ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ರಾಬರಿ ನಡೆದಿದೆ. ಪೊಲೀಸರ ಯುನಿಫಾರ್ಮ್ನಲ್ಲಿ ಮನೆಗೆ ನುಗ್ಗಿರುವ ರಾಬರಿ ಟೀಂ ಚಾಕು ತೋರಿಸಿ ಮನೆಯಲ್ಲಿ ಇದ್ದಿದ್ದನ್ನೆಲ್ಲಾ ದೋಚಿಕೊಂಡು ಎಸ್ಕೇಪ್ ಆಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ BEL ಬಡಾವಣೆಯ ಹೊಂಬಾಳೆಗೌಡ ಎಂಬುವರ ಮನೆಯಲ್ಲಿ ಈ ದರೋಡೆ ಆಗಿದೆ. ಮನೆಯಲ್ಲಿ 53 ವರ್ಷದ ಹೊಂಬಾಳೆಗೌಡ, ಪತ್ನಿ ಮಂಗಳಮ್ಮ ಮತ್ತು ಮೊಮ್ಮಗ ಇದ್ದಾಗಲೇ ಈ ಕೃತ್ಯ ನಡೆದಿದೆ. ಪೊಲೀಸರ ಯೂನಿಫಾರ್ಮ್ ಜೊತೆಗೆ ಕೈಯಲ್ಲಿ ಡೈರಿ ಹಿಡಿದುಕೊಂಡು ದರೋಡೆಕೋರರು ಎಂಟ್ರಿ ಕೊಟ್ಟಿದ್ದರು ಅನ್ನೋ ವಿಚಾರ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಓರ್ವ ಡೈರಿ ಹಿಡಿದು ಬಂದರೆ ಮತ್ತೋರ್ವ ಕ್ರೈಮ್ ಪೊಲೀಸ್ ಪೇದೆ ರೀತಿಯಲ್ಲಿ ಬ್ಯಾಗ್ ಹಾಕೊಂಡು ಎಂಟ್ರಿ ಕೊಟ್ಟಿದ್ದ. ಮನೆಗೆ ನುಗ್ಗಿದ ಬಳಿಕ ಗನ್ ಮತ್ತು ಚಾಕು ತೋರಿಸಿ ಹೊಂಬಾಳೆಗೌಡರನ್ನ ಲಾಕ್ ಮಾಡಿದ್ದ ಆರೋಪಿಗಳು, ಆ ನಂತರ ಹೊಂಬಾಳೆಗೌಡ ಹಾಗೂ ಮಂಗಳಮ್ಮಗೆ ಟೇಪ್ ಸುತ್ತಿದ್ದರು. ಬೆಡ್ ರೂಮ್ ಜಾಲಾಡಿ ಸುಮಾರು 20 ಲಕ್ಷ ರೂಪಾಯಿ ಹಣ ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಯಿಂದ ಆಚೆ ಹೋಗುವಾಗ ಹೊಂಬಾಳೆಗೌಡ ಹಾಗೂ ಮಂಗಳಮ್ಮ ಅವರ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಹೊಂಬಾಳೆ ಗೌಡ, ನಿನ್ನೆ ಮಧ್ಯಾಹ್ನದ ಊಟದ ಬಳಿಕ ವಿಶ್ರಾಂತಿಯಲ್ಲಿದ್ದರು. ಈ ವೇಳೆ ಮನೆಗೆ ನುಗ್ಗಿರುವ ನಾಲ್ಕು ಜನರ ಗುಂಪು, ಇಬ್ಬರು ಮನೆಯೊಳಗಡೆ ಹಾಗೂ ಇಬ್ಬರು ಮನೆ ಹೊರಗಡೆ ಕಾವಲಿದ್ದರು. ಓರ್ವ ಮಾತ್ರ ಸಬ್ ಇನ್ಸ್ಪೆಕ್ಟರ್ ರೀತಿ ವೇಷದಲ್ಲಿದ್ರು. ಉಳಿದವರು ಪೊಲೀಸ್ಗೆ ಹೋಲುವ ಮಫ್ತಿಯಲ್ಲಿದ್ದರು. ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ಮನೆಗೆ ನುಗ್ಗಿರುವ ದರೋಡೆಕೋರರ ಗ್ಯಾಂಗ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದೆ. ಕಳೆದ ಎಂಟು ವರ್ಷಗಳಿಂದ ಬ್ಯಾಡರಹಳ್ಳಿ ಬಳಿಯ BEL ಲೇಔಟ್ನಲ್ಲಿ ವಾಸವಾಗಿರುವ ಹೊಂಬಾಳೆಗೌಡರು, ಬೆಂಗಳೂರಲ್ಲಿ ಹಲವು ಪ್ರತಿಷ್ಠಿತ ಲೇಔಟ್ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.
ಮೂಲತಃ ಮಾಗಡಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಹೊಂಬಾಳೆಗೌಡ, ಸದ್ಯ ಬ್ಯುಸಿನೆಸ್ ಕಾರಣಕ್ಕೆ BELನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇಬ್ಬರು ಮಕ್ಕಳಿದ್ದು, ಮಗಳಿಗೆ ಮದುವೆ ಆಗಿದೆ. ಮಗ ಕನಕಪುರದ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆ. ದಿನದ ಬಹುಪಾಲು ಸಮಯ ಮನೆಯಲ್ಲಿ ಒಬ್ಬರೇ ಇರ್ತಿದ್ದ ಹೊಂಬಾಳೆಗೌಡ ಪತ್ನಿ, ಸೋಮವಾರ ಮಧ್ಯಾಹ್ನ ಊಟದ ಬಳಿಕ ಹೊಂಬಾಳೆಗೌಡರು ರೆಸ್ಟ್ನಲ್ಲಿದ್ದರು ಎನ್ನಲಾಗಿದೆ. ಹೊಂಬಾಳೆಗೌಡ ಆಪ್ತ ಶಿವರಾಜ್ ಎಂಬುವರು ಮಾತನಾಡಿ, ಯಾರೋ ಗೊತ್ತಿರುವವರೇ ಇದು ಮಾಡಿದ್ದಾರೆ ಅಂತ ಅನ್ಸುತ್ತೆ. ಕರೆಕ್ಟ್ ಆಗಿ ಕ್ಯಾಷ್ ಹಾಗೂ ಚಿನ್ನ ಇಟ್ಟಿದ್ದ ಜಾಗ ಹುಡುಕಿ ದೋಚಿದ್ದಾರೆ ಎಂದಿದ್ದಾರೆ.
ಇವರನ್ನು ಪ್ರತಿ ದಿನ ನೋಡಿ ಮಾಹಿತಿ ಕಲೆ ಹಾಕಿ ಈ ಕೃತ್ಯ ಮಾಡಿದ್ದಾರೆ. ಈ ಭಾಗದಲ್ಲಿ ಜನರ ಓಡಾಟ ಕಡಿಮೆ ಇದೆ, ಜನರಲ್ಲಿ ಆತಂಕ ಇದೆ. ಇದೇ ಏರಿಯಾದಲ್ಲಿ ಈ ರೀತಿ ದರೋಡೆ, ಕಳ್ಳತನ ಆಗ್ತಿರೋದು ಮೊದಲಲ್ಲ. ಈ ಹಿಂದೆನೂ ಸಾಕಷ್ಟು ಬಾರಿ ಈ ರೀತಿ ಆಗಿದೆ. ಆದರೆ ಇದುವರೆಗೂ ಕೂಡ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಬಂಧನ ಮಾಡುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡ್ತಾರಾ..? ಅಥವಾ ಬೆಂಗಳೂರು ದರೋಡೆಕೋರರ ಸ್ವರ್ಗ ಎಂದು ಸಾಬೀತು ಮಾಡ್ತಾರಾ ಅನ್ನೋದನ್ನು ಕಾದು ನೋಡ್ಬೇಕು.


