ಕಾಂತಾರ ಚಿತ್ರದಲ್ಲಿ ನಟನೆ ಮಾಡಿದ್ದ ರಿಷಬ್ ಶೆಟ್ಟಿಯನ್ನು ಛೇಡಿಸಲು ಹೋಗಿ ದೈವದ ಬಗ್ಗೆ ಅಪಹಾಸ್ಯ ಆರೋಪಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಸಿಲುಕಿಕೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ನಟ ರಣವೀರ್ ಸಿಂಗ್ ವಿರುದ್ಧ FIR ದಾಖಲಾಗಿದೆ. ಈ FIR ರದ್ದು ಮಾಡುವಂತೆ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆಗೆ ಬಂದಿದ್ದು, ನ್ಯಾಯಮೂರ್ತಿಗಳು ಅರ್ಜಿಯನ್ನು ಇಂದಿಗೆ ಮುಂದೂಡಿಕೆ ಮಾಡಿದ್ದಾರೆ.

ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದು ಕೋರಿ ನಟ ರಣವೀರ್ ಸಿಂಗ್ ಅರ್ಜಿ ಸಲ್ಲಿಕೆ ಮಾಡಿದ್ದು, ತುರ್ತು ಅರ್ಜಿ ವಿಚಾರಣೆಗೆ ರಣವೀರ್ ಸಿಂಗ್ ಪರ ವಕೀಲರು ಮನವಿ ಮಾಡಿದರು. ಕಾಂತಾರಾ ಚಾಪ್ಟರ್ -1 ರ ಪಾತ್ರದ ಬಗ್ಗೆ ರಣವೀರ್ ಸಿಂಗ್ ಶ್ಲಾಘಿಸಿದ್ದಾರೆ. ರಿಷಬ್ ಶೆಟ್ಟಿ ನಟನೆ ಬಗ್ಗೆ ರಣವೀರ್ ಸಿಂಗ್ ಪ್ರಾಮಾಣಿಕವಾಗಿ ಹೊಗಳಿದ್ದಾರೆ. ಆದರೆ ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ ಎಂದು ವಾದ ಮಂಡಿಸಿದ್ದಾರೆ. ಇಂದೇ ತುರ್ತು ವಿಚಾರಣೆಗೆ ರಣವೀರ್ ಸಿಂಗ್ ಪರ ವಕೀಲರ ಮನವಿ ಮಾಡಿದ್ದಕ್ಕೆ ಗರಂ ಆದ ನ್ಯಾಯಮೂರ್ತಿಗಳು, ಬಾಲಿವುಡ್ ನಟನಾದರೆ ಮಧ್ಯಾಹ್ನವೇ ವಿಚಾರಣೆ ನಡೆಸಬೇಕೇ..? ಹಾಲಿವುಡ್ ನಟನಾದರೆ ಈಗಲೇ ವಿಚಾರಣೆ ನಡೆಸಬೇಕೇ..? ಎಂದು ಪ್ರಶ್ನಿಸಿದ್ದಾರೆ.

ನಟ ರಣವೀರ್ ಸಿಂಗ್ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದಾಗ, ಈಗಾಗಲೇ ಪೊಲೀಸರು ಎರಡು ನೋಟಿಸ್ ನೀಡಿದ್ದಾರೆ ಎಂದು ವಕೀಲರ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಳಿಕ ನಟ ರಣವೀರ್ ಸಿಂಗ್ ಅರ್ಜಿ ವಿಚಾರಣೆ ಇಂದಿಗೆ ನಿಗದಿಪಡಿಸಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದಲ್ಲಿ ಇವತ್ತು ವಿಚಾರಣೆ ನಡೆಯಲಿದೆ. ಕಾಂತಾರಾ ಚಾಪ್ಟರ್ – 1 ರ ಪಾತ್ರದ ಬಗ್ಗೆ ಹೇಳಿಕೆ ನೀಡಿ ರಣವೀರ್ ಸಿಂಗ್ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕೇಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಬಾಲಿವುಡ್ ನಟ ರಣವೀರ್ ಸಿಂಗ್. ಇಂದು ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ರಿಲೀಫ್ ಸಿಗುತ್ತಾ ಅನ್ನೋದನ್ನು ಕಾದು ನೋಡ್ಬೇಕು.


