ಕುಡಿದ ಅಮಲಿನಲ್ಲಿ ಮಚ್ಚಿನಿಂದ ಕೊಚ್ಚಿ ಯುವಕನ ಕಗ್ಗೊಲೆ. ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬಗೆರೆ ಕ್ರಾಸ್ನಲ್ಲಿ ನಡೆದಿರುವ ಭೀಕರ ಹತ್ಯೆ. 28 ವರ್ಷದ ವಿಜಯ್ ಕೊಲೆಯಾದ ಯುವಕ. ಮಾಗಡಿ ಮೂಲದ ವಿಜಯ್ ಕಡಬಗೆರೆ ಬಳಿ ವಾಸವಾಗಿದ್ದನು ಎನ್ನಲಾಗಿದೆ. ರಾತ್ರಿ ಮೂರ್ನಾಲ್ಕು ಜನ ಸೇರಿ ಪಾರ್ಟಿ ಮಾಡಿದ ಬಳಿಕ ಕಡಬಗೆರೆ ಕ್ರಾಸ್ ಬಳಿಯ ಜನಪ್ರಿಯ ಅಪಾರ್ಟ್ಮೆಂಟ್ ಬಳಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದು, ಬಾಲ್ಯದ ಗೆಳೆಯನೇ ವಿಜಯ್ನನ್ನ ಕೊಲೆ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.

ಪತ್ನಿ ಜೊತೆ ಆತ್ಮೀಯ ಸಲುಗೆ ಹೊಂದಿದ್ದನ್ನು ಪ್ರಶಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತ ವಿಜಯ್ ಪತ್ನಿ ಮೇಲೂ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. 10 ವರ್ಷದ ಹಿಂದೆ ಆಶಾ ಎಂಬಾಕೆಯ ಜೊತೆ ಮದುವೆಯಾಗಿದ್ದ ವಿಜಯ್. ಧನಂಜಯ ಅಲಿಯಾಸ್ ಜಯ, ವಿಜಯ ಇಬ್ಬರೂ ಬಾಲ್ಯ ಸ್ನೇಹಿತರು. ಮೂಲತ: ಮಾಗಡಿ ಮೂಲದವರಾಗಿದ್ದು, ಸುಂಕದಕಟ್ಟೆಯಲ್ಲಿ ವಾಸವಾಗಿದ್ರು. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜಯ್ ಹೆಂಡತಿ ಆಶಾ ಜೊತೆಗೆ ಸ್ನೇಹಿತ ಧನುಂಜಯ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಧನಂಜಯ್ ಮತ್ತು ಆಶಾ ಒಟ್ಟಿಗೆ ಇದ್ದ ಪೋಟೋಗಳು ಸಿಕ್ಕಿಬಿದ್ದಿದ್ದವು. ಜೊತೆಗೆ ಇಬ್ಬರೂ ಒಟ್ಟಿಗೆ ಇದ್ದಾಗಲೂ ಗಂಡನಿಗೆ ಸಿಕ್ಕಿಬಿದ್ದಿದ್ರು ಎನ್ನಲಾಗಿದೆ. ವಿಚಾರ ತಿಳಿದ ಬಳಿಕ ಗಲಾಟೆ ಮಾಡಿ, ಅಂತಿಮವಾಗಿ ಕಡಬಗೆರೆಯ ಮಾಚೋಹಳ್ಳಿ ಬಳಿ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು. ನಿನ್ನೆ ಸಂಜೆ ವೇಳೆಗೆ ಮನೆಯಿಂದ ಹೊರಟ ವಿಜಯ್, ಮಾಚೋಹಳ್ಳಿಯ ಡಿ-ಗ್ರೂಪ್ ಲೇಔಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆ ಸಂಬಂಧ ಆಶಾಳನ್ನ ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹೆಂಡತಿ ಜೊತೆಗೆ ಬಾಲ್ಯ ಸ್ನೇಹಿತ ಸಲುಗೆ ಹೊಂದಿದ್ರಿಂದ ಏರಿಯಾ ಬದಲಾವಣೆ ಮಾಡಿದ್ರೂ ಕೂಡ ಇಬ್ಬರ ನಡುವೆ ಅಕ್ರಮ ಸಂಬಂಧ ಮುಂದುವರಿದಿತ್ತಾ..? ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಆಶಾ ಹಾಗೂ ಧನಂಜಯ್ ಅಲಿಯಾಸ್ ಜಯ ಒಟ್ಟಿಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿಸುತ್ತಿದೆ. ಆರೋಪಿಗಳು ನಿನ್ನೆ ಕಡಬಗೆರೆ ಕ್ರಾಸ್ಗೆ ಬಂದು ಪಾರ್ಟಿ ಮಾಡಿ, ಆ ಬಳಿಕ ವಿಜಯ್ನನ್ನು ಕರೆಸಿಕೊಂಡು ಕೊಲೆ ಮಾಡಿದ್ರಾ..? ಅನ್ನೋ ಅನುಮಾನದ ಮೇಲೆ ಪೊಲೀಸ್ರು ತನಿಖೆ ಮಾಡ್ತಿದ್ದಾರೆ. ಆದರೂ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡವನನ್ನು ದೂರ ಇಟ್ಟರೂ ಅಕ್ರಮ ಸಂಬಂಧಕ್ಕೆ ಗಂಡನ ಕೊಲೆ ನಡೆದಿರುವುದು ವಿಪರ್ಯಾಸವೇ ಸರಿ.


