ಸ್ಯಾಂಡಲ್ವುಡ್ ನಿರ್ಮಾಪಕ ಶ್ರೀನಿವಾಸ ಅಲಿಯಾಸ್ ಕನಕಪುರ ಶ್ರೀನಿವಾಸ್ ವಿರುದ್ದ ನಟ-ನಿರ್ದೇಶಕ ಪ್ರೇಮ್ ದೂರು ನೀಡಿದ್ದಾರೆ. ಫೆಬ್ರವರಿ 5 ರಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ನಿರ್ಮಾಪಕ ಶ್ರೀನಿವಾಸ್ ವಿರುದ್ಧ NCR ದಾಖಲು ಮಾಡಿಕೊಂಡಿದ್ದ ಪೊಲೀಸರು, ನ್ಯಾಯಾಲಯದಿಂದ ಅನುಮತಿ ಪಡೆದು FIR ದಾಖಲು ಮಾಡಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್ ಗುರಿಯಾಗಿಸಿಕೊಂಡು ಗೌರವಕ್ಕೆ ಧಕ್ಕೆಯಾಗುವಂತೆ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ. ಕೆ.ಪಿ. ಅಗ್ರಹಾರ ಪೊಲೀಸರು BNS ಸೆಕ್ಷನ್ 352 ರಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಅಥವಾ ಉದ್ದೇಶಪೂರ್ವಕ ಅವಮಾನ ಮಾಡುವ ಸೆಕ್ಸನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ ಕನಕಪುರ ಶ್ರೀನಿವಾಸ್ ವಿರುದ್ಧ ಜೋಗಿ ಪ್ರೇಮ್ ಫಿಲ್ಮ್ ಚೇಂಬರ್ನಲ್ಲೂ ದೂರು ನೀಡಿದ್ದಾರೆ. ಸಿನಿಮಾ ಒಂದರ ಪ್ರೆಸ್ ಮೀಟ್ನಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನನ್ನನ್ನು ಮಾತ್ರವಲ್ಲ, ಪುನೀತ್ ರಾಜ್ಕುಮಾರ್, ದರ್ಶನ್ ಸೇರಿದಂತೆ ಹಲವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಗೆ ದೂರು ನೀಡಿದ್ದಾರೆ. ಆ ಬಳಿಕ ಮಾತನಾಡಿದ ಜೋಗಿ ಪ್ರೇಮ್, ಶ್ರೀನಿವಾಸ್ ತಾಯಿ ಬಗ್ಗೆ ಜ್ಞಾನ ಇಲ್ಲದಂತೆ ಮಾತಾಡಿದ್ದಾರೆ. ನನಗೂ ಅವರಿಗಿಂತ ಚೆನ್ನಾಗಿ ಮಾತನಾಡಲು ಬರುತ್ತದೆ. ಆದರೆ ನಾನು ಆ ರೀತಿ ಮಾತನಾಡಲು ಹೋಗಲ್ಲ. ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರ ಬಗ್ಗೆಯೂ ಮಾತಾಡಿದ್ದಾರೆ. ನನ್ನ ಬಗ್ಗೆ ಎ.ಪಿ ಅರ್ಜುನ್ ಬಗ್ಗೆ, ದರ್ಶನ್, ಅಪ್ಪು ಅವರ ಬಗ್ಗೆ ಮಾತಾಡಿದ್ದಾರೆ. ಡಿಸಿಎಂ ಡಿಕೆ ಸಾಹೇಬ್ರು ಬಗ್ಗೆಯೂ ಮಾತಾಡಿದ್ದಾರೆ ಎಂದು ದೂರಿದ್ದಾರೆ.
ನನ್ನ ಬಗ್ಗೆ ಮಾತಾಡಬೇಕಾದ್ರೆ ಯೋಗ್ಯತೆ ಇರಬೇಕು, ಮಾತಾಡುವಾಗ ನಿಗಾ ಇಟ್ಟುಕೊಂಡು ಮಾತಾಡಬೇಕು. ಯಾರ ಬಗ್ಗೆಯೂ ಕೇವಲವಾಗಿ ಮಾತಾಡಬಾರದು. ದರ್ಶನ್ ಬಗ್ಗೆಯೂ ಮಾತಾಡ್ತಾರೆ.. ಅವರು ಹೊರಗೆ ಇದ್ದಾಗ ಮಾತಾಡಬೇಕು. ನನ್ನ ಮನೆ, ಆಫೀಸ್ ಚಂದ್ರಲೇಔಟ್ನಲ್ಲಿದೆ. ಅಲ್ಲಿಗೆ ಬಾ ಎಂದು ಸವಾಲು ಎಸೆದಿದ್ದಾರೆ. ನಾನು ಅವರ ಹತ್ತಿರ ಹಣ ತಗೊಂಡಿದ್ದೆ, ಆದ್ರೆ ಆವತ್ತೇ ವಾಪಸ್ ಕೊಟ್ಟೆ. ಇದೇ ಅಂಬರೀಶ್ ಅಣ್ಣ, ಅಮ್ಮಾ ಅವ್ರು ಇದ್ದಿದ್ರೆ ಈಗಾಗ್ತಾ ಇರಲಿಲ್ಲ. ನಾನು ಕರಿಯ ಸಿನಿಮಾದಿಂದ ಹಿಡಿದು ಕೆಡಿವರೆಗೂ ಪ್ರೊಡ್ಯೂಸರ್ಗೆ ದುಡ್ಡು ಹೋಗೊವರೆಗೂ ಬೇರೆ ಸಿನಿಮಾ ಮಾಡಲ್ಲ. ನನ್ನ ಜೊತೆಗೆ ನಿನ್ನದು ಪರ್ಸನಲ್ ಇದ್ದಿದ್ರೆ ಕರೆಸಿ ಸಪರೇಟ್ ಆಗಿ ಮಾತಾಡಬೇಕಿತ್ತು. ನಾನು ಈಗ ಮಾನನಷ್ಟ ಮೊಕದ್ದಮೆ ಕೇಸ್ ಹಾಕ್ತೀನಿ, ಅನುಭವಿಸಿಲಿ ಎಂದಿದ್ದಾರೆ. ಇನ್ನೂ ನನಗೆ 9 ಲಕ್ಷ ಅಡ್ವಾನ್ಸ್ ಕೊಟ್ಟು ಮೂರು ವರ್ಷ ಕಾಯಿಸಿದ್ರು. ಮೂರು ವರ್ಷ ಸಿನಿಮಾನೇ ಮಾಡಿಲ್ಲ. ಆದರೂ 5 ಲಕ್ಷ ವಾಪಾಸ್ ಕೊಟ್ಟಿದ್ದೇನೆ ಎಂದಿದ್ದಾರೆ.
ಎ.ಪಿ ಅರ್ಜುನ್ ಮಾತನಾಡಿ, 2014ರಲ್ಲಿ ಐರಾವತ ಶೂಟಿಂಗ್ ವೇಳೆ ಧ್ರುವ ಜೊತೆಗೆ ಸಿನಿಮಾ ಮಾಡಬೇಕು ಎಂದು ದುಡ್ಡು ಕೊಟ್ಟಿದ್ರು. 7 ತಿಂಗಳಲ್ಲಿ ನಾವು ಎಲ್ಲದಕ್ಕೂ ರೆಡಿ ಆಗ್ತೀವಿ. ಆದ್ರೆ ಅವರು ಎಲ್ಲರ ಡೇಟ್ ತರಲಿಲ್ಲ. ಒಂದು ವರ್ಷ 4 ತಿಂಗಳು ಕಾಯಿಸ್ತಾರೆ. ಕೊರೊನಾ ಟೈಮಲ್ಲಿ ನನ್ನ ಹತ್ತಿರ ಬಂದು ದುಡ್ಡು ಬೇಕು ಅಂತಾ ಅಂದ್ರು. ಕೊರೊನಾ ಮುಗಿದ ಮೇಲೆ ನನಗೆ ಮತ್ತೆ ದುಡ್ಡು ಬೇಕು ಅಂತಾ ಟಾರ್ಚರ್ ಮಾಡಿದ್ರು. ಆಫೀಸ್ ಹತ್ತಿರ ಬಂದು ನ್ಯೂಸ್ ಸೆನ್ಸ್ ಮಾಡೋರು. ನನಗೆ ಅಪಾರ್ಟ್ಮೆಂಟ್ ತಗೊಳ್ಳೋಕೆ ದುಡ್ಡು ಕೊಟ್ಟಿದ್ದೆ ಅಂತಾರೆ. ಅದು ನಿಜ ಅನ್ನೋದನ್ನ ಪ್ರೂ ಮಾಡಲಿ. ನಟ ಧ್ರುವನ ಬಗ್ಗೆನೂ ಮಾತಾಡಿದ್ದಾರೆ. ಅವರಿಗೆ ಎಲ್ಲೋ ಮಾನಸಿಕ ಸ್ಥಿಮಿತಾ ಇಲ್ಲ ಅಂತಾ ಅನಿಸುತ್ತದೆ. ಅಷ್ಟು ತಾಕತ್ತು ಇದ್ದಿದ್ರೆ ನೇರವಾಗಿ ಬಂದೇ ಕೇಳಬಹುದಿತ್ತು ಅಲ್ವಾ..? ನಾವು ಮಂಡ್ಯದವ್ರು.. ನಮಗೇನು ಏಕ ವಚನ ಬಳಸೋಕೆ ಬರಲ್ಲ ಅಂತಾ ಅಲ್ಲ.. ಅದು ಮಾತೃಭೂಮಿ. ನಾನು ಕೂಡ ಶ್ರೀನಿವಾಸ್ ಅವರ ಮೇಲೆ ಡಿಫರ್ಮೇಷನ್ ಕೇಸ್ ಹಾಕ್ತಿನಿ ಎಂದಿದ್ದಾರೆ.


