ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಖಳನಾಯಕ ಹರೀಶ್ ರಾಯ್ ನಿಧನರಾಗಿದ್ದಾರೆ. ಕಳೆದ 30 ವರ್ಷಗಳ ಕಾಲ ತೆರೆ ಮೇಲೆ ಅಬ್ಬರಿಸಿದ್ದ ಕಲಾವಿದ ಕ್ಯಾನ್ಸರ್ ಅನ್ನೋ ಮಾರಕ ರೋಗಕ್ಕೆ ತುತ್ತಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ತಮ್ಮದೆ ಆದ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಹರೀಶ್ ರಾಯ್. ಓಂ, ಅಂಡರ್ವರ್ಲ್ಡ್, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೇ, ನಲ್ಲ, ಜೋಡಿ ಹಕ್ಕಿ, ತಾಯವ್ವ, ಚಕ್ರವರ್ತಿ, ಕಾಶಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದರು.
ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನರ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಸಿನಿಮಾದಲ್ಲಿ ಚಾಚಾ ಪಾತ್ರ ಹರೀಶ್ ರಾಯ್ ಅವರ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿತ್ತು. 3 ದಶಕಗಳ ಕಾಲ ಸಿನಿ ಪ್ರಿಯರನ್ನ ರಂಜಿಸಿದ್ದ ಹರೀಶ್ ರಾಯ್, ಬದುಕಿನ ಆಟಕ್ಕೆ ವಿದಾಯ ಹೇಳಿದ್ದಾರೆ. ತನ್ನದೆಂದುಕೊಂಡಿದ್ದ ಎಲ್ಲವನ್ನೂ ತೊರೆದು ಬಾರದೂರಿನ ಪಯಣ ಬೆಳೆಸಿದ್ದಾರೆ. ಇವತ್ತು ಹುಟ್ಟೂರು ಉಡುಪಿ ಅಂಬಲಪಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಸಿನಿಮಾವನ್ನೇ ಉಸಿರಾಗಿಸಿಕೊಂಡಿದ್ದ ಖಳನಾಯಕ ಹರೀಶ್ ರಾಯ್ ಬಣ್ಣದ ಲೋಕದಲ್ಲೇ ಬದುಕು ಕಟ್ಟಿಕೊಂಡಿದ್ದರು. KGF ಗೆಲುವಿನ ಸಂಭ್ರಮದಲ್ಲಿದ್ದಾಗ್ಲೇ ಕ್ಯಾನ್ಸರ್ ಅನ್ನೋ ಸುನಾಮಿ ಬಂದು ಅಪ್ಪಳಿಸಿತ್ತು. ಕ್ಯಾನ್ಸರ್ಗೂ ಎದೆಗುಂದದೆ ಚಿಕಿತ್ಸೆ ಪಡೆದು ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು. ಅದಕ್ಕಾಗಿ 70 ಲಕ್ಷಕ್ಕೂ ಅಧಿಕ ಹಣದ ಅಗತ್ಯವಿತ್ತು. ಹೀಗಾಗಿ ಶಿವಣ್ಣ, ದರ್ಶನ್, ಯಶ್, ಧ್ರುವ ಸರ್ಜಾ ಸೇರಿದಂತೆ ಅನೇಕ ನಾಯಕರು ಧನ ಸಹಾಯ ಮಾಡಿದ್ದರು. ಆದರೂ ಚಿಕಿತ್ಸೆ ಫಲಿಸದೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹರೀಶ್ ರಾಯ್ ಕೊನೆಯುಸಿರೆಳೆದಿದ್ದಾರೆ. ಹರೀಶ್ ರಾಯ್ ಸಾವಿನಿಂದ ಇಡೀ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ.
ಹರೀಶ್ ರಾಯ್ ನಿಧನಕ್ಕೆ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ರಾಜಕಾರಣಿಗಳು, ಸಿನಿ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಅಂಜನಾಪುರದ ಮನೆಯಲ್ಲಿ ಚಾಚಾನ ಅಂತಿಮ ದರ್ಶನ ಪಡೆದರು. ಅವರ ಜೊತೆಗಿನ ಒಡನಾಟ ನೆನೆದು ಭಾವುಕರಾದ್ರು. ಜೊತೆಗೆ ಹರೀಶ್ ರಾಯ್ ಅವರ ಮಗನನ್ನು ಕರೆದು ಕಾರಿನ ಒಳಗೆ ಕೂರಿಸಿಕೊಂಡು ಹಣಸಹಾಯವನ್ನೂ ಮಾಡಿದರು. ಆದರೆ ಹಣಸಹಾಯದ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬಾರದು ಅನ್ನೋ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.
ನಟ ಹರೀಶ್ ರಾಯ್ ಮೂಲತಃ ಉಡುಪಿಯ ಅಂಬಲಪಾಡಿ ನಿವಾಸಿ ಆಗಿದ್ದರು. ಹೀಗಾಗಿ ಅಂತ್ಯಕ್ರಿಯೆಯನ್ನು ಅಂಬಲಪಾಡಿಯಲ್ಲೇ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ರಾತ್ರಿ 9ಗಂಟೆ ನಂತರ ಉಡುಪಿಯ ಪಾರ್ಥಿವ ಶರೀರವನ್ನ ಉಡುಪಿಗೆ ರವಾನೆ ಮಾಡಲಾಗಿದೆ. ಇವತ್ತು ಹುಟ್ಟೂರಿನಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ.. ಹಚ್ಚಿದ ಬಣ್ಣ ಮಾಸುವ ಮುನ್ನವೇ ಹರೀಶ್ ರಾಯ್, ಬದುಕಿನ ಪಯಣ ಮುಗಿಸಿದ್ದು, ಸ್ಯಾಂಡಲ್ವುಡ್ಗೆ ತುಂಬಲಾರದ ನಷ್ಟವಾಗಿದೆ. ಅಂತಿಮ ಸಂಸ್ಕಾರದ ಎಲ್ಲಾ ಹೊಣೆಯನ್ನೂ ನಟ ಧೃವ ಸರ್ಜಾ ವಹಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಈ ಹಿಂದೆಯೂ ಕೂಡ ಸಾಕಷ್ಟು ನೆರವು ನೀಡಿದ್ದರು. ಈಗಲೂ ನೆರವಿನ ಹಸ್ತ ಚಾಚಿದ್ದಾರೆ.


