಅಧಿಕಾರಿಗಳ ಜೊತೆ ಮಾತಾಡಿದ್ದೇವೆ. ಈ ಘಟನೆ ನಡೆಯುವ ಅವಶ್ಯಕತೆ ಇರಲಿಲ್ಲ. ಅಲ್ಲಿ ಬ್ಯಾನರ್ ಹಾಕಿದ್ರೂ ಏನೂ ಆಗ್ತಿರಲಿಲ್ಲ. ಅದನ್ನ ಹರಿಯುವ ಅವಶ್ಯಕತೆಯೂ ಇರಲಿಲ್ಲ ಎಂದಿದ್ದಾರೆ.

ಮಾಜಿ ಸಚಿವ ಬಿ ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಅವರನ್ನು ಅವಹೇಳನ ಮಾಡಿದ ಆರೋಪದ ಮೇಲೆ ವಾಲ್ಮೀಕಿ ಸಮಾಜ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಾರ್ದನ ರೆಡ್ಡಿಗೆ ನೇರವಾಗಿ ಎಚ್ಚರಿಕೆ ನೀಡಿರುವ ವಾಲ್ಮೀಕಿ ಸಮಾಜದ ಮುಖಂಡರು, ವಾಲ್ಮೀಕಿ ಸಮಾಜದ ನಾಗೇಂದ್ರ ವಿರುದ್ದ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದಿದ್ದಾರೆ. ನೀವು ವಾಲ್ಮೀಕಿ ಸಮಾಜದಿಂದ ಬೆಳೆದಿದ್ದು, ನಾಗೇಂದ್ರ ನಾಲ್ಕು ಬಾರಿ ಶಾಸಕರಾಗಿದ್ದಾರೆ. ನೀವು ಒಂದು ಬಾರಿ ಶಾಸಕರಾಗಿದ್ದೀರಿ. ಈ ಹಿಂದೆ ಶ್ರೀರಾಮುಲು ವಿರುದ್ದ ಮಾತನಾಡಿದ್ರಿ. ಈಗ ನಾಗೇಂದ್ರ ವಿರುದ್ದ ಮಾತನಾಡುತ್ತಿದ್ದೀರಿ. ಹೀಗೆ ಮಾಡಿದ್ರೆ ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಇಂದು ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸಕ್ಕೆ ತೆರಳಲಿರೊ ನಾಯಕರು, ಮಧ್ಯಾಹ್ನ 12 ಗಂಟೆಗೆ ಜನಾರ್ದನ ರೆಡ್ಡಿ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ. ಈ ಪ್ರಕರಣದಲ್ಲಿ ಸತ್ತವನು ಸತ್ತ.. ರಾಜಕಾರಣಿಗಳು ಆರೋಪ ಮಾಡುತ್ತ ಕಾಲ ಕಳೆಯುವ ಎಲ್ಲಾ ಸಾಧ್ಯತೆಗಳೂ ಇದ್ದು, ಯಾರದ್ದು ತಪ್ಪು ಅನ್ನೋ ಸತ್ಯ ಮುಚ್ಚಿಹೋಗುವ ಸಾಧ್ಯತೆ ಹೆಚ್ಚು ಎನ್ನಬಹುದು.


