ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯ ಜನಪ್ರಿಯ ಲೇಔಟ್ನಲ್ಲಿ ವಿಜಯ್ ಎಂಬಾತನ ಕೊಲೆ ನಡೆದಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಹೆಂಡತಿಯೇ ಮಾಸ್ಟರ್ ಮೈಂಡ್ ಅನ್ನೋದು ಗೊತ್ತಾಗಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಹೆಂಡತಿಯ ಅಕ್ರಮ ಸಂಬಂಧ ವಿಚಾರವಾಗಿ ಬಾಲ್ಯ ಸ್ನೇಹಿತನನ್ನೇ ಕೊಲೆ ಮಾಡಿದ್ದ ಅನ್ನೋದು ಮಾದನಾಯಕನಹಳ್ಳಿ ಪೊಲೀಸರಿಗೆ ಗೊತ್ತಾಗಿದೆ. ಕೊಲೆ ಮಾಡಿದ ಒಂದೇ ದಿನದಲ್ಲಿ 6 ಜನ ಆರೋಪಿಗಳ ಬಂಧನ ಮಾಡಲಾಗಿದೆ.
ವಿಜಯ್ನನ್ನು ಮದುವೆ ಆಗಿದ್ದ ಆಶಾ, ಆತನ ಸ್ನೇಹಿತ ಧನಂಜಯ (41), ಸಾಗರ್ (23), ರಮೇಶ್ (42), ಹೇಮಂತ (18), ವಿವೇಕ (20), ರೋಹಿತ್ (22) ಬಂಧಿತ ಆರೋಪಿಗಳು. ನನ್ನ ಹೆಂಡತಿ ತಂಟೆಗೆ ಬರಬೇಡ ಎಂದು ಒಂದು ವಾರದ ಹಿಂದೆ ವಿಜಯ್ ಅವಾಜ್ ಹಾಕಿದ್ದ ಎನ್ನಲಾಗಿದೆ. ಇದೇ ಭಯದಲ್ಲಿ ವಿಜಯ್ನ ಕೊಲೆ ಮಾಡಲು ಧನಂಜಯ್ ನಿರ್ಧಾರ ಮಾಡಿದ್ದ. ಕೊಲೆ ನಡೆದ ದಿನ ತನ್ನ ಹುಡುಗರ ಗ್ಯಾಂಗ್ ಜೊತೆಗೆ ಬಂದಿದ್ದ ಧನಂಜಯ್, ಬಾರೋ ಇಲ್ಲಿ ಅದೇನು ಮಾಡ್ತೀಯಾ ನೋಡ್ತಿನಿ ಎಂದು ಅವಾಜ್ ಹಾಕಿದ್ದ ಧನಂಜಯ್.
ಈ ವೇಳೆ ವಿಜಯ್ ಕೂಡಾ ಮಾಚೋಹಳ್ಳಿ ಬಿ ಗ್ರೂಪ್ ಲೇಔಟ್ ಹತ್ತಿರ ಬಂದಿದ್ದ. ಇಬ್ಬರ ನಡುವೆ ಜಗಳ ನಡೆದು ತಾರಕಕ್ಕೇರಿತ್ತು. ಮನೆಯಿಂದ ತಂದಿದ್ದ ಮಚ್ಚಿನಿಂದ ವಿಜಯ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಆ ನಂತರ ಆರೋಪಿಗಳು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳ ಬಂಧನ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಮಾತನಾಡಿ, ಮೊನ್ನೆ ರಾತ್ರಿ ಅಕ್ರಮ ಸಂಬಂಧ ವಿಚಾರಕ್ಕೆ ಕೊಲೆ ಆಗಿತ್ತು. ಆರೋಪಿಗಳ ಬಂಧನಕ್ಕೆ 2 ಟೀಂ ಮಾಡಿದ್ವಿ 7 ಜನರನ್ನ ಬಂಧಿಸಿದ್ದೇವೆ. ಎಲ್ಲರೂ ಪರಿಚಯಸ್ಥರೆ, ಸಂಬಂಧಿಕರು ಸ್ನೇಹಿತರು ಆಗಿದ್ರು. ಮೃತನ ಪತ್ನಿ ಪಾತ್ರವು ಇದೆ, ಆಕೆಯನ್ನ ಬಂಧಿಸಿದ್ದೇವೆ. ಗಂಡನಿಗೆ ಅಕ್ರಮ ಸಂಬಂಧ ವಿಚಾರವೂ ಗೊತ್ತಿತ್ತು. ಗಂಡ& ಹೆಂಡತಿಗೆ ಒಂದೆರಡು ಬಾರಿ ಜಗಳ ಕೂಡ ಆಗಿತ್ತು. ಆದರೆ ಪತ್ನಿ ಮತ್ತು ಗೆಳೆಯ ಒಟ್ಟಿಗೆ ಇರಲು ಸಂಚು ಮಾಡಿ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.
ಅರೆಸ್ಟ್ ಆದ ಬಳಿಕ ಪ್ರಮುಖ ಆರೋಪಿ ಧನಂಜಯ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಶಾ ನನ್ನ ಮೇಲೆ ಅತಿಯಾದ ಪ್ರೀತಿ ಹೊಂದಿದ್ದಳು. ನಾನು ನಿನ್ನ ಜೊತೆಗೆ ಬಂದು ಬಿಡುತ್ತೇನೆ, ನನಗೆ ನನ್ನ ಗಂಡ ಬೇಡ. ನೀನು ನನ್ನ ಗಂಡನನ್ನು ಏನಾದರೂ ಮಾಡು, ನನಗೆ ನೀನು ಬೇಕು ಎಂದು ಒತ್ತಾಯ ಮಾಡಿದ್ದಳು. ಜೊತೆಗೆ ನಮ್ಮಿಬ್ಬರ ಪ್ರೀತಿ ವಿಚಾರ ತಿಳಿಸಿದ್ದ ವಿಜಯ್, ನನ್ನ ತಾಯಿ ಮುಂದೆ ಬಂದು ನಿನ್ನ ಮಗನನ್ನು ಕೊಲೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಅದೇ ಕಾರಣಕ್ಕೆ ವಿಜಯ್ನನ್ನು ಮುಗಿಸುವ ನಿರ್ಧಾರ ಮಾಡಿದ್ದೆ ಎಂದಿದ್ದಾನೆ.



