The Public Spot
ರಾಜ್ಯ

ಹಂಪಿ ಉತ್ಸವಕ್ಕೆ ಸಿಎಂ ಚಾಲನೆ.. ಇವತ್ತು ಬಿಗ್‌ಬಾಸ್‌ ಗಿಲ್ಲಿಯದ್ದೇ ಕಾರುಬಾರು..

ವಿಜಯನಗರದಲ್ಲಿ ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆರ. ಡೊಳ್ಳು, ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯಗೆ ಹಲವು ಸಚಿವರು, ಶಾಸಕರು ಸಾಥ್ ನೀಡಿದ್ದಾರೆ. ಮುಖ್ಯ ವೇದಿಕೆಯಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಒಲಿಂಪಿಕ್ ಮಾದರಿಯ ಜ್ಯೋತಿ ಬೆಳಗಿಸೋ ಮೂಲಕ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇನ್ಮುಂದೆ ನವೆಂಬರ್‌ನಲ್ಲೇ ಹಂಪಿ ಉತ್ಸವ ಮಾಡ್ತೇವೆ ಎಂದು ಸಿಎಂ ಘೋಷಿಸಿದ್ದಾರೆ. ಈ ಹಿಂದೆ ಎಂ.ಪಿ ಪ್ರಕಾಶ್ ನವೆಂಬರ್‌ನಲ್ಲಿ ಉತ್ಸವ ಮಾಡ್ತಿದ್ರು. ಈಗಲೂ ಎಲ್ಲಾ ಸಚಿವ, ಶಾಸಕರು ನವೆಂಬರ್‌ನಲ್ಲಿ ಉತ್ಸವ ಮಾಡೋಣ ಅಂತಿದ್ದಾರೆ. ಈ ವರ್ಷದಿಂದ ನವೆಂಬರ್ ತಿಂಗಳಲ್ಲೇ ಹಂಪಿ ಉತ್ಸವ ಮಾಡ್ತೇವೆ ಎಂದು ಘೋಷಿಸಿದ್ದಾರೆ.

ವಿಶೇಷ ಅಂದ್ರೆ ವಿಜಯನಗರದಲ್ಲಿ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಗೈರು ಹಾಜರಾಗಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಡಿಸಿಎಂ ಹೆಸರಿದ್ದರೂ ಡಿ.ಕೆ ಶಿವಕುಮಾರ್‌ ಗೈರು ಹಾಜರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹ್ಮದ್‌ ಖಾನ್‌ ಉಸ್ತುವಾರಿಯಲ್ಲಿ ಹಂಪಿ ಉತ್ಸವ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಹೆಚ್ ಕೆ ಪಾಟೀಲ್, ಶಿವರಾಜ್ ತಂಗಡಗಿ, ಭೈರತಿ ಸುರೇಶ್ ಸೇರಿದಂತೆ ಸಂಸದರು, ಹಲವು ಶಾಸಕರು ಭಾಗಿಯಾಗಿದ್ದಾರೆ. ಇಡೀ ಉತ್ಸವದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಗೈರು ಹಾಜರಿ ಎದ್ದು ಕಾಣುವಂತಾಗಿದೆ.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, ಜೈ ಭೀಮ್ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸಿದ್ದಾರೆ. ಹಂಪಿ ಉತ್ಸವ 3 ವರ್ಷಗಳಿಂದ ಆಚರಣೆ ಮಾಡುತಿರುವುದಕ್ಕೆ ಸಂತೋಷವಾಗಿದೆ. 1986-87 ರಲ್ಲಿ ದಿವಂಗತ ಎಂ.ಪಿ.ಪ್ರಕಾಶ್ ಹಂಪಿ ಉತ್ಸವ ಆರಂಭಿಸಿದ್ರು. ಅದೇ ರೀತಿಯಾಗಿ ಹಂಪಿ ಉತ್ಸವ ಸಾಗಿ ಬಂದಿದೆ. ಸಿಎಂ ಅವರಿಗೆ ಸಾಕಷ್ಟು ಮನವಿ ಮಾಡುತ್ತೇನೆ. ಹೊಸ ಜಿಲ್ಲೆಯಾಗಿರೋದ್ರಿಂದ ಸಾಕಷ್ಟು ಮೂಲಭೂತ ಸೌಕರ್ಯಗಳಿಲ್ಲ. ಜಿಲ್ಲೆಯಲ್ಲಿ ಡಿಸಿ ಕಚೇರಿಯಂತೆ ಹಲವಾರು ಕಟ್ಟಡಗಳ ನಿರ್ಮಾಣ ಕಾರ್ಯವಾಗಬೇಕು. ಈ ಬಜೇಟ್ ನಲ್ಲಿ 390 ಕೋಟಿ ಅನುದಾನ ನೀಡಬೇಕು ಎಂದು ಕೇಳಿಕೊಂಡರು.

ವಿಜಯನಗರದ ಹಂಪಿ ಉತ್ಸವಕ್ಕೆ ಹ್ಯಾಟ್ರಿಕ್‌ ಹೀರೋ ಡಾ ಶಿವಕುಮಾರ್ ಭಾಗಿಯಾಗಿದ್ದರು. ಹಂಪಿಯಲ್ಲಿ ಚಿತ್ರೀಕರಣಕ್ಕೆ ಈ ಹಿಂದೆ ಬಂದಿದ್ದೇ ಇದೀಗ ಉತ್ಸವಕ್ಕೆ ಬಂದಿದ್ದೇನೆ. ಸಚಿವ ಜಮೀರ್ ಮತ್ತು ಸಿಎಂ ಸಿದ್ದರಾಮಯ್ಯ ಅಹ್ವಾನ ನೀಡಿದ್ರು. ಹಂಪಿಗೂ ನಮಗೂ ಅವಿನಾಭಾವ ಸಂಬಂಧ ಇದೆ. ಸಿದ್ದರಾಮಯ್ಯನವರ ಮಾತು ಪಾಲಿಸಿ ಬಂದಿದ್ದೇನೆ. ಉತ್ಸವದಲ್ಲಿ ನಾನು ಹಾಡು ಹಾಡಿ ರಂಜನೆ ಮಾಡ್ತೇನೆ ಎಂದು ಹಾಡು ಹಾಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ ಮಾತನಾಡಿ, ಇತಿಹಾಸ ಹೊಂದಿರೋ ಐತಿಹಾಸಿಕ ಹಂಪಿ ಉತ್ಸವ ನಮ್ಮ ಹೆಮ್ಮೆ. ಸಂಗೀತ ಸಾಹಿತ್ಯಕ್ಕೆ ಸಂಭ್ರಮಕ್ಕೆ ಉತ್ಸವ ಸಾಕ್ಷಿಯಾಗಿದೆ.. ಉತ್ಸವ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದಿದ್ದಾರೆ.

ವಿಜಯನಗರದ ಹಂಪಿ ಉತ್ಸವದಲ್ಲಿ ಡ್ರೋಣ್ ಶೋ ಕಣ್ಮನ ಸೆಳೆದಿದೆ. ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದೆ ಡ್ರೋಣ್ ಶೋ. ಡ್ರೋಣ್‌ನಲ್ಲಿ ಮೂಡಿ ಬಂದಿದೆ ವಿಶ್ವ ವಿಖ್ಯಾತ ಹಂಪಿ ಉತ್ಸವದ ಲಾಂಚನ. ಕರ್ನಾಟಕ ನಕ್ಷೆಯಲ್ಲಿ ಮೂಡಿದೆ ಸರ್ಕಾರದ ಐದು ಗ್ಯಾರಂಟಿಗಳು. ವಿರೂಪಾಕ್ಷ ದೇವಾಲಯ ಕಂಡು ಕಣ್ತುಂಬಿಕೊಂಡ ಸಾವಿರಾರು ಜನ. ಆಕಾಶದಲ್ಲಿ ಡ್ರೋಣ್ ಶೋನಲ್ಲಿ ಮೂಡಿ ಬರ್ತಿರುವ ದೃಶ್ಯ ಕಂಡು ಜನ ಶಿಳ್ಳೆ ಕೇಕೆ ಹಾಕಿದ್ದಾರೆ. ಹಂಪಿಯ ವಿಶ್ವವಿಖ್ಯಾತ ಕಲ್ಲಿನ ರಥ, ವಿಜಯನಗರ ಸಾಮ್ರಾಜ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಶ್ರೀ ಕೃಷ್ಣ ದೇವರಾಯ, ದರೋಜಿ ಕರಡಿ ಧಾಮ ಸೇರಿದಂತೆ ಡ್ರೋಣ್‌ ಶೋನಲ್ಲಿ ಸಿಎಂ ಸಿದ್ದರಾಮಯ್ಯ ಭಾವಚಿತ್ರವೂ ಮೂಡಿಬಂದಿದೆ.

ಹಂಪಿ ಉತ್ಸವದ ವೇದಿಕೆಯ ಬಲಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದ್ರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಪಟಾಕಿಯ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ವೇದಿಕೆಯ ಮೇಲೆ ಪೂಜೆ ಸಲ್ಲಿಸುವ ವೇಳೆ ಸಿಡಿದ ಪಟಾಕಿ. ಆ ಪಟಾಕಿಯ ಕಿಡಿಯಿಂದ ಹೊತ್ತಿಕೊಂಡ ಬೆಂಕಿ. ಕೂಡಲೇ ಎಚ್ಚೆತ್ತುಕೊಂಡ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇವತ್ತು ಬಿಗ್‌ಬಾಸ್‌ 12ರ ವಿನ್ನರ್‌ ಗಿಲ್ಲಿ ಆಗಮಿಸುತ್ತಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

Related posts

ಆಣೆ ಪ್ರಮಾಣವೋ.. ಕಾಂಗ್ರೆಸ್‌ ಪಾಲಿಗೆ ಬಿಡದಿ ಅನ್ನೋದು ಶಾಪವೋ..?

Publicspot

ಬಗೆಹರಿಯಿತೇ ಬಾನು ಆಯ್ಕೆ ವಿವಾದ..? ಅರಮನೆ ಸಂದೇಶ ಏನು..?

Publicspot

Caste Census Extended: ಈ ತಿಂಗಳಾಂತ್ಯಕ್ಕೆ ಜಾತಿಜನಗಣತಿ ಸಮೀಕ್ಷೆ ನಿಜವಾಗಲೂ ಮುಗಿಯುತ್ತಾ..?

Publicspot

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot

HEAVY RAIN ALERT: ರಾಜ್ಯದಲ್ಲಿ ಮಳೆ ಆರ್ಭಟ.. 5 ಜಿಲ್ಲೆಗೆ ರೆಡ್ ಅಲರ್ಟ್‌

Publicspot

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ