ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂದು ಅಧಿಕೃತವಾಗಿ ಘೋಷಣೆ ಆಗಲಿದೆ. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಎಲ್ಲಾ ಸಚಿವರಿಗೆ ಬ್ರೇಕ್ಫಾಸ್ಟ್ಗೆ ಆಹ್ವಾನ ಮಾಡಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಎಲ್ಲಾ ಸಚಿವರಿಗೆ ಧನ್ಯವಾದ ತಿಳಿಸಿದ ನಂತರ ಮಧ್ಯಾಹ್ನದ ಬಳಿಕ ಲೋಕಭವನಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಈಗಾಗಲೇ ಎಲ್ಲವೂ ನಿರ್ಧಾರ ಆಗಿದ್ದು, ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಲಿದ್ದಾರೆ. ಸುದ್ದಿಗೋಷ್ಠಿ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಎಲ್ಲವನ್ನೂ ಮಾತನಾಡ್ತೇನೆ ಎಂದಿದ್ದಾರೆ.

ನಾಳೆ ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನೂತನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಡಿ.ಕೆ ಶಿವಕುಮಾರ್ ಅವರನ್ನ ಆಯ್ಕೆ ಮಾಡಲಿದ್ದಾರೆ. ಆ ಬಳಿಕ ಡಿ.ಕೆ ಶಿವಕುಮಾರ್ ಕಾಂಗ್ರೆಸ್, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಹೊಸದಾಗಿ ಡಿ.ಕೆ ಶಿವಕುಮಾರ್ ಸಿಎಂ ಆಗಿ ಆಯ್ಕೆಯಾದ ಬಳಿಕ, ನಾಲ್ವರನ್ನು ಡಿಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ. ಈ ಮಾಹಿತಿ ಮಾಧ್ಯಮಗಳಲ್ಲಿ ಹೊರ ಬೀಳ್ತಿದ್ದ ಹಾಗೆ ಸಿದ್ದರಾಮಯ್ಯ ರಾಜೀನಾಮೆಗೆ ವಿರೋಧ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಆಪ್ತ ಸಚಿವರು ಬಂದು ಚರ್ಚಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ, ಜಮೀರ್ ಅಹ್ಮದ್, ಎಂ.ಬಿ ಪಾಟೀಲ್, ಆರ್.ಬಿ ತಿಮ್ಮಾಪುರ್, ನಜೀರ್ ಅಹ್ಮದ್ ಚರ್ಚೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮನೆಗೆ ಬಂದಿದ್ದ ಕಾಂಗ್ರೆಸ್ ನಾಯಕರುಗಳು ಸಿದ್ದರಾಮಯ್ಯರನ್ನ ಮನವೊಲಿಸ್ತಿದ್ದಾರೆ. ರಾಜೀನಾಮೆಗೆ ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಿ, ಇಲಾಖೆಗಳಲ್ಲಿ ಕೆಲಸಗಳು ಬಾಕಿ ಇವೆ. ಅನುದಾನದ ಆದೇಶಗಳನ್ನ ಕ್ಲಿಯರ್ ಮಾಡ್ಬೇಕು. ಹೀಗಾಗಿ ನೀವು ರಾಜೀನಾಮೆ ನೀಡಿದ್ರೆ, ಆ ಕೆಲಸಗಳು ಅರ್ಧಂಬರ್ಧ ಆಗುತ್ತವೆ. ಹೈಕಮಾಂಡ್ ಬಳಿ 2 ತಿಂಗಳ ಕಾಲಾವಕಾಶ ತೆಗೆದುಕೊಳ್ಳಿ. ಇಲ್ಲದಿದ್ದರೆ CLP ಸಭೆ ಮೂಲಕ ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲು ತಿಳಿಸಿ, ಯಾರಿಗೆ ಶಾಸಕರ ಬೆಂಬಲ ಇರುತ್ತದೆಯೋ ಅವರು ಮುಖ್ಯಮಂತ್ರಿ ಆಗಲಿ ಎಂದು ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಯಾವುದೇ ಪ್ರಶ್ನೆಗಳಿಗೂ ಉತ್ತರಿಸುವ ಕೆಲಸ ಮಾಡದೆ ಮೌನಕ್ಕೆ ಶರಣಾಗಿದ್ದಾರೆ.
ಇದೀಗ ಸಿದ್ದರಾಮಯ್ಯ ಸುದ್ದಿಗೋಷ್ಠಿ ಕಡೆಗೆ ಎಲ್ಲರ ಚಿತ್ತ ನೆಟ್ಟಿದ್ದು, ಇವತ್ತು ಸಿಎಂ ಸಿದ್ದರಾಮಯ್ಯ ಏನು ಹೇಳ್ತಾರೆ..? ರಾಜೀನಾಮೆ ನೀಡ್ತಾರಾ ಅನ್ನೋ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ ಸಚಿವ ಹೆಚ್.ಸಿ ಮಹದೇವಪ್ಪ ನಿವಾಸದಲ್ಲಿ ಸಿದ್ದರಾಮಯ್ಯ ಆತ್ಯಾಪ್ತ ಸಚಿವರು ಸಭೆ ನಡೆಸಿದ್ದಾರೆ. ದೆಹಲಿಯಿಂದ ಬಂದ ಸತೀಶ್ ಜಾರಕಿಹೊಳಿ, ನೇರವಾಗಿ ಮಹದೇವಪ್ಪಗೆ ನಿವಾಸಕ್ಕೆ ತೆರಳಿ, ಮಾತುಕತೆ ನಡೆಸಿದ್ದಾರೆ. ಇನ್ನೊಂದು ಕಡೆ ದಲಿತ ಸಿಎಂ ಕೂಗು ಶುರುವಾಗಿದ್ದು ಸ್ವತಃ ಡಾ ಜಿ ಪರಮೇಶ್ವರ್, 40ಕ್ಕೂ ಹೆಚ್ಚು ಶಾಸಕರ ಸಹಿ ಸಂಗ್ರಹ ಮಾಡಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಜಾತಿಗಣತಿ ವರದಿ ಸರ್ಕಾರದ ಕೈ ಸೇರಿದ್ದು, ಜಾತಿಗಣತಿ ಮುಂದಿಟ್ಟು ಸಿಎಂ ಸಿದ್ದರಾಮಯ್ಯ ಹೈಕಮಾಂಡ್ಗೆ ಠಕ್ಕರ್ ಕೊಡ್ತಾರಾ..? ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.


