ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜನಾನಗರದಲ್ಲಿ ನಡೆಯಬಾರದ ಘಟನೆ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲ ಮನೆಗೆ ಬಾ ಎಂದು ಪ್ರಿಯಕರನನ್ನು ಕರೆಸಿಕೊಂಡಿದ್ದ ಹುಡುಗು ಪ್ರೇಮಾ, ತನ್ನ ಪ್ರಿಯಕರ ಕಿರಣ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು. ವಿಶೇಷ ಅಂದ್ರೆ ಇದಕ್ಕೂ ಮೊದಲು ಆಕೆ ಕಿರಣ್ ಜೊತೆಗೆ ಆತ್ಮೀಯವಾಗಿ ನಡೆದುಕೊಂಡಿದ್ದಳು. ಆ ಬಳಿಕ ಫಾರಿನ್ ಸ್ಟೈಲ್ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ಹೇಳಿ ಆತನ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿದ್ದಳು. ಕಣ್ಣಿಗೆ ಬಟ್ಟೆ ಕಟ್ಟಿ ಅರೆಬೆತ್ತಲಾಗಿ ಮಾಡಿ ಮೋಹಿಸಿದ್ದಳು. ಇಷ್ಟೆಲ್ಲಾ ಆಗುತ್ತಿದ್ದಾಗ ಕಿರಣ್, ಈಕೆಯ ಪ್ರೀತಿಗೆ ಮನ ಸೋತು ಶರಣಾಗಿದ್ದ. ಅಷ್ಟರಲ್ಲಿ ಬಂದೆ ಎಂದು ಮೇಲೆದ್ದವಳು ಬೇರೊಂದು ಕೋಣೆಯಿಂದ ಸೀಮೆಎಣ್ಣೆ ತಂದು ಮೈಮೇಲೆ ಸುರಿದು ಬೆಂಕಿ ಹಚ್ಚಿಯೇ ಬಿಟ್ಟಳು. ಈ ಎಲ್ಲಾ ದೃಶ್ಯಗಳನ್ನು ತಾನೇ ರೆಕಾರ್ಡ್ ಮಾಡಿಕೊಂಡಿದ್ದಾರೆ ಅನ್ನೋ ಮಾತು ಕೂಡ ಇದೆ.
ಹುಡುಗಿ ಪ್ರೇಮಾ ಹಾಗೂ ಯುವಕ ಕಿರಣ್ ಇಬ್ಬರೂ ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರ ಆಗಿತ್ತು. ಇಬ್ಬರ ನಡುವೆ ಸಲುಗೆಯ ಒಡನಾಟ ಶುರುವಾಗಿತ್ತು. ಆದರೆ ಇತ್ತೀಚಿಗೆ ಕಿರಣ್ ಈಕೆಯಿಂದ ಅಂತರ ಕಾಯ್ದುಕೊಳ್ತಿದ್ದ ಅನ್ನೋ ಅನುಮಾನ ದಟ್ಟವಾಗಿತ್ತು. ಈ ಅನುಮಾನದ ನಡುವೆ ಕಿರಣ್, ತನ್ನ ಹಳೇ ಗೆಳತಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿ, ಫೋಟೋ, ವಿಡಿಯೋಸ್ ಕೂಡ ಮಾಡ್ಕೊಂಡಿದ್ದ. ಅವತ್ತು ಕಿರಣ್ ಮೇಲಿನ ಅನುಮಾನ ದುಪ್ಪಟ್ಟಾಗಿತ್ತು. ಅಂದೇ ಕೊಲೆಗೆ ನಿರ್ಧಾರ ಮಾಡಿದ್ದ ಪ್ರೇಮಾ, ನಿನ್ನೆ ಪ್ರೀತಿಯಿಂದ ಮಾತನಾಡಿಸಿ, ಮನೆಯಲ್ಲಿ ಯಾರೂ ಇಲ್ಲ, ನಾನೊಬ್ಬಳೇ ಇದ್ದೀನಿ ಎಂದು ಮನೆ ಬಳಿಗೆ ಕರೆಸಿಕೊಂಡಿದ್ದಳು. ನನಗೆ ಸಿಗದ ವಸ್ತು ಬೇರೆಯವರಿಗೂ ಸಿಗಬಾರದು ಅನ್ನೋ ಕೆಟ್ಟ ನಿರ್ಧಾರಕ್ಕೂ ಬಂದು ಬಿಟ್ಟಿದ್ದಳು.

ನಾರ್ತ್ ವೆಸ್ಟ್ ಡಿಸಿಪಿ ನಾಗೇಶ್ ಪ್ರಕಾರ ಇಬ್ಬರ ನಡುವೆ ಪ್ರೀತಿ ಮೊಳಕೆ ಒಡೆದಿತ್ತು. ಆದ್ರೆ ಇತ್ತೀಚೆಗೆ ಕಿರಣ್ ಪ್ರೇಮಾಳನ್ನು ಅವೈಡ್ ಮಾಡ್ತಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಇತ್ತೀಚಿಗೆ ಜಗಳ ಕೂಡ ಆಗಿತ್ತು. ಆದರೆ ಪ್ರೇಮಾಳ ಅಣ್ಣನ ಪ್ರಕಾರ ಇಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ಇಬ್ಬರ ನಡುವೆ ಯಾವುದೇ ಪ್ರೀತಿ ಪ್ರೇಮಾ ಅನ್ನೋದು ಗೊತ್ತಿರಲಿಲ್ಲ. ಉತ್ತಮ ಸ್ನೇಹಿತರು ಎಂದುಕೊಂಡಿದ್ದೆವು. ಘಟನೆ ಯಾಕೆ ನಡೀತು ಅನ್ನೋ ಮಾಹಿತಿ ಇಲ್ಲ ಎಂದಿದ್ದಾರೆ. ಇನ್ನೂ ಕಿರಣ್ ಕುಟುಂಬಸ್ಥರಿಗೆ ಇದ್ಯಾವುದರ ಅರಿವೇ ಇಲ್ಲ. ನಮಗೆ ಒಬ್ಬನೇ ಮಗ. ಈಗ ಈ ರೀತಿ ಕೊಂದು ಹಾಕಿದ್ದಾಳೆ. ಮದುವೆ ಆಗಬೇಕು ಎಂದಿದ್ದರೆ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದೆ. ಆದರೆ ಜೀವ ತೆಗೆಯುವುದು ಎಷ್ಟು ಸರಿ..? ನಮಗೆ ಮುಂದೆ ಯಾರು ದಿಕ್ಕು ಎಂದು ಕಿರಣ್ ತಂದೆ ನರಸಿಂಹಯ್ಯ ಕಣ್ಣೀರು ಹಾಕಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತದ ಸಹೋದರಿ ವೀಣಾ ಮಾಧ್ಯಮಗಳ ಜೊತೆಗೆ ಮಾತನಾಡಿ, ತಾಯಿಗೆ ಹುಷಾರಿಲ್ಲ, ICU ವಿನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗನ ವಿಚಾರ ಸದ್ಯಕ್ಕೆ ತಾಯಿಗೆ ಗೊತ್ತಿಲ್ಲ. ಒಂದು ವೇಳೆ ವಿಷಯ ಗೊತ್ತಾದರೆ ಏನಾಗುತ್ತೋ ಏನೋ..? ನನ್ನ ತಮ್ಮನನ್ನು ಸಣ್ಣವನಿಂದಲೂ ಮುದ್ದಾಗಿ ಸಾಕಿದ್ದೆವು. ಈಗ ಈ ರೀತಿ ಸುಟ್ಟು ಹಾಕಿದ್ದಾಳೆ. ಮದುವೆ ವಿಚಾರ ಹೇಳಿದ್ದರೆ ನಾವೇ ಮದುವೆ ಮಾಡಿಸುತ್ತಿದ್ದೆವು ಎನ್ನುತ್ತ ಕಣ್ಣೀರು ಹಾಕಿದ್ದಾರೆ. ಇತ್ತ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಪ್ರೇಮಾಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಕೋರ್ಟ್ಗೆ ಹಾಜರು ಮಾಡುವ ತಯಾರಿಯಲ್ಲಿದ್ದಾರೆ. ಆದರೆ ತಪ್ಪಿತಸ್ಥ ಹೆಣ್ಣು ಪ್ರೇಮಾಳಿಗೆ ಅತ್ಯಂತ ಕಠಿಣ ಶಿಕ್ಷೆಯೇ ಆಗಬೇಕಿದೆ ಎನ್ನುವುದು ಜನಾಭಿಪ್ರಾಯ.


