ತಮಿಳುನಾಡಿನ ಮಧುರೈನಲ್ಲಿ ನಡೆದಿದ್ದ ಅಪ್ಪ-ಮಗನ ಲಾಕಪ್ ಡೆತ್ ಕೇಸ್ನಲ್ಲಿ ನೊಂದ ಕುಟುಂಬಕ್ಕೆ ಕೊನೆಗೂ ನ್ಯಾಯ ಲಭಿಸಿದೆ. ಜೂನ್ 19ರಂದು ಮೊಬೈಲ್ ಅಂಗಡಿ ಮಾಲೀಕರಾಗಿದ್ದ ಅಪ್ಪ ಮಗನನ್ನು ಅರೆಸ್ಟ್ ಮಾಡಲಾಗಿತ್ತು. ಅವಧಿ ಮೀರಿ ಮೊಬೈಲ್ ಅಂಗಡಿ ಓಪನ್ ಮಾಡಲಾಗಿತ್ತು ಎಂದು ಆರೋಪಿಸಿದ್ದ ಪೊಲೀಸರು, ಅಪ್ಪ ಮಗನನ್ನು ಅರೆಸ್ಟ್ ಮಾಡಿದ್ದ ಪೊಲೀಸರು ಕಸ್ಟಡಿಯಲ್ಲಿ ಟಾರ್ಚರ್ ಕೊಟ್ಟು ಸಾವಿಗೆ ಕಾರಣ ಆಗಿದ್ದರು. ಆರೋಪಿಗಳಾಗಿದ್ದ 9 ಮಂದಿ ಪೊಲೀಸರು ತಪ್ಪಿತಸ್ಥರು ಎಂದು ನಿರ್ಧಾರಕ್ಕೆ ಬಂದಿದ್ದ ಮಧುರೈ ಜಿಲ್ಲಾ ಕೋರ್ಟ್, ಮರಣದಂಡನೆ ವಿಧಿಸಿ ಆದೇಶ ನೀಡಿದೆ.

ಮಧುರೈ ಜಿಲ್ಲಾ ಕೋರ್ಟ್ನ ನ್ಯಾಯಾಧೀಶರಾದ ಜಿ ಮುತ್ತುಕುಮಾರನ್ ಆದೇಶ ಮಾಡಿದ್ದು, ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದಿದ್ದಾರೆ. ಅದೂ ಅಲ್ಲದೆ ಮೊಬೈಲ್ ಅಂಗಡಿಯನ್ನು ಅವಧಿ ಮೀರಿ ತೆರೆದಿದ್ದರು ಅನ್ನೋ ಆರೋಪವೂ ಕೂಡ ಸುಳ್ಳು ಅನ್ನೋದು ಸಾಬೀತಾಗಿದೆ. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸರೇ ಈ ರೀತಿ ಅಮಾನುಷವಾಗಿ ಕೊಲೆ ಮಾಡಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಕಡ್ಡಿ ಮುರಿದಂತೆ ಹೇಳಿದ್ದು, 9 ಮಂದಿ ಆರೋಪಿ ಪೊಲೀಸರು ಕ್ಷಮೆಗೆ ಅರ್ಹರಲ್ಲ ಎಂದು ತೀರ್ಪು ನೀಡಿದೆ.

ಕೊರೊನಾ ಲಾಕ್ಡೌನ್ ವೇಳೆ ಅವಧಿ ಮೀರಿ ಮೊಬೈಲ್ ಶಾಪ್ ಓಪನ್ ಮಾಡಿದ್ದರು ಅನ್ನೋ ಕಾರಣ ಕೊಟ್ಟು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಎಸ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್ಗಳಾದ ಕೆ ಬಾಲಕೃಷ್ಣ, ಪಿ ರಘು ಗಣೇಶ್, ಪೊಲೀಸ್ ಸಿಬ್ಬಂದಿಗಳಾದ ಎಸ್. ಮುರುಘನ್, ಎ ಸಾಮಿದೊರೈ, ಎಂ. ಮುತ್ತುರಾಜ್, ಎಸ್. ಚೆಲ್ಲ ದೊರೈ, X. ಥಾಮಸ್ ಫ್ರಾನ್ಸಿಸ್, ಎಸ್. ವೇಲು ಮುತ್ತು ಮತ್ತು ವಿಶೇಷ ಸಬ್ ಇನ್ಸ್ಪೆಕ್ಟರ್ ಪೌಲ್ ದೊರೈ ಮೇಲೆ ಹೊರಿಸಿದ್ದ ಕೊಲೆ ಅಪರಾಧ ಸಾಬೀತಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 2020ರ ಜೂನ್ 19ರಂದು ಈ ಘಟನೆ ನಡೆದಿತ್ತು.

ತೂತುಕುಡಿ ಜಿಲ್ಲೆಯ ಸತ್ತನ್ಕುಲಂನಲ್ಲಿ ಮೊಬೈಲ್ ಅಂಡಿ ನಡೆಸುತ್ತಿದ್ದ ಪಿ ಜಯರಾಜ್ (58) ಮತ್ತು ಜೆ ಬೆನಿಕ್ಸ್ (31) ಅವರನ್ನು ಬಂಧನ ಮಾಡಿ, ಸ್ಟೇಷನ್ನಲ್ಲಿ ಮಾರಣಾಂತಿಕ ಹಿಂಸೆ ಕೊಟ್ಟಿದ್ದರಿಂದ ಇಬ್ಬರೂ ಲಾಕಪ್ನಲ್ಲೇ ಸಾವನ್ನಪ್ಪಿದ್ದರು. ಸಿಬಿಐ ವಿಚಾರಣೆ ನಡೆಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಮದ್ರಾಸ್ ಹೈಕೋರ್ಟ್ನ ನ್ಯಾಯಧೀಶರಾದ ಉಸ್ತುವಾರಿಯಲ್ಲಿ ತನಿಖೆ ನಡೆದಿದ್ದು, ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಮೃತ ಕುಟುಂಬಸ್ಥರಿಗೆ ಬರೋಬ್ಬರಿ 1.40 ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ಕೊಡಬೇಕು ಎಂದು ಕೋರ್ಟ್ ಆದೇಶ ಮಾಡಿದೆ.


