ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ತನ್ನ ತಂದೆ, ತಾಯಿ ಜೊತೆಗೆ ತಂಗಿಯನ್ನೂ ಕೊಂದು ಬಂದಿದ್ದ ಕಿರಾತಕ ಮಗ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನನ್ನ ಹೆತ್ತವರು ನಾಪತ್ತೆಯಾಗಿದ್ದಾರೆ ಅಂತಾ ಪೊಲೀಸ್ ಠಾಣೆಯಲ್ಲಿ ದೂರು ಕೊಡೋದಕ್ಕೆ ಹೋದವನೇ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ ಅಕ್ಷಯಕುಮಾರ್. ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ನಿವಾಸಿಯಾದ ಅಕ್ಷಯ್ ಕುಮಾರ್, ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮೀ ಹಾಗೂ ತನ್ನ ತಂಗಿ ಅಮೃತಾ ಜೊತೆಗೆ ವಿಜಯನಗರದ ಕೊಟ್ಟೂರಿನಲ್ಲಿ ವಾಸವಾಗಿದ್ರು. ಆದರೆ ತಂಗಿಯ ಪ್ರೀತಿ ಅಣ್ಣನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಪೋಷಕರ ಮನವೊಲಿಸುವ ಪ್ರಯತ್ನ ವಿಫಲವಾದ ಕೂಡಲೇ ಕೊಲೆ ಮಾಡುವ ಯೋಜನೆ ಮಾಡಿಕೊಂಡಿದ್ದ.

ಅಕ್ಷಯ್ ಕುಮಾರ್ ಸಹೋದರಿ ಅಮೃತ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಆ ಪ್ರೀತಿಯನ್ನು ಅಕ್ಷಯ್ ಕುಮಾರ್ ವಿರೋಧಿಸಿದ್ದ. ನಿಮ್ಮ ಮಗಳಿಗೆ ಪ್ರೀತಿ ಪ್ರೇಮ ಎಲ್ಲ ಬೇಡ ಅಂತಾ ಹೇಳಿ ಎಂದು ಪೋಷಕರನ್ನೂ ಕೇಳಿಕೊಂಡಿದ್ದ. ಆದರೆ ಮಗಳ ಪ್ರೀತಿಗೆ ಅಪ್ಪ ಅಮ್ಮ ಮಾತ್ರ ನೋ ಅಂದಿರಲಿಲ್ಲ. ಮಗಳ ಪ್ರೀತಿಗೆ ತಂದೆ ತಾಯಿ ಒಕೆ ಅಂದಿದ್ದರು. ಇದರಿಂದ ಕುಪಿತಗೊಂಡ ಅಕ್ಷಯ್ ಕುಮಾರ್, ಯಾವುದೇ ಕಾರಣಕ್ಕೂ ಅವನ ಪ್ರೀತಿ ಮಾಡೋದು ಬೇಡ ಅಂತಾ ಹುಡುಗನನ್ನು ವಿರೋಧ ಮಾಡ್ತಿದ್ದ. ಮಗಳ ಪ್ರೀತಿಗೆ ಹೆತ್ತವರು ಬೆಂಬಲವಾಗಿ ನಿಂತಿದ್ರಿಂದ ಗಲಾಟೆಯೂ ನಡೆದಿತ್ತು. ಆ ಬಳಿಕ ಕೊಟ್ಟೂರಿಗೆ ಹೋದಾಗ ಮೂವರನ್ನೂ ಕೊಂದು ಮನೆಯಲ್ಲೇ ಮಣ್ಣು ಮಾಡಿ ಅಲ್ಲಿಂದ ಬೆಂಗಳೂರಿಗೆ ವಾಪಸ್ ಆಗಿದ್ದ.

ವಿಜಯನಗರದ ಕೊಟ್ಟೂರಲ್ಲಿ ಮೂವರನ್ನು ಕೊಂದು ಮಣ್ಣು ಮಾಡಿ ಏನೂ ಗೊತ್ತಿಲ್ಲದಂತೆ ಬೆಂಗಳೂರಿಗೆ ಬಂದಿದ್ದ ಅಕ್ಷಯ್, ಹೆಣ ಉರುಳಿಸಿ ಅವತ್ತೇ ಊರು ಬಿಟ್ಟಿದ್ನಂತೆ. ನೇರವಾಗಿ ಬೆಂಗಳೂರಿಗೆ ಬಂದವನು ಇಲ್ಲೇ ಒಂದಿಷ್ಟು ದಿನ ತಲೆಮರಿಸಿಕೊಂಡಿದ್ದ. ಆ ಬಳಿಕ ಅದೇನ್ ಅನಿಸ್ತೋ ಏನೋ ಗೊತ್ತಿಲ್ಲ. ತನ್ನ ಮೇಲೆ ಕೊಲೆ ಆರೋಪ ಬರಬಾರದು ಅಂತಾ ಪ್ಲ್ಯಾನ್ ಮಾಡಿದ್ನೋ ಏನೋ ಗೊತ್ತಿಲ್ಲ.. ನೇರವಾಗಿ ತಿಲಕ್ ನಗರ ಪೊಲೀಸ್ ಠಾಣೆಗೆ ಹೋಗಿ ತಂದೆ ತಾಯಿ ಹಾಗೂ ತಂಗಿ ಮಿಸ್ ಆಗಿದ್ದಾರೆ ಅಂತಾ ದೂರು ಕೊಡಲು ಮುಂದಾಗಿದ್ದ. ನನ್ನ ಅಪ್ಪ-ಅಮ್ಮನ ಜೊತೆ ನನ್ನ ತಂಗಿ ನಾಪತ್ತೆಯಾಗಿದ್ದಾಳೆ. ಹುಡುಕಿಕೊಡಿ ಅಂತಾ ಪೊಲೀಸರಿಗೆ ಮನವಿ ಮಾಡಿದಾಗ ಪೊಲೀಸರು ನಾಲ್ಕಾರು ಪ್ರಶ್ನೆ ಮಾಡಿದ್ರು. ಆಗ ಉತ್ತರ ಕೊಡಲು ತಡಬಡಾಯಿಸಿದಾಗ ಪೊಲೀಸರಿಗೆ ಸಣ್ಣ ಅನುಮಾನ ಮೂಡಿತ್ತು. ಪೊಲೀಸರ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ಎಲ್ಲಾ ಸತ್ಯವನ್ನು ಕಕ್ಕಿದ್ದಾನೆ.

ಕೊಟ್ಟೂರಲ್ಲಿ ತ್ರಿವಳಿ ಕೊಲೆ ಬಳಿಕ ಮನೆಯಲ್ಲಿಯೇ ಗುಂಡಿ ತೋಡಿ ಮೃತ ದೇಹವನ್ನ ಮುಚ್ಚಿದ್ದಾನೆ ಪಾಪಿ ಅಕ್ಷಯ್. ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಎಲ್. ಬಿ. ಬಡಾವಣೆಯಲ್ಲಿ ಘಟನೆ ನಡೆದಿರೋದು ಗೊತ್ತಾಗ್ತಿದ್ದಂತೆ ಸ್ಥಳೀಯ ಪೊಲೀಸರು ಸಂಬಂಧಿಕರು ಸ್ಥಳಕ್ಕೆ ಬಂದು ನೋಡಿದಾಗ ವಿಚಾರ ಬಹಿರಂಗ ಆಗಿದೆ. ಮನೆಯ ಒಳ ಭಾಗದಲ್ಲಿ ಟೈಲ್ಸ್ ಕಿತ್ತು ಗುಂಡಿ ತೋಡಿರುವ ಆರೋಪಿ, ಮನೆಯ ಹಾಲ್ನಲ್ಲೇ ಸಮಾಧಿ ಮಾಡಿದ್ದಾನೆ. ಮನೆ ತುಂಬ ರಕ್ತದ ಕಲೆಗಳು, ನಾಲ್ಕು ಮತ್ತು ತರಿಸುವ ಬಾಟಲ್ ಕೂಡ ಇಟ್ಟಿದ್ದಾನೆ ಪಾಪಿ. ತಂದೆ – ತಾಯಿ, ಸಹೋದರಿ ಕೊಲೆ ಮಾಡಿ ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ನೀಡಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾನೆ.


