ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾಳೆ ಡಿ.ಕೆ ಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ. ಲೋಕಭವನದ ಗಾಜಿನ ಮನೆಯಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಪ್ರಮಾಣವಚನ ಭೋದಿಸಲಿದ್ದಾರೆ. ನಾಳೆ ಸಂಜೆ 4:05ಕ್ಕೆ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಈಗಾಗಲೇ ಲೋಕಭವನದಲ್ಲಿ ಸಿದ್ಧತೆಗಳು ನಡೆಯುತ್ತಿದೆ.. ಪದಗ್ರಹಣ ಸಮಾರಂಭದಲ್ಲಿ ಹೈಕಮಾಂಡ್ ನಾಯಕರುಗಳು ಭಾಗಿಯಾಗುವ ನಿರೀಕ್ಷೆ ಇದೆ.

ಡಿ.ಕೆ ಶಿವಕುಮಾರ್ ಜೊತೆಗೆ 12 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಯುವ ಸಾಧ್ಯತೆ ಇದೆ. ಕೆ.ಜೆ ಜಾರ್ಜ್, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಡಾ. ಯತೀಂದ್ರ, ಸತೀಶ್ ಜಾರಕಿಹೊಳಿ, ರೂಪಕಲಾ ಶಶಿಧರ್, ಚಲುವರಾಯಸ್ವಾಮಿ, ಎಂ. ಬಿ ಪಾಟೀಲ್, ಕೃಷ್ಣ ಭೈರೇಗೌಡ ಸೇರಿ ಯುಟಿ ಖಾದರ್ ಸಚಿವರಾಗಿ ಪ್ರಮಾಣ ವಚನ ಪಡೆಯುವ ಸಾಧ್ಯತೆ ಇದೆ. ಇದರಲ್ಲಿ ಜಾರ್ಜ್, ಪ್ರಿಯಾಂಕ್, ಯತೀಂದ್ರ, ಖಾದರ್, ಕೃಷ್ಣಭೈರೇಗೌಡ, ರಾಮಲಿಂಗಾ ರೆಡ್ಡಿ ಹೆಸರು ಅಂತಿಮವಾಗಿದೆ ಎನ್ನಲಾಗಿದೆ

ನಾಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ. ಪ್ರಮಾಣ ವಚನಕ್ಕೆ ಭರ್ಜರಿ ತಯಾರಿ ಮಾಡಲಾಗಿದೆ. ಲೋಕಭವನದ ರಸ್ತೆಯಲ್ಲಿ ಎಲ್ಇಡಿ ಅಳವಡಿಸಲಾಗಿದೆ. ಡಿ.ಕೆ ಶಿವಕುಮಾರ್ ಅವರ ಬೃಹತ್ ಬ್ಯಾನರ್ಗಳನ್ನ ಹಾಕಲಾಗಿದೆ.. ನೂತನ ಸಿಎಂ ಡಿ.ಕೆ ಶಿವಕುಮಾರ್ಗೆ ಅಭಿನಂದನೆಗಳು ಎಂಬ ಪೋಸ್ಟರ್ಗಳು ರಾರಾಜಿಸ್ತಿವೆ. ಇದರ ಜೊತೆಗೆ ರಸ್ತೆಯುದ್ದಕ್ಕೂ ಕಾಂಗ್ರೆಸ್ ಬಾವುಟಗಳು ರಾರಾಜಿಸ್ತಿವೆ.

ವಿಧಾನಸೌಧ ಹಾಗೂ ಹೈಕೋರ್ಟ್ ಮುಂದೆ ಡಿ.ಕೆ ಶಿವಕುಮಾರ್ ಕಟೌಟ್ ಹಾಕಲು ಮುಂದಾಗಿದ್ದವರಿಗೆ ಹೈಕೋರ್ಟ್ ಶಾಕ್ ಕೊಟ್ಟಿದೆ. ಕೂಡಲೇ ಕಟೌಟ್ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ. ಡಿ,ಕೆ ಶಿವಕುಮಾರ್ಗೆ ಶುಭಾಶಯ ಕೋರಿ ಬೃಹತ್ ಕಟೌಟ್ ಹಾಕಲು ಅಭಿಮಾನಿಗಳು ಮುಂದಾಗಿದ್ದರು. ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳು ಗಮನಿಸಿ ಕಟೌಟ್ ತೆರವಿಗೆ ಸೂಚನೆ ಕೊಟ್ಟ ಬಳಿಕ ಕೂಡಲೇ ಕಟೌಟ್ಗಳನ್ನು ತೆರವು ಮಾಡಲಾಗಿದೆ. ನಾಳೆ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದ್ದು, ಜನರು ಶಕ್ತಿ ಕೇಂದ್ರದ ಸುತ್ತಮುತ್ತ ಹೋಗದಿದ್ದರೆ ಒಳಿತು.


