ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನದಿಗುಡಿ ಬಳಿ ನಡೆದ ಘೋರ ದುರಂತವಿದು. ಗ್ರಾಮದಲ್ಲಿ 24 ವರ್ಷದ ಸತ್ಯವ್ವ 4 ವರ್ಷದ ಹಿಂದೆ ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸಂತೋಷ್ ಎಂಬುವರ ಜೊತೆ ಹಸೆಮಣೆ ಏರಿದ್ದರು. ಆ ಬಳಿಕವೂ ತನ್ನ ಜೀವಕ್ಕೆ ಜೀವ ಎಂದುಕೊಂಡು ಪ್ರೀತಿಸಿದ್ದ ಪ್ರೀಯತಮನನ್ನು ಮರೆಯಲಿಲ್ಲ. ಅತ್ತ ಸಂಸಾರ ಜೀವನವೂ ಅಷ್ಟು ಚೆನ್ನಾಗಿ ಇರಲಿಲ್ಲ. ಸತ್ಯವ್ವನ ಪ್ರೀತಿಯನ್ನು ಮನೆಯವರು ಒಪ್ಪಲಿಲ್ಲ. ಹೀಗಾಗಿ ಇವರ ಮದುವೆ ಬಲವಂತವಾಗಿ ಆಗಿತ್ತು. ಅಂತಿಮವಾಗಿ ಕಳೆದ ಫೆಬ್ರವರಿ 17ರಂದು ತನ್ನ ಪ್ರಿಯಕರ ಕೃಷ್ಣ ಪಾಟೀಲ್ ಜೊತೆ ಮನೆ ಬಿಟ್ಟು ಹೋಗಿದ್ದರು. 15 ದಿನ ಯಾರ ಕಣ್ಣಿಗೂ ಕಾಣದಂತಿದ್ದವರು, ಬೆಳವಾಡಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಜೀವನ ಶುರು ಮಾಡಿದ್ರು.

ಈ ಜೋಡಿಹಕ್ಕಿಗಳನ್ನ ಪತ್ತೆ ಹಚ್ಚಲು ಕುಂಟುಬಸ್ಥರೂ ಇವರನ್ನು ಹುಡುಕಲು ಶುರು ಮಾಡಿದರು. ಇಬ್ಬರನ್ನು ಹುಡುಕಿದ ಬಳಿಕ ಪ್ರಿಯಕರನಿಂದ ಸತ್ಯವ್ವಳನ್ನ ದೂರ ಮಾಡಿದರು. ಆ ಬಳಿಕ ಮಹಾರಾಷ್ಟ್ರದ ಶಿರೋಳಕ್ಕೆ ಕರೆದೊಯ್ದು, ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಶಿಫ್ಟ್ ಆಗಿ, ಮಗಳಿಗೆ ಬ್ರೈನ್ ವಾಷ್ ಮಾಡಲು ಪ್ರಯತ್ನಿಸಿದರು. ಆದರೂ ಪ್ರಿಯಕರನಿಂದ ದೂರವಾಗಿ ಬದುಕಲು ನನ್ನಿಂದ ಸಾಧ್ಯವಿಲ್ಲ ಎಂದು ಸಂಬಂಧಿಕರಿಗೆ ಸತ್ಯವ್ವ ಜವಾಬು ನೀಡಿದಳು. ನಾನು ಕೃಷ್ಣನ ಜೊತೆಯೇ ಇರ್ತೀನಿ ಅಂತಾ ಹಠಕ್ಕೆ ಬಿದ್ದಿದ್ಲು. ಈಕೆಯಿಂದ ನಮ್ಮ ಮನೆಯ ಮರ್ಯಾದೆ ಹರಾಜಾಗ್ತಿದೆ ಎಂದು ಭಾವಿಸಿದ ಪೋಷಕರು ಹಾಗೂ ಸಂಬಂಧಿಕರು ಆಕೆಯನ್ನು ಮುಗಿಸಲು ಸಂಚು ರೂಪಿಸಿದರು.

ಮಾರ್ಚ್ 21ರಂದು ಮತ್ತೆ ಮಗಳ ಬಳಿ ಹೋದ ಪೋಷಕರು, ಆಕೆಯ ಮನವೊಲಿಸುವುದಕ್ಕೆ ಇನ್ನಿಲ್ಲದ ಸರ್ಕಸ್ ಮಾಡಿದರು. ಆದರೆ, ಸತ್ಯವ್ವ ಮಾತ್ರ ಯಾರ ಮಾತನ್ನೂ ಕೇಳೋ ಸ್ಥಿತಿಯಲ್ಲಿ ಇರ್ಲಿಲ್ಲ. ನಮ್ಮ ಪಾಲಿಗೆ ಮಗಳು ಸತ್ತು ಹೋದಳು ಎಂದುಕೊಂಡು ಆಕೆಯನ್ನು ಆಕೆಯ ಇಚ್ಛೆಯಂತೆ ಬಿಟ್ಟಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಪೋಷಕರು, ಸಂಬಂಧಿಕರು ಸೇರಿಕೊಂಡು ಅಕ್ಷರಶಃ ರಣ ರಾಕ್ಷಸಿ ಕೃತ್ಯ ಎಸಗಲು ನಿರ್ಧಾರ ಮಾಡಿದರು. ಮನಸೋ ಇಚ್ಛೆ ಥಳಿಸಿ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದರು. ಆ ನಂತರ ಪೊಲೀಸರಿಗೆ ಸಾಕ್ಷಿ ಸಿಗಬಾರದು ಅಂತಾ ಮೃತದೇಹವನ್ನ ಸುಟ್ಟು ಹಾಕಿದರು. ಇತ್ತ ಪ್ರಿಯತಮೆಗಾಗಿ ಪರಿತಪಿಸುತ್ತಿದ್ದ ಕೃಷ್ಣ ಪಾಟೀಲ್, ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಅಸಲಿ ಸತ್ಯ ಹೊರ ಬಿದ್ದಿದೆ.

ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಂತೆ ಎಲ್ಲಾ ವಿಚಾರ ಬಯಲಿಗೆ ಬಂದಿದೆ. ನಮ್ಮ ಮರ್ಯಾದೆ ತೆಗೆದಳು ಅನ್ನೋ ಕಾರಣಕ್ಕೆ ನಾವೇ ಆಕೆಗೆ ವಿಷವುಣಿಸಿ ಕೊಂದು ಸುಟ್ಟು ಹಾಕಿದ್ದೇವೆ ಎಂದು ಹೆತ್ತವರು ಒಪ್ಪಿಕೊಂಡಿದ್ದಾರೆ. ಪೋಷಕರ ಜೊತೆಗೆ ಕೈ ಜೋಡಿಸಿದ್ದ ಭಾವನ ಸಹಿತ ಎಲ್ಲಾ ಸಂಬಂಧಿಕರೂ ಪೊಲೀಸರ ಕೋಳಕ್ಕೆ ಕೈ ಒಡ್ಡುವಂತಾಗಿದೆ. ವಯಸ್ಸಿಗೆ ಬಂದ ಮಕ್ಕಳು ತಮ್ಮ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಕಾನೂನು ಅವಕಾಶ ಮಾಡಿಕೊಟ್ಟಿದೆ. ಆದರೆ ಮಕ್ಕಳನ್ನು ಸಾಕಿದ್ದೇವೆ ಎನ್ನುವ ಕಾರಣಕ್ಕೆ ಅವರ ಮೇಲೆ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ತಪ್ಪು ದಾರಿಗೆ ಹೋಗುತ್ತಿದ್ದಾಗ, ಅದು ತಪ್ಪು ಎಂದಷ್ಟೇ ಹೇಳಬೇಕು. ಮಕ್ಕಳು ತಮ್ಮ ದಾರಿಯನ್ನು ಸರಿಪಡಿಸಿಕೊಳ್ಳದಿದ್ರೆ ಮಕ್ಕಳಿಂದ ಹೆತ್ತವರು ದೂರವಾಗಿ ಬದುಕು ಸಾಗಿಸುವುದು ಉತ್ತಮ. ಮಕ್ಕಳ ಮೇಲೆ ದ್ವೇಷ ಕಾರುತ್ತಾ ಕಂಬಿ ಹಿಂದೆ ಹೋಗುವುದು ಮೂರ್ಖತನ.



