ಇಂದಿನಿಂದ ದೇಶದಲ್ಲಿ ಹೊಸ ಹಣಕಾಸು ನಿಯಮಗಳು ಜಾರಿಗೆ ಬರ್ತಿದ್ದು, ಜನರಿಗೆ ಬೆಲೆ ಏರಿಕೆ ಬರೆ ಬೀಳಲಿದೆ. ದೇಶದ ಬ್ಯಾಂಕ್ ವಹಿವಾಟುಗಳಲ್ಲೂ ಭಾರೀ ಬದಲಾವಣೆ ಆಗಲಿದೆ. ಫೋನ್ ಪೇ, ಗೂಗಲ್ ಪೇ ರೂಲ್ಸ್ ಬದಲಾಗಿದ್ದು, RBI ಹೊಸ ನಿಯಮಗಳು ಜಾರಿಗೆ ಬರ್ತಿವೆ. ರೈಲು ಪ್ರಯಾಣಿಕರು ಇನ್ಮುಂದೆ ಬೇಕಾಬಿಟ್ಟಿ ಟಿಕೆಟ್ ರದ್ದು ಮಾಡೋ ಹಾಗಿಲ್ಲ. ವಾಹನ ಸವಾರರು ವರ್ಷಕ್ಕೆ ಒಂದ್ಸಲ ಫ್ಯಾಸ್ಟ್ಟ್ಯಾಗ್ ರೀಚಾರ್ಜ್ ಮಾಡಿಸಿಕೊಳ್ಳೋದು ಇಂದಿನಿಂದ ದುಬಾರಿ ಆಗಲಿದೆ. ಬ್ಯಾಂಕ್ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟಿಲ್ಲ ಅಂದ್ರೂ ಇಂದಿನಿಂದಲೇ ದಂಡ ಬೀಳಲಿದೆ.

ವಾಹನಗಳ ಟೋಲ್ ದರದಲ್ಲಿ ಶೇಕಡ 3 ರಿಂದ 5ರಷ್ಟು ಏರಿಕೆಯಾಗ್ತಿದೆ. ಒಂದು ಕಡೆಯ ಟೋಲ್ ದರ 5 ರಿಂದ 10 ರುಪಾಯಿ ರೀತಿ ಪ್ರತಿ ಟೋಲ್ನಲ್ಲಿ ದರ ಜಾಸ್ತಿ ಮಾಡಲಾಗ್ತಿದೆ. ಇನ್ನು ವರ್ಷಕ್ಕೊಮ್ಮೆ 200 ಟ್ರಿಪ್ ಸೌಲಭ್ಯ ಇರುವ ರಾಜ ಮಾರ್ಗ ಫಾಸ್ಟ್ಟ್ಯಾಗ್ ದರವನ್ನ 3 ಸಾವಿರದಿಂದ 3075 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ಮುಂದೆ ಟೋಲ್ಗಳಲ್ಲಿ ನಗದು ಪಾವತಿ ಪೂರ್ತಿ ರದ್ದುಗೊಳಿಸಲಾಗಿದೆ. ಇನ್ನೂ ರೈಲ್ವೆ ಪ್ರಯಾಣದ ಟಿಕೆಟ್ ರದ್ದು ಮಾಡಿದ್ರೆ ಇನ್ಮುಂದೆ ಹಣ ಸಿಗಲ್ಲ. ರೈಲು ಆರಂಭಕ್ಕೂ ಮುನ್ನ 8 ಗಂಟೆ ಒಳಗೆ ರೈಲ್ವೆ ಟಿಕೆಟ್ ರದ್ದು ಮಾಡಿದ್ರೆ ಹಣ ವಾಪಸ್ ಬರಲ್ಲ. ಪ್ರಯಾಣಕ್ಕೂ 24 ಗಂಟೆಗೂ ಮೊದಲೇ ಟಿಕೆಟ್ ರದ್ದು ಮಾಡಿದ್ರೆ 75 ಪರ್ಸೆಂಟ್, ಅದಕ್ಕಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ರದ್ದು ಮಾಡಿದ್ರೆ 50 ಪರ್ಸೆಂಟ್ ಹಣ ವಾಪಸ್ ಬರುತ್ತದೆ.

ಬ್ಯಾಂಕ್ನಿಂದ ಬ್ಯಾಂಕ್ಗೆ ಅಥವಾ ವ್ಯಾಪಾರದ ಸ್ಥಳದಲ್ಲಿ ಡಿಜಿಟಲ್ ಪಾವತಿಗೆ ಇನ್ಮುಂದೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಡಿಜಿಟಲ್ ಪಾವತಿಗೆ OTP-SMS ನಿಯಮ ಜಾರಿ ಮಾಡಲಾಗಿದೆ. ಫೋನ್ ಪೇ, ಗೂಗಲ್ ಪೇಗೂ ನಿಯಮ ಅನ್ವಯ ಆಗಲಿದೆ. ಆನ್ಲೈನ್ ಬ್ಯಾಂಕ್ ವಹಿವಾಟನ್ನು ₹5 ಲಕ್ಷಕ್ಕೆ ಸೀಮಿತ ಮಾಡಲಾಗಿದೆ. ₹5 ಲಕ್ಷ ಮೇಲ್ಪಟ್ಟ ಹಣಕಾಸು ವಹಿವಾಟಿಗೆ ಆಧಾರ್ ಲಿಂಕ್ ಆಗಿರಬೇಕು. ಜೊತೆಗೆ ಫಿಂಗರ್ ಪ್ರಿಂಟ್ ಅಥವಾ ಫೇಸ್ ಸ್ಕ್ಯಾನ್ ಮಾಡಬೇಕು ಅನ್ನೋ ನಿಯಮ ಇಂದಿನಿಂದಲೇ ಜಾರಿ ಆಗಲಿದೆ.
ವಿಶೇಷ ಅಂದ್ರೆ ಇಂದಿನಿಂದ ತೆರಿಗೆ ಪಾವತಿಸೋ ಜನರಿಗೆ ತಲೆನೋವು ಇರೋದಿಲ್ಲ. ಫೈನಾನ್ಷಿಯಲ್ ಇಯರ್ (FY), ಅಸೆಸ್ಮೆಂಟ್ ವರ್ಷ ಅನ್ನೋದನ್ನ ತೆಗೆದು ಹಾಕಲಾಗಿದೆ. ಇನ್ಮುಂದೆ ತೆರಿಗೆ ವರ್ಷ ಅನ್ನೋ ಹೆಸರಲ್ಲೇ ಟ್ಯಾಕ್ಸ್ ನಿಯಮಗಳು ಜಾರಿಗೆ ಬರಲಿವೆ. ಉದ್ಯಮಿಗಳು ಐಟಿಆರ್ ಸಲ್ಲಿಸೋಕೆ ಆಗಸ್ಟ್ 31ರವರೆಗೆ ಡೆಡ್ಲೈನ್ ಕೊಟ್ಟಿದ್ರೆ, ಸಂಬಳದಾರರು ಮಾತ್ರ ಜುಲೈ 31ರೊಳಗೆ IT ಫೈಲ್ ಮಾಡ್ಬೇಕು ಅನ್ನೋ ನಿಯಮ ಜಾರಿಗೆ ಬಂದಿದೆ.
ಕೈಗಾರಿಕೆಗಳು ಬಳಸುವ ವಿದ್ಯುತ್ ದರದಲ್ಲೂ ಏರಿಕೆ ಆಗಿದೆ. ಫಾಸ್ಟ್ಟ್ಯಾಗ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ಕೇಂದ್ರದ ಬೆಲೆ ಏರಿಕೆಯಿಂದ ಜನ ನರಳುತ್ತಿದ್ದಾರೆ. ಅಚ್ಛೇದಿನ್ ಅಂದರೂ ಈಗ ಕಚ್ಚಾ ದಿನ ಬಂದಿದೆಯಾ ಅಂತ ಸಿಟ್ಟು ಹೊರಹಾಕಿದ್ದಾರೆ. ಟೋಲ್ ದರ ಹೆಚ್ಚಿಸಿದ್ದಾರೆ. ಔಷಧಿಗಳ ಬೆಲೆ ಏರಿಕೆ ಆಗಿದೆ. ಶೇಕಡಾ 12ರಷ್ಟು ಜಿಎಸ್ಟಿ ಹಾಕ್ತಿದ್ದಾರೆ. ಕಬ್ಬಿಣದ ಬೆಲೆ, ಸಿಮೆಂಟ್ ಬೆಲೆ, ಏರ್ಕಂಡಿಷನರ್, ಕೂಲರ್, ಶೇಕಡಾ 15ರಷ್ಟು ವಿಮಾನದ ಟಿಕೆಟ್ ದರ ಏರಿಕೆ ಮಾಡಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ರು.


