ಇಂದು ರಾತ್ರಿ 9.57ಕ್ಕೆ ಚಂದ್ರಗ್ರಹಣ ಆರಂಭ ಆಗಲಿದ್ದು, ಮಧ್ಯರಾತ್ರಿ 1 ಗಂಟೆ 26 ನಿಮಿಷದ ತನಕ ಗೋಚರಿಸಲಿದೆ. 2022ರ ಬಳಿಕ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. 2018ರ ಚಂದ್ರಗ್ರಹಣದ ನಂತರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರ ಗ್ರಹಣ ಕಾಣಸಿಗುವುದು ಇದೇ ಮೊದಲು ಎನ್ನಲಾಗ್ತಿದೆ.. ಗ್ರಹಣ ವೀಕ್ಷಣೆಗೆ ನೆಹರೂ ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ತಾರಾಲಯದಲ್ಲಿ ತಯಾರಿ!
ಬೆಂಗಳೂರಿನ ನೆಹರೂ ಪ್ಲಾನಿಟೋರಿಯಂನಲ್ಲಿ ಚಂದ್ರ ಗ್ರಹಣದ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾತ್ರಿ 8:30 ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಐದು ದೂರದರ್ಶಕಗಳನ್ನು ಅಳವಡಿಕೆ ಮಾಡಲಾಗಿದೆ.ತಾರಾಲಯದಲ್ಲಿ ಬ್ಯಾರಿಕೇಡ್ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಂದ್ರಗ್ರಹಣದ ಸಂಪೂರ್ಣ ಮಾಹಿತಿ ನೀಡುವ ಡಿಸ್ ಪ್ಲೇ ಅಳವಡಿಕೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸೂಕ್ತ ಭದ್ರತೆ ಕೈಗೊಳ್ಳುವಂತೆ ಪೊಲೀಸ್ ಸಹಾಯ ಕೇಳಿದ್ದಾರೆ ತಾರಾಲಯ ಅಧಿಕಾರಿಗಳು. ಬರಿಗಣ್ಣಿನಿಂದ ಚಂದ್ರಗ್ರಹಣ ವೀಕ್ಷಣೆ ಮಾಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರಿಂದ ಗ್ರಹಣದ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾತ್ರಿ 11.30ಕ್ಕೆ ಉತ್ತಮ ಗ್ರಹಣ!
ಚಂದ್ರ ಗ್ರಹಣವನ್ನು ಕಣ್ತುಂಬ ನೋಡಿ ಎಂಜಾಯ್ ಮಾಡಿ, ಬರಿಗಣ್ಣಿನಲ್ಲಿ ನೋಡಿ ಖುಷಿಪಡಿ ಅಂತಾ ಖಗೋಳ ಶಾಸ್ತ್ರಜ್ಞ ಡಾ. ಎ.ಪಿ ಭಟ್ ಹೇಳಿದ್ದಾರೆ. ಚಂದ್ರ ಗ್ರಹಣದಿಂದ ಯಾವುದೇ ಹಾನಿ ಇಲ್ಲ. ಗ್ರಹಣಗಳೇ ಅಪರೂಪದ ವಿದ್ಯಮಾನ. ಸೂರ್ಯ ಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಬಾರದು. ಆದರೆ ಚಂದ್ರ ಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಬಹುದು. ಇದು ಸುಂದರ ಪ್ರಾಕೃತಿಕ ವಿದ್ಯಮಾನ. ಚಂದ್ರ ಗ್ರಹಣವನ್ನು ನೋಡಿ ಎಂಜಾಯ್ ಮಾಡಿ. ರಾತ್ರಿ 11 ರಿಂದ 12.30 ರವರೆಗೆ ಸುಂದರವಾಗಿ ಕಾಣುತ್ತದೆ. ಸೂರ್ಯನ ಬೆಳಕು ಬೀಳದೆ ಚಂದ್ರ ಮರೆಯಾಗುತ್ತಾನೆ ಎಂದಿದ್ದಾರೆ.
ರಕ್ತ ಚಂದನ ಅನ್ನೋದೆಲ್ಲಾ ಸುಳ್ಳು!
ಸೂರ್ಯನಿಂದ ಹೊರಟ ಬೆಳಕು ಚಂದ್ರನ ಮೇಲೆ ಬೀಳುತ್ತದೆ. ಚಂದ್ರ ಭೂಮಿಯ ಸುತ್ತ ಸುತ್ತುತ್ತಾನೆ. ಮೂರು ಲಕ್ಷದ ಎಪ್ಪತ್ತೊಂದು ಸಾವಿರ ಕಿಲೋಮೀಟರ್ ದೂರದಲ್ಲಿ ಇರುತ್ತಾನೆ. ಆದರೆ ಇಂದು ತುಂಬಾ ಹತ್ತಿರದಲ್ಲಿ ಕಾಣುವುದರಿಂದ ಸುಂದರವಾಗಿ ಕಾಣುತ್ತಾನೆ. ಚಂದ್ರನ ಪಥ 5 1/2 ಡಿಗ್ರಿಗೆ ವಾರೆ ಆಗಿರುತ್ತದೆ. ಇಂದಿನ ಹುಣ್ಣಿಮೆಯ ಮೇಲೆ ಭೂಮಿ ನೇರವಾಗಿ ಅಡ್ಡ ಬರುತ್ತದೆ. ಇದರಿಂದ ಖಗ್ರಾಸ ಚಂದ್ರ ಗ್ರಹಣ ಆಗುತ್ತದೆ. ಬೆಳಕು ಮಬ್ಬಾಗಿ ಕಾಣುತ್ತದೆ. ರಕ್ತ ಚಂದನ ಎಂದು ಹೆದರಿಸುವುದು ಬೇಡ, ಸಲ್ಪ ಕೆಂಪಾಗಿ ನಸು ಕೆಂಪಾಗಿ ಕಾಣುತ್ತದೆ ಅಷ್ಟೇ. ಈ ರೀತಿ ಆಗುವುದಕ್ಕೆ ಭೂಮಿ ಕಾರಣ ಎಂದಿದ್ದಾರೆ ಖಗೋಳ ಶಾಸ್ತ್ರಜ್ಞ ಡಾ ಎ.ಪಿ ಭಟ್.

ಬೆಳದಿಂಗಳ ಸ್ನಾನ ಮನಸ್ಸಿಗೆ ಮುದ..!
ಭೂಮಿಯಿಂದ ಹೊರಟ ಬೆಳಕು ಚಂದ್ರನ ಮೇಲೆ ಬೀಳುವುದರಿಂದ ಕೆಂಪು ಬಣ್ಣದ ಬೆಳಕು ಬೀಳುತ್ತದೆ. ರಕ್ತ ಚಂದನ ಅಲ್ಲ ನಸುಗೆಂಪು ಅಷ್ಟೇ. ಇದೊಂದು ಅಪರೂಪದ ವಿದ್ಯಮಾನ. ಇದನ್ನು ಬರಿಯ ಕಣ್ಣಿನಲ್ಲಿ ನೋಡಬಹುದು. ಎಲ್ಲರೂ ಗ್ರಹಣವನ್ನು ಚೆನ್ನಾಗಿ ನೋಡಿ. ಸೂರ್ಯ ಗ್ರಹಣದಲ್ಲಿ ಕಣ್ಣಿಗೆ ಸ್ವಲ್ಪ ರಗಳೆ ಆಗುತ್ತದೆ. ಆದರೆ ಚಂದ್ರ ಗ್ರಹಣವನ್ನು ಸುಲಭವಾಗಿ ನೋಡಬಹುದು. ಮನಸ್ಸಿಗೆ ಮುದ ಕೊಡುವವನು ಚಂದ್ರ. ಬೆಳದಿಂಗಳಲ್ಲಿ ಎಲ್ಲರೂ ಸ್ನಾನ ಮಾಡೋಣ. ಇದೇ ತಪಸ್ಸು ಪೂಜೆ ಜಪ. ಮನಸ್ಸಿಗೆ ಇದರಿಂದ ನೆಮ್ಮದಿಯಾಗುತ್ತದೆ. ಚಂದ್ರ ಮಬ್ಬಾಗಿ ಪವಿತ್ರ ಭಾವನೆ ಉಂಟು ಮಾಡುತ್ತಾನೆ. ಹುಣ್ಣಿಮೆ ದಿನವೇ ಗ್ರಹಣ ಆಗುತ್ತದೆ. ಇವತ್ತು ಸೂಪರ್ ಮೂನ್ ತರ ಚಂದ್ರ ಕಾಣುತ್ತಾನೆ. ಮಾಮೂಲಿ ಚಂದ್ರನಿಗಿಂತ ಇವತ್ತು ಗಾತ್ರ ಹೆಚ್ಚಿರುತ್ತದೆ.
ಹುಣ್ಣಿಗೆ, ಗ್ರಹಣ ಇರುವುದು ಖುಷಿಗಾಗಿ..!
ಬರಿ ಕಣ್ಣಿನಲ್ಲಿ ಸಾಮಾನ್ಯವಾಗಿ ಚಂದ್ರನನ್ನು ನೋಡಿ, ಕಣ್ಣಿಗೆ, ದೇಹಕ್ಕೆ ಏನು ಆಗಲ್ಲ. ವೇದ ಕಾಲದಲ್ಲಿ ಇದನ್ನ ನೆರಳು ಬೆಳಕಿನ ಆಟ ಎಂದಿದ್ದಾರೆ. ಈ ಆಟವನ್ನು ಕಣ್ತುಂಬಿಕೊಳ್ಳಬೇಕು. ಗ್ರಹಣ ನೋಡುವುದರಿಂದ ಏನೂ ಆಗುವುದಿಲ್ಲ. ಸಹಜವಾಗಿ ಹುಣ್ಣಿಮೆ ಕಾಲದಲ್ಲಿ ಸಮುದ್ರದ ಏರಿಳಿತ ಪ್ರಕ್ರಿಯೆ ಇರುತ್ತದೆ. ಸೂಪರ್ ಮೂನ್ ಆದಾಗಲೂ ಹೀಗೆ ಆಗುತ್ತದೆ. ಪ್ರಾಕೃತಿಕವಾಗಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಹುಣ್ಣಿಮೆ ಇರುವುದು ನಮಗೆ ಖುಷಿ ಕೊಡಲು. ಗ್ರಹಣ ನಮಗೆ ಖುಷಿ ಕೊಡಲು ಇರುವ ವಿಚಾರ. ಯಾವುದೇ ಕ್ರಿಮಿಗಳು, ರೇಡಿಯೇಷನ್ ಬರುವುದಿಲ್ಲ. ವಾತಾವರಣ ತಿಳಿಯಾಗಿದ್ದರೆ ಎಲ್ಲರೂ ಗ್ರಹಣವನ್ನು ನೋಡಬಹುದು. ಈ ಬಾರಿ ಪ್ರಕೃತಿ ನಮಗೆ ಸಹಕಾರ ಕೊಡುತ್ತದೆ ಎಂದಿದ್ದಾರೆ.


