ಮೈಸೂರು ಜಿಲ್ಲೆಯಲ್ಲಿ ಹುಲಿಗಳ ಕಾಟ ತಪ್ಪುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ರೈತರ ಜಮೀನಿನಲ್ಲಿ ಹುಲಿ ಪ್ರತ್ಯಕ್ಷ ಆಗಿರೋದ್ರಿಂದ ಗ್ರಾಮಸ್ಥರು ಗಾಬರಿಗೊಂಡ ಘಟನೆ ಹೆಚ್. ಡಿ. ಕೋಟೆ ತಾಲೂಕಿನ ಗಣೇಶನಗುಡಿ ಸಮೀಪ ತಾರಕ ನಾಲೆ ಬಳಿ ನಡೆದಿದೆ. ಎಂ.ಜಿ ರಾಮಕೃಷ್ಣಪ್ಪ ಅವರ ಇಟ್ಟಿಗೆ ಫ್ಯಾಕ್ಟರಿ, ನಿವೃತ್ತ ಶಿಕ್ಷಕ ಚಿಕ್ಕಣ್ಣಯ್ಯ ಅವರ ಮನೆ ಹಿಂಭಾಗದ ಜಮೀನಿನ ಬಳಿ ಹುಲಿ ಓಡಾಡಿದೆ. ಹುಲಿ ಪ್ರತ್ಯಕ್ಷ ಆಗಿರುವ ಹಿನ್ನಲೆಯಲ್ಲಿ ಭಯಗೊಂಡ ಸಾರ್ವಜನಿಕರು, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್.ಡಿ.ಕೋಟೆ RFO ರವಿಕುಮಾರ್ ನೇತೃತ್ವದ ಹುಲಿ ಸೆರೆ ಕಾರ್ಯಚರಣೆ ಶುರು ಮಾಡಿದ್ದು, ಹುಲಿ ಪ್ರತ್ಯಕ್ಷ ಹಿನ್ನಲೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಹೊರಗೆ ಓಡಾಡದಂತೆ ಮನವಿ ಮಾಡಿಕೊಳ್ಳಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಳ ಆಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೂರು ಜನ ಹುಲಿ ದಾಳಿಗೆ ಮೃತರಾಗಿದ್ದಾರೆ. ಹುಲಿಗಳು, ಆನೆಗಳ ಸಂಖ್ಯೆ ಹೆಚ್ಚಳವಾಗಿದೆ. ಅರಣ್ಯಾಧಿಕಾರಿಗಳ ಉತ್ತರದಿಂದ ನಾನು ಸಮಾಧಾನವಾಗಿಲ್ಲ. ಕಾಡಿನೊಳಗೆ ನೀರು, ಮೇವು ಸಮೃದ್ಧವಾಗಿ ಸಿಗಬೇಕು. ಲ್ಯಾಂಟೇನ ಹೆಚ್ಚಾಗಿ ಕಾಡಿನಲ್ಲಿ ಬೆಳೆದಿದೆ. ಅದನ್ನ ಕ್ಲೀನ್ ಮಾಡಿ, ಕೆರೆ, ಗುಂಡಿಗಳಲ್ಲಿ ನೀರು ಸಿಗಬೇಕು. ಅದನ್ನ ಕಟ್ಟು ನಿಟ್ಟಾಗಿ ಮಾಡಲೇಬೇಕು ಎಂದು ಸೂಚಿಸಿದ್ದೇನೆ ಎಂದಿದ್ದಾರೆ. ಇನ್ನೂ ಹುಲಿ ದಾಳಿಗೆ ವೈಜ್ಞಾನಿಕ ಕಾರಣ ಹುಡುಕಲು ರಾಜ್ಯಮಟ್ಟದ ಸಭೆ ಮಾಡುತ್ತೇನೆ. ಮುಂದಿನ ವಾರ ಅರಣ್ಯ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ರೈಲ್ವೆ ಬ್ಯಾರಿಕೇಡ್ ಎಲ್ಲಾ ಕಡೆ ಮಾಡಿಲ್ಲ, ಬಿಜೆಪಿ ಸರ್ಕಾರದಲ್ಲಿ ಅದನ್ನ ನಿಲ್ಲಿಸಿಬಿಟ್ಟಿದ್ರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸೇರಿ ಎಲ್ಲರ ಜೊತೆ ಮೀಟಿಂಗ್ ಮಾಡುತ್ತೇನೆ. ಕಾಡಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ತಂತಿ ಬೇಲಿ ಉಪಯೋಗವಿಲ್ಲ. ಅದನ್ನ ತುಳಿದು ಆನೆಗಳು ದಾರಿ ಮಾಡಿಕೊಳ್ತವೆ. ಒಂದು ವರ್ಷದಲ್ಲಿ ಎಲ್ಲೆಲ್ಲಿ ಅಗತ್ಯವಿದೆ, ಅಲ್ಲೆಲ್ಲ ಬ್ಯಾರಿಕೇಡ್ ಅಳವಡಿಸಲಾಗುವುದು. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ಕಾವಲು ಕಾಯುವ ಕೆಲಸ ಮಾಡಲಾಗುವುದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದಿದ್ದಾರೆ. ಆದರೆ ಹಾಸನದಲ್ಲಿ ಆನೆಗಳ ಆರ್ಭಟ ಹೆಚ್ಚಾಗಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಯಾವುದೇ ಮಾತನ್ನಾಡಿಲ್ಲ. ಮೈಸೂರಿನಲ್ಲಿ ಮಾತನಾಡಿದ್ದರಿಂದ ಕೇವಲ ಸ್ಥಳೀಯ ವಿಚಾರಗಳ ಬಗ್ಗೆ ಅಷ್ಟೇ ಮಾತನಾಡಿದ್ದಾರೆ.
ಸರ್ಕಾರ ಒಂದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹುಲಿಗಳನ್ನು ವಿಷ ಹಾಕಿ ಸಾಯಿಸಿದ ಆರೋಪದ ಮೇಲೆ ಕಾಡಂಚಿನ ಗ್ರಾಮದ ರೈತರನ್ನು ಬಂಧನ ಮಾಡಿ ಕಾನೂನು ರೀತ್ಯ ಕ್ರಮ ತೆಗೆದುಕೊಂಡಿತ್ತು. ಅದನ್ನು ತಪ್ಪು ಎನ್ನುವುದಕ್ಕೆ ಸಾಧ್ಯವಿಲ್ಲ. ಕಾನೂನು ಪ್ರಕಾರವೇ ಕ್ರಮ ಆಗಿದೆ. ಆದರೆ ಕಾಡಿನ ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬಂದು ಮನುಷ್ಯರ ಮೇಲೆಯೇ ದಾಳಿ ಮಾಡಿ ಹತ್ಯೆ ಮಾಡುವುದು ಅಪರಾಧ ಅಲ್ಲವೇ..? ಕೇವಲ ಪ್ರಾಣಿಗಳ ಜೀವಕ್ಕೆ ಮಾತ್ರ ಕಾನೂನಿನಲ್ಲಿ ಬೆಲೆ ಇರುವುದಾ..? ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವೇ..? ಕಾಡು ಪ್ರಾಣಿಗಳನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ. ಆದರೆ ಕಾಡು ಪ್ರಾಣಿಗಳನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ಸರ್ಕಾರದ್ದು ಆದ ಮೇಲೆ ಈ ಕಾಡಂಚಿನ ಗ್ರಾಮಗಳ ಜನರ ಸಾವಿಗೆ ಸರ್ಕಾರ ಹೊಣೆ ಅಲ್ಲವೇ..? ಅನ್ನೋದಕ್ಕೂ ಸರ್ಕಾರ ಉತ್ತರ ಕೊಡಬೇಕಿದೆ.


