ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟ ದರ್ಶನ್ ಸೇರಿದಂತೆ 7 ಜನ ಆರೋಪಿಗಳ ಜಾಮೀನು ಸುಪ್ರೀಂಕೋರ್ಟ್ನಲ್ಲಿ ರದ್ದಾದ ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಬೇರೊಂದು ಜೈಲಿಗೆ ಶಿಫ್ಟ್ ಮಾಡಬೇಕು ಎಂದು ಪರಪ್ಪನ ಜೈಲು ಅಧಿಕಾರಿಗಳು ಕೋರ್ಟ್ಗೆ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ಬೆಂಗಳೂರು ಬಿಟ್ಟು ಬೇರೆ ಕಡೆಗೆ ಶಿಫ್ಟ್ ಮಾಡಬಾರದು ಅಂತಾ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಈ ನಡುವೆ ನಟ ದರ್ಶನ್, ನನಗೆ ವಿಷ ಕೊಡುವುದಕ್ಕೆ ಸೂಚನೆ ಕೊಡಿ ಎಂದು ನ್ಯಾಯಾಧೀಶರ ಎದುರು ಅವಲತ್ತುಕೊಂಡಿದ್ದಾರೆ.
ಸೆಪ್ಟೆಂಬರ್ 9 ರಂದು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಆದೇಶ ಮಾಡ್ತೇನೆ ಎಂದು ಕಳೆದ ಬಾರಿ ಜಡ್ಜ್ ತಿಳಿಸಿದ್ದರು. ಅದರಂತೆ ಇಂದು ವಿಚಾರಣೆ ನಡೆದಿತ್ತು. ವಿಚಾರಣೆ ನಡುವೆ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್, ಸರ್ ಎಂದು ಕೈ ಎತ್ತಿದ ಘಟನೆ ನಡೆದಿದೆ. ಅದನ್ನು ಗಮನಿಸಿದ ನ್ಯಾಯಾಧೀಶರು, ಅವರಿಗೆ ಮೈಕ್ ಕೊಡಿ ಎಂದಿದ್ದಾರೆ. ಆಗ ಜೈಲಿನ ಸಿಬ್ಬಂದಿ ಮೈಕ್ ಕೊಟ್ಟಿದ್ದಾರೆ. ಆಗ ದರ್ಶನ್, ನನಗೆ ಪಾಯಿಸನ್ ಕೊಡಲು ಕೋರ್ಟ್ನಿಂದ ಒಂದು ಆದೇಶ ಮಾಡಿ ಸರ್ ಎಂದು ಮನವಿ ಮಾಡಿಕೊಂಡಿದ್ದಾರೆ. ಆಶ್ಚರ್ಯ ಚಕಿತರಾದ ನ್ಯಾಯಾಧೀಶರು ಹಾಗೆಲ್ಲ ಮಾಡೋಕೆ ಆಗಲ್ಲ ಎಂದಿದ್ದಾರೆ.

ನ್ಯಾಯಾಧೀಶರ ಮಾತು ಮುಗಿದ ಬಳಿಕ ಮತ್ತೆ ಮಾತು ಮುಂದುವರಿಸಿರುವ ನಟ ದರ್ಶನ್, ನನಗೆ ಪಾಯಿಸನ್ ಕೊಡಬಹುದು ಅಂತ ಆದೇಶ ಮಾಡಿ ಸರ್, ಬೇರೆ ಯಾರಿಗೂ ಕೂಡ ಬೇಡ. ನನಗೆ ಮಾತ್ರ ಎಂದಿದ್ದಾರೆ. ಹಾಗೇ ಮುಂದುವರಿದು ನಾನು ಜೈಲಿಗೆ ಬಂದು ಒಂದು ತಿಂಗಳಾಯ್ತು. ಬಿಸಿಲನ್ನೇ ನೋಡಿಲ್ಲ, ನನ್ನ ಬಟ್ಟೆ ವಾಸನೆ ಬಂದಿದೆ. ಫಂಗಸ್ ಬಂದಿದೆ ಎಂದಿದ್ದಾರೆ. ಆ ವೇಳೆ ಹಾಗೆಲ್ಲ ಮಾಡೋಕೆ ಆಗಲ್ಲ ಎನ್ನುತ್ತಿದ್ದರೂ ದರ್ಶನ್ ಮಾತ್ರ ನನಗೆ ಪಾಯ್ಸನ್ ಕೊಡಲು ಆದೇಶ ಮಾಡಿ ಸರ್ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆ ಬಳಿಕ ಜಡ್ಜ್, ಮಧ್ಯಾಹ್ನ ಹಾಜರುಪಡಿಸಲು ಸೂಚನೆ ಕೊಟ್ಟು 3ಗಂಟೆಗೆ ವಿಚಾರಣೆ ಮುಂದೂಡಿದ್ದಾರೆ.
ದರ್ಶನ್ ಮಾತ್ರ ಬೆಂಗಳೂರು ಜೈಲಿನಲ್ಲಿ ಬಿಸಿಲನ್ನೂ ನೋಡೋಕೇ ಆಗ್ತಿಲ್ಲ, ನನಗೆ ವಿಷ ಕೊಡಿಸಿ ಎನ್ನುತ್ತಿದ್ದಾರೆ. ಆದರೆ ದರ್ಶನ್ ಪರ ವಕೀಲರು ಮಾತ್ರ ಬೆಂಗಳೂರು ಜೈಲೇ ಬೇಕು, ಬೇರೆ ಕಡೆಗೆ ಶಿಫ್ಟ್ ಮಾಡಬೇಡಿ ಎನ್ನುತ್ತಿದ್ದಾರೆ. ಇದೇನಿದು ಲೆಕ್ಕಾಚಾರ ಅನ್ನೋದು ಸಾರ್ವಜನಿಕರಲ್ಲಿ ಅಚ್ಚರಿ, ಅನುಮಾನಕ್ಕೂ ಕಾರಣವಾಗಿದೆ. ಕಳೆದ ಬಾರಿ ದರ್ಶನ್ ಬೇಲ್ ಪಡೆದಿದ್ದು, ಬೆನ್ನು ನೋವು ಅನ್ನೋ ಕಾರಣಕ್ಕೆ. ಆ ಬೆನ್ನು ನೊವಿನ ಬಗ್ಗೆ ಸಾಕಷ್ಟು ಪ್ರಚಾರ ಕೊಟ್ಟಿದ್ದು, ದೃಶ್ಯ ಮಾಧ್ಯಮಗಳು. ಆ ನಂತರ ಬೆನ್ನು ನೋವಿನ ಆಪರೇಷನ್ ಕೂಡ ಮಾಡಿಸಿಕೊಳ್ಳಲಿಲ್ಲ. ಸಿನಿಮಾ ಶೂಟಿಂಗ್ ಮಾಡಿಕೊಂಡು ಇದ್ದರು. ಇದನ್ನೂ ಗಂಭಿರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಸಮಿತಿ ಮಾಡಿ ಅನಾರೋಗ್ಯದ ಬಗ್ಗೆ ಪರಿಶೀಲಿಸುವ ಅಗತ್ಯವಿತ್ತು. ಹೈಕೋರ್ಟ್ ಇದ್ಯಾವುದನ್ನೂ ಮಾಡದೆ ಬೇಲ್ ಕೊಟ್ಟಿದ್ದು ಸರಿಯಲ್ಲ ಎಂದಿತ್ತು.
ಇದೀಗ ಜೈಲಿನಲ್ಲಿ ಕಠಿಣವಾಗಿ ನಡೆಸಿಕೊಳ್ಳಲಾಗ್ತಿದೆ. ನನಗೆ ವಿಷ ಕೊಡಿ ಎಂದು ದರ್ಶನ್ ನೇರವಾಗಿ ನ್ಯಾಯಾಧೀಶರ ಎದುರಲ್ಲೇ ಕೇಳಿ ಕೊಂಡಿದ್ದಾರೆ. ಆದರೆ ದರ್ಶನ್ ಪರ ವಕೀಲರು ಮಾತ್ರ ಬೆಂಗಳೂರು ಜೈಲೇ ಆಗ್ಬೇಕು, ಬೇರೆ ಕಡೆ ಶಿಫ್ಟ್ ಮಾಡಬೇಡಿ ಎಂದಿದ್ದಾರೆ. ಇದರ ಹಿಂದಿನ ಮಸಲತ್ತು ಏನು..? ಅನ್ನೋದು ಕೆಲವೇ ದಿನಗಳಲ್ಲಿ ಬಹಿರಂಗ ಆಗಬೇಕಿದೆ.


