ಮೈಸೂರು ಜಿಲ್ಲೆ ಕೆ.ಆರ್ ನಗರದ ಅರ್ಕೇಶ್ವರ ದೇವಸ್ಥಾನದ ಬಳಿ ಈಜಲು ನದಿಗೆ ಇಳಿದಿದ್ದ 6 ಜನರು ಪ್ರಾಣ ಬಿಟ್ಟಿದ್ದರು. ದರ್ಗಾಗೆ ಆಗಮಿಸಿದ್ದ 23 ವರ್ಷದ ಯಾಸಿನ್, 13 ವರ್ಷದ ಐಮನ್, 30 ವರ್ಷದ ಫಾತೀಮಾ, 22 ವರ್ಷದ ನೇಹಾನ್, 13 ವರ್ಷದ ಆಫೀಪ, 5 ವರ್ಷದ ಹಮಾಯೂನ್ ಉಮೇನ್ ಸೇರಿದಂತೆ ಸಾಕಷ್ಟ ಮಂದಿ ಹಜರತ್ ಖಾದರ್ ಲಿಂಗವಲ್ಲಿ ದರ್ಗಾ ವೀಕ್ಷಿಸಲಕು ಬಂದಿದ್ದಾಗ ಈ ದುರ್ಘಟನೆ ನಡೆದಿತ್ತು. ಈ ಬಗ್ಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದರು. ನೊಂದ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಿದ್ದರು.

ಮಾನವೀಯತೆ ಆಧಾರದಲ್ಲಿ ನೋಡಿದ ಸಿಎಂ ಸಿದ್ದರಾಮಯ್ಯ ಕರ್ತವ್ಯ ಮೆಚ್ಚುವಂತದ್ದೇ ಆಗಿದೆ. ಆದರೆ ಆ ಮಾನವೀಯತೆ ಜಾತಿ ಧರ್ಮದ ಆಧಾರದಲ್ಲಿ ಮಾತ್ರ ಕಾಣಿಸಿಕೊಂಡರೆ ಸಮಾಜದಲ್ಲಿ ಸರಿಯಿಲ್ಲ ಅನ್ನೋ ಭಾವನೆ ವ್ಯಕ್ತವಾಗುತ್ತದೆ. ಸಿಎಂ ಸಿದ್ದರಾಮಯ್ಯ ಮೇಲೆ ಈಗ ಕೇಳಿ ಬಂದಿರುವುದು ಇದೇ ರೀತಿಯ ಆರೋಪ. ಮೈಸೂರಿನಲ್ಲಿ ನಡೆದ ಘಟನೆಗೆ ಕೂಡಲೇ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಘೋಷಣೆ ಮಾಡಿದರು. ಅಲ್ಲಿ ಸತ್ತವರು ಮುಸ್ಲಿಮರು ಅನ್ನೋ ಕಾರಣವೋ ಅಥವಾ ತನ್ನ ತವರು ಜಿಲ್ಲೆಯ ಜನ ಎನ್ನುವ ಅಭಿಮಾನವೋ ಅದು ಬೇರೆ ವಿಚಾರ. ಆದರೆ ಇದಕ್ಕೂ ಒಂದೆರಡು ದಿನ ಮುಂಚಿತವಾಗಿ ರಾಯಚೂರು, ಯಾದಗಿರಿಯಲ್ಲಿ ಸತ್ತವರ ಬಗ್ಗೆ ಯಾಕಿಲ್ಲ ಕನಿಕರ..?

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ನಲ್ಲಿ ದುರಂತ ಸಂಭವಿಸಿದೆ. ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಬರೋಬ್ಬರಿ 9 ಜನರು ಸಜೀವ ದಹನ ಆಗಿದ್ದರು. ಯಾದಗಿರಿಯ ಸುರಪುರದಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಹೊಸ ಕಾರಿಗೆ ಪೂಜೆ ಮಾಡಿರುವ ಉದ್ದೇಶದಿಂದ ತೆರಳುತ್ತಿದ್ದರು. ರಾಯಚೂರು ಜಿಲ್ಲೆ ಸಿರವಾರದ ಕೃಷ್ಣಾನಾಯಕ್ ಕುಟುಂಬ ಸುಟ್ಟು ಕರಕಲಾಗಿತ್ತು. ಆ ನಂತರ ಮತ್ತೊಂದು ಘಟನೆಯಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಭಕ್ತರ ಬೊಲೆರೋ ವಾಹನಕ್ಕೆ ಟ್ಯಾಂಕರ್ ಡಿಕ್ಕಿಯಾಗಿತ್ತು. ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ್ರೆ, ಮತ್ತೆ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ರು. ಹಾಸನ ಮೂಲದ 9 ಜನ, ಚಿಕ್ಕಮಗಳೂರು ಮೂಲದ ಇಬ್ಬರು ಸಾವನ್ನಪ್ಪಿದಾಗಲು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲಿಲ್ಲ. ಪರಿಹಾರವನ್ನೂ ಘೋಷಿಸಿದಲಿಲ್ಲ.
ಅಪಘಾತ ಸಂಭವಿಸಿದಾಗ ಗುಂಪಿನಲ್ಲಿ ಸತ್ತರೆ ಸರ್ಕಾರ ಪರಿಹಾರ ಕೊಡುತ್ತದೆ. ಆದರೆ ಒಂಟಿಯಾಗಿ ಅಪಘಾತ ಸಂಭವಿಸಿದರೆ ಸರ್ಕಾರ ಮೂಸಿಯೂ ನೋಡಲ್ಲ. ಈ ತಾರತಮ್ಯ ಸರಿಯಲ್ಲ ಅನ್ನೋದು ಸಾಕಷ್ಟು ಜನರ ಭಾವನೆ. ಆದರೆ ಸರ್ಕಾರ ಈಗ ಗುಂಪು ಗುಂಪಾಗಿ ಸತ್ತರೂ ಸರ್ಕಾರ ಜಾತಿ ಧರ್ಮ ಯಾವುದು ಎಂದು ಪರಿಶೀಲಿಸಿ ಪರಿಹಾರ ನೀಡುವ ಪರಿಪಾಠವನ್ನು ಹುಟ್ಟು ಹಾಕಿದೆ. ಮೈಸೂರಿನಲ್ಲಿ ಸತ್ತವರು ಮುಸ್ಲಿಂ ಸಮುದಾಯದವರು ಅನ್ನೋ ಕಾರಣಕ್ಕೆ ಥಟ್ ಎಂದು ಪರಿಹಾರ ನೀಡಿದ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ, ರಾಯಚೂರು, ಯಾದಗಿರಿಯಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದವರು ಹಿಂದೂಗಳು, ದೇವಸ್ಥಾನಕ್ಕೆ ತೆರಳುತ್ತಿದ್ದಾಗ ನಡೆದ ಘಟನೆ ಅನ್ನೋ ಕಾರಣಕ್ಕೆ ಪರಿಹಾರ ಕೊಡಲಿಲ್ಲವೇ ಅನ್ನೋ ಪ್ರಶ್ನೆ ಎದ್ದಿದೆ. ಈ ಬಗ್ಗೆ JDS ಶಾಸಕ ಶರಣಗೌಡ ಕಂದಕೂಡ ಸಿಎಂ ಸಿದ್ದರಾಮಯ್ಯಗೆ ನೇರವಾಗಿ ಪತ್ರವನ್ನೂ ಬರೆದಿದ್ದಾರೆ. ಸರ್ಕಾರ ಉತ್ತರ ಕೊಡುತ್ತದೆ ಕಾದು ನೋಡ್ಬೇಕು.


