ಇವರಿಬ್ಬರು ಕುಚಿಕು ಗೆಳೆಯರು. ಒಡಹುಟ್ಟಿದವ ಹಾಗೆ ಜೊತೆ ಜೊತೆಯಲ್ಲೇ ಬೆಳೆಯುತ್ತಿದ್ರು. ಸ್ನೇಹಕ್ಕೆ ತುಂಬಾ ಬೆಲೆ ಜೊಡ್ತಿದ್ದ ಇವರ ನಡುವೆ ವೈಮನಸ್ಸು ಮೂಡುವಂತೆ ಮಾಡಿದ್ದು ಚಿನ್ನ. ಹಣ ಅಂತ್ಸಥಿನ ಮುಂದೆ ಯಾವ ಗೆಳೆತನವೂ ಲೆಕ್ಕಕ್ಕಿರಲ್ಲ ಅನ್ನೋ ಮಾತನ್ನು ಈ ಪ್ರಕರಣ ಸಾಬೀತು ಮಾಡಿದೆ. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಆಟ ಆಡ್ತಿದ್ದ ಸ್ನೇಹಿತನೊಬ್ಬ ಗೆಳೆಯನಿಗೆ ಮುಹೂರ್ತ ಇಟ್ಟು ಬಿಟ್ಟಿದ್ದಾನೆ.
ಬೆಂಗಳೂರಿನ ಕೋಣನಕುಂಟೆಯ ಕೃಷ್ಣಪ್ಪ ಲೇಔಟ್ ನಿವಾಸಿ ಪ್ರೀತಂ ಹಾಗೂ ರಾಹುಲ್ ಆತ್ಮೀಯ ಹೆಳೆಯರು. ರಾಹುಲ್ ಇಂಜಿಯನಿಯರಿಂಗ್ ಮಾಡ್ತಿದ್ರೆ, ಪ್ರೀತಂ ಪಿಯುಸಿ ಡ್ರಾಪ್ಔಟ್ ಆಗಿದ್ದ. ಆದ್ರೆ ಇಬ್ಬರ ನಡುವಿನ ಸ್ನೇಹಕ್ಕೆ ಶಿಕ್ಷಣಅಡ್ಡಿಯಾಗಿ ಇರಲಿಲ್ಲ. ಪ್ರತಿದಿನ ಕಾಲೇಜು ಮುಗಿದ ಬಳಿಕ ರಾಹುಲ್ ಪ್ರೀತಂ ಮನೆ ಬಳಿಗೆ ಹೋಗ್ತಿದ್ದ. ಜೊತೆಯಲ್ಲಿ ಕುಳಿತು ಊಟ ಮಾಡಿ, ಹರಟೆ ಹೊಡ್ಕೊಂಡು ಕಾಲ ಕಳೆದ ಬಳಿಕ ಮನೆ ಕಡೆಗೆ ಹೋಗ್ತಿದ್ದ. ಆದರೆ ಅಕ್ಟೋಬರ್ 25ರಂದು ಪ್ರೀತಂ ತಾಯಿ ಬಳಿಯಿದ್ದ ಚಿನ್ನಾಭರಣ ಕಳ್ಳತನ ಆಗಿತ್ತು. ಮನೆಯಲ್ಲಿ ಎಷ್ಟು ಹುಡುಕಿದರೂ ಚಿನ್ನಾಭರಣ ಸಿಕ್ಕಿರಲಿಲ್ಲ. ರಾಹುಲ್ ಮತ್ತು ಪ್ರೀತಂನನ್ನ ವಿಚಾರಿಸಿದಾಗ ಒಬ್ಬರ ಮೇಲೊಬ್ಬರು ಆರೋಪ ಮಾಡಿಲಕೊಂಡಿದ್ರಂತೆ.
ಪ್ರೀತಂ ತಾಯಿಯ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದು ಪ್ರೀತಂ ಅನ್ನೋ ಅಸಲಿ ವಿಚಾರ ರಾಹುಲ್ಗೆ ಗೊತ್ತಾಗಿರುತ್ತೆ. ತಾಯಿಯ ಚಿನ್ನಾಭರಣ ಕದ್ದ ಅನ್ನೋ ವಿಚಾರ ರಾಹುಲ್ಗೆ ಗೊತ್ತಾಗಿದ್ದೇ ತಡ ಚಿನ್ನ ಕದ್ದು ಬ್ಯಾಗ್ನಲ್ಲಿಟ್ಟಿದ್ದಾನೆ ಅಂತ ಪ್ರೀತಂ ತಾಯಿಗೆ ರಾಹುಲ್ ಹೇಳಿದ್ನಂತೆ. ಅಷ್ಟಕ್ಕೆ ಪ್ರೀತಂ ಪಿತ್ತ ನೆತ್ತಿಗೇರಿತ್ತು. ನನ್ನ ಮರ್ಯಾದೆ ಹಾಳು ಮಾಡಿದ ಅಂತ ರಾಹುಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ನಂತೆ. ಆ ಬಳಿಕ ಸ್ನೇಹಿತನ ಕೊಲೆಗೆ ಸ್ಕೆಚ್ ಹಾಕಿದ ಪ್ರೀತಂ ರಾಹುಲ್ಗೆ ಕರೆ ಮಾಡಿದ್ದಾನೆ. ನಿನ್ನ ಜೊತೆ ಮಾತಾಡ್ಬೇಕು ಅಂತ ಕರೆಸಿಕೊಂಡಿದ್ದಾನೆ
ಸ್ನೇಹಿತನ ಕರೆಗೆ ಓಗೊಟ್ಟು ಬಂದ ರಾಹುಲ್ ಮೇಲೆ ಪ್ರೀತಂ ದಾಳಿ ಮಾಡಿದ್ದಾನೆ. ಚಾಕುವಿನಿಂದ ಮನಸೋ ಇಚ್ಛೆ ಇರಿದು ರಕ್ತ ಹರಿಸಿದ್ದಾನೆ. ಕೂಡಲೇ ಜೊತೆಗಿದ್ದ ಗೆಳೆಯರು ರಾಹುಲ್ನನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ರಾಹುಲ್ ಮೃತಪಟ್ಟಿದ್ದಾನೆ.. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಪ್ರೀತಂನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಿಯುಸಿ ಫೇಲ್ ಆಗಿ ಅಡ್ಡದಾರಿ ಹಿಡಿದಿದ್ದ ಸ್ನೇಹಿತನ ಸಹವಾಸ ತೊರೆಯದೆ ಮುಂದುವರಿಸಿದ್ದ ರಾಹುಲ್ ಹೆಣವಾಗಿದ್ದಾನೆ ಅನ್ನೋದು ದುರಂತದ ಸಂಗತಿ.


