ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆ ಹೈಡ್ರಾಮಾ ದಿನ ದಿನಕ್ಕೂ ಹೆಚ್ಚಾಗ್ತಿದೆ. ನೂತನ ಸಿಎಂ ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ದಲಿತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ಕೊಡಲಾಗಿದೆ. ನಾಳೆ ಬೃಹತ್ ಪ್ರತಿಭಟನೆ ನಡೆಸಲು ದಲಿತ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 25ಕ್ಕೂ ಅಧಿಕ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದು, ಎರಡನೇ ಪಟ್ಟಿಯಲ್ಲಿ HC ಮಹದೇವಪ್ಪ ಸೇರಿದಂತೆ ಕನಿಷ್ಠ 5 ಮಂದಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಿದ್ದಾರೆ. ಈ ಹೋರಾಟದಲ್ಲಿ ಹಿರಿಯ ದಲಿತ ನಾಯಕರು, ಸಾಹಿತಿಗಳು ಹಾಗೂ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೂ ಶಕ್ತಿ ಪ್ರದರ್ಶನಕ್ಕೆ ದಲಿತ ಸಮುದಾಯದ ನಾಯಕರು ಸಜ್ಜಾಗಿದ್ದಾರೆ. ಮಾಜಿ ಸಚಿವ ಹೆಚ್.ಸಿ ಮಹದೇವಪ್ಪಗೆ ಸಚಿವ ಸ್ಥಾನ ನೀಡುವಂತೆ ದಲಿತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ಈ ಕುರಿತು ಇವತ್ತು ವರುಣಾ ಕ್ಷೇತ್ರ ವ್ಯಾಪ್ತಿಯ ಸುತ್ತೂರಿನಲ್ಲಿ ಸಭೆ ನಡೆಸಿ, ಕಾಂಗ್ರೆಸ್ ಹೈಕಮಾಂಡ್ಗೆ ಹಕ್ಕೋತ್ತಾಯ ಮಾಡಲಾಗಿದೆ. ದಲಿತರೇ ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಆದರೆ ಸರ್ಕಾರದಲ್ಲಿ ದಲಿತರನ್ನ ಕಡೆಗಣಿಸೋದು ಸರಿಯಲ್ಲ. 2ನೇ ಪಟ್ಟಿಯಲ್ಲಿ ಶಾಸಕ H C ಮಹದೇವಪ್ಪಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಮುಜುರಾಯಿ ಖಾತೆಯನ್ನ ಜಲಸಂಪನ್ಮೂಲ ಖಾತೆ ಸಚಿವ ರಾಮಲಿಂಗಾರೆಡ್ಡಿಗೆ ನೀಡಬೇಕು ಎಂದು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಅರ್ಚಕರು ಆಗ್ರಹಿಸಿದ್ದಾರೆ. ಅರ್ಚಕರು, ಆಗಮಿಕರ ಸಂಘ ಸುದ್ದಿಗೋಷ್ಠಿ ನಡೆಸಿ, ಸಚಿವ ರಾಮಲಿಂಗಾರೆಡ್ಡಿ ಈ ಹಿಂದೆ ಮುಜರಾಯಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನ ತಂದಿದ್ದಾರೆ. ಅರ್ಚಕರು, ಆಗಮಿಕರಿಗೆ ನೆರವಾಗುವ ಕಾರ್ಯಕ್ರಮಗಳನ್ನೂ ಕೊಟ್ಟಿದ್ದಾರೆ. ಧಾರ್ಮಿಕಸೌಧವನ್ನು ರಾಮಲಿಂಗಾರೆಡ್ಡಿ ಅವರಿಂದಲೇ ಉದ್ಘಾಟನೆ ಮಾಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ರಾಮಲಿಂಗಾರೆಡ್ಡಿಗೆ ಮುಜರಾಯಿ ಖಾತೆ ನೀಡಿದರೆ ಅಭಿನಂದನಾ ಕಾರ್ಯಕ್ರಮ ಮಾಡುತ್ತೇವೆ. ಒಂದು ವೇಳೆ ಮುಜರಾಯಿ ಇಲಾಖೆಯನ್ನು ರಾಮಲಿಂಗಾರೆಡ್ಡಿಗೆ ನೀಡದಿದ್ದರೆ ಅಭಿನಂದನಾ ಸಮಾವೇಶವನ್ನು ಪ್ರತಿಭಟನಾ ಸಮಾವೇಶವನ್ನಾಗಿ ಬದಲಾವಣೆ ಮಾಡ್ತೀವಿ ಅಂತ ಮುಜುರಾಯಿ ದೇವಾಲಯಗಳ ಸಂಘದ ಅಧ್ಯಕ್ಷ ಶ್ರೀವತ್ಸ ಎಚ್ಚರಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರದ 2.O ಅವಧಿಯಲ್ಲಿ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ಮುಟ್ಟುವ ಸಾಧ್ಯತೆಯಿದೆ. ಈಗ ತಾತ್ಕಾಲಿಕವಾಗಿ ಕೇವಲ 13 ಜನರಿಗೆ ಅವಕಾಶ ಕೊಟ್ಟಾಗಲೇ ಈ ರೀತಿ ಆಕ್ರೋಶದ ಕಟ್ಟೆ ಹೊಡೆದಿದ್ದು, ಉಳಿದ 20 ಸಚಿವ ಸ್ಥಾನ ಹಂಚಿಕೆ ಆದ ಬಳಿಕ ಮತ್ತಷ್ಟು ಆಕ್ರೋಶ ಹೆಚ್ಚಾಗುವ ಸಾಧ್ಯತೆಯಿದೆ.


