ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಆನೆ ದಾಳಿಗೆ ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ 65 ವರ್ಷದ ರೈತ ರಾಜಶೆಟ್ಟಿ ಎಂಬುವರ ಮೇಲೆ ಕಾಡಾನೆ ದಾಳಿ ನಡೆದಿದೆ. ನಿನ್ನೆ ಬೆಳಗ್ಗೆ ತೋಟದ ಕೆಲಸಕ್ಕೆ ಹೋಗಿದ್ದ ರೈತನ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಆನೆ ದಾಳಿಯನ್ನು ಖಂಡಿಸಿದ ಮೃತ ರಾಜಶೆಟ್ಟಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಾಡಾನೆ ದಾಳಿಯಿಂದ ಪದೇ ಪದೇ ಜೀವ ಹಾನಿ ಆಗುತ್ತಿದ್ದು, ಆನೆ ದಾಳಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದಾರೆ. ಆನೆ ದಾಳಿ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕೊಡಬೇಕು ಹಾಗೂ ಅರಣ್ಯ ಸಚಿವರು ಸ್ಥಳಕ್ಕೆ ಬರಬೇಕು ಎಂದು ಸ್ಥಳೀಯರ ಪಟ್ಟು ಹಿಡಿದಿದ್ದಾರೆ. ಸಚಿವರೇ ಬಂದು ಸೂಕ್ತ ಭರವಸೆ ನೀಡೊವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮೃತದೇಹದ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಯಾವುದೇ ಜೀವ ಹಾನಿ ಆದಾಗಲೂ ಕುಟುಂಬಸ್ಥರು ನೋವಿಗೆ ಒಳಗಾಗುತ್ತಿದ್ದಾರೆ. ಜನಸಂಖ್ಯೆ ಹೆಚ್ಚಳ ಆಗುತ್ತಿದ್ದ ಹಾಗೆ ಅರಣ್ಯ ಅರಣ್ಯ ಭೂಮಿಯ ಒತ್ತುವರಿಯಿಂದ ಈ ರೀತಿಯ ಕಾಡಾನೆ ದಾಳಿ ಆಗುತ್ತದೆ. ಕಾಡು ಪ್ರಾಣಿಗಳು ಮಾನವನ ಜಾಗವನ್ನು ಅತಿಕ್ರಮಿಸುತ್ತಿಲ್ಲ. ಆದರೆ ಮಾನವ ತನ್ನ ಸ್ವಾರ್ಥಕಾಗಿ ಅರಣ್ಯ ಭೂಮಿಯನ್ನೂ ಒತ್ತುವರಿ ಮಾಡುತ್ತಾನೆ. ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಕ್ಕೆ ಇದು ಪ್ರಮುಖ ಎಂದು ತಜ್ಞರು ಹೇಳುತ್ತಾರೆ. ಆದರೆ..

ಸರ್ಕಾರಗಳು ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಅರಣ್ಯ ಪ್ರದೇಶದಲ್ಲೇ ಅತ್ಯಧಿಕ ಆಹಾರ ಮೂಲಗಳು ಇದ್ದಾಗ ಕಾಡು ಪ್ರಾಣಿಗಳು ಸಹಜವಾಗಿಯೇ ಕಾಡನ್ನು ಬಿಟ್ಟು ಹೊರಕ್ಕೆ ಬರುವುದಿಲ್ಲ. ನೀರಿನ ಮೂಲಗಳನ್ನು ಹಾಳು ಮಾಡುವ ಬದಲು ಕಾಡುಗಳಲ್ಲೇ ನೀರಿನ ಸಂಗ್ರಹಗಳನ್ನು ಮಾಡುವುದು. ಅರಣ್ಯದ ಸುತ್ತಲೂ ಕಾಡು ಪ್ರಾಣಿಗಳು ಹೊರಕ್ಕೆ ಬಾರದ ರೀತಿಯಲ್ಲಿ ಕಂದಕಗಳನ್ನು ಸೃಷ್ಟಿಸುವುದು ಮಾಡುವುದರಿಂದ ಅರಣ್ಯ ಭೂಮಿ ಒತ್ತುವರಿಯೂ ನಿಲ್ಲುತ್ತದೆ. ಜೊತೆಗೆ ಅರಣ್ಯದಿಂದ ಕಾಡು ಪ್ರಾಣಿಗಳು ಹೊರಕ್ಕೆ ಬಾರದಂತೆಯೂ ತಡೆಯಬಹುದು. ಕೇವಲ ಲೆಕ್ಕದಲ್ಲಿ ಎಲ್ಲವನ್ನೂ ತೋರಿಸಿ ಹಣವನ್ನು ನುಂಗಿ ನೀರು ಕುಡಿದರೆ ಈ ರೀತಿಯ ಸಮಸ್ಯೆಗೆ ಎಂದಿಗೂ ಪರಿಹಾರ ಸಿಗಲಾರದು.



