ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನ ಅತ್ಯಂತ ಘನಘೋರ ಘಟನೆಯೊಂದು ನಡೆದಿದೆ. ತಾಯಿ ಒಬ್ಬಳು ತನ್ನ ಮುದ್ದಾದ ಮಗಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ಗಂಡ ಹೆಂಡ್ತಿ, ಇಬ್ಬರು ಮುದ್ದಾದ ಮಕ್ಕಳು. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಚಂದ್ರಶೇಖರ್ ಕುಟುಂಬ ವಾಸವಾಗಿತ್ತು.. ಗಂಡ ಹೆಂಡತಿ ಇಬ್ಬರು ಮಕ್ಕಳು. ಮಗ ತುಮಕೂರಿನ ಹಾಸ್ಟೆಲ್ನಲ್ಲಿ ಓದುತ್ತಿದ್ದ. ಹೀಗಾಗಿ ಮನೆಯಲ್ಲಿ ಮೂರೇ ಜನ ಇರುತ್ತಿದ್ದರು. ನಿನ್ನೆ ಬೆಳಗ್ಗೆ ಚಂದ್ರಶೇಖರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಹೆಂಡತಿ ಹಾಗೂ ಮಗಳು ಚೆನ್ನಾಗಿಯೇ ಇದ್ದರು. ಖುಷಿ ಖುಷಿಯಿಂದಲೇ ಗಂಡನನ್ನು ಕೆಲಸಕ್ಕೆ ಕಳಿಸಿಕೊಟ್ಟಿದ್ರು. ಆ ಬಳಿಕ ಅದೇನು ಆಯ್ತು ಅನ್ನೋದೇ ಅನುಮಾನ.

ಗಂಡ ಚಂದ್ರಶೇಖರ್ ಕೆಲಸಕ್ಕೆ ಹೋದ ಕೆಲವೇ ಹೊತ್ತಿಗೆ ನಡೆಯಬಾರದ್ದು ನಡೆದು ಹೋಗಿದೆ. ಮನೆಯಲ್ಲಿ ಅದೇನು ಆಯ್ತು ಅನ್ನೋ ಮಾಹಿತಿ ಸದ್ಯಕ್ಕೆ ಗೊತ್ತಿಲ್ಲ. 14 ವರ್ಷದ ಮಗಳು ಕಾರುಣ್ಯಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ ಸುವರ್ಣ, ತಾನೂ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸಕ್ಕೆ ಹೋಗಿದ್ದ ಚಂದ್ರಶೇಖರ್, ಮನೆಗೆ ಸಾಕಷ್ಟು ಬಾರಿ ಫೋನ್ ಮಾಡಿದರೂ ರಿಸೀವ್ ಮಾಡಿರ್ಲಿಲ್ಲ. ಹೀಗಾಗಿ ತನ್ನ ತಮ್ಮನಿಗೆ ಫೋನ್ ಮಾಡಿದ್ದ ಚಂದ್ರಶೇಖರ್, ಮನೆಗೆ ಹೋಗಿ ನೋಡ್ಕೊಂಡು ಬಾ ಎಂದಿದ್ದರು. ಚಂದ್ರಶೇಖರ್ ಸಹೋದರ ಮನೆಗೆ ಬಂದು ನೋಡ್ತಿದ್ದಂತೆ ಇಬ್ಬರ ಹೆಣಗಳು ಕಣ್ಣಿಗೆ ಬಿದ್ದಿದ್ದವು.

ಚಂದ್ರಶೇಖರ್ ಹಾಗೂ ಸುವರ್ಣ ಮದುವೆಯಾಗಿ 18 ವರ್ಷ ಕಳೆದಿತ್ತು. ಇಷ್ಟು ವರ್ಷಗಳ ಕಾಲ ಸುಖ ಸಂಸಾರವನ್ನೇ ನಡೆಸಿದ್ದರು. ಆದರೆ, ಇತ್ತೀಚಿಗೆ ಕುಟುಂಬವನ್ನು ಆರ್ಥಿಕ ಸಂಕಷ್ಟ ಸುತ್ತಿಕೊಂಡಿತ್ತು. ಹಣಕಾಸಿನ ಸಮಸ್ಯೆ ಆಗಿದ್ರಿಂದ ಸುವರ್ಣ ಬಳಿ ಖರ್ಚಿಗೆ ಹೆಚ್ಚಾಗಿ ಕಾಸು ಇರ್ತಿರಲಿಲ್ವಂತೆ. ಇದೇ ವಿಷ್ಯವನ್ನ ತನ್ನ ಅಕ್ಕನ ಬಳಿ ಹಲವು ಬಾರಿ ಹೇಳ್ಕೊಂಡಿದ್ರಂತೆ. ಅಷ್ಟೇ ಅಲ್ಲ ಇತ್ತೀಚಿಗೆ ಗಂಡ ಚಂದ್ರಶೇಖರ್ಗೂ ಹಾರ್ಟ್ ಟ್ರಾನ್ಸ್ಪ್ಲೆಂಟ್ ಆಗಿತ್ತಂತೆ. ಹೀಗಾಗಿ ಇದೆಲ್ಲದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರ ಬೇಕು ಅಂತಾ ಸುವರ್ಣ ಅಕ್ಕ ಉಷಾ ಅನುಮಾನ ವ್ಯಕ್ತಪಡಿಸಿದ್ದಾರೆ.

ಜೀವನ ಅನ್ನೋದು ಏರುಪೇರಿನ ರಸ್ತೆಯಿದ್ದ ಹಾಗೆ. ಬದುಕು ಒಂದೇ ರೀತಿ ಸಾಗುವುದಕ್ಕೆ ಆಳ ಸಾಗರವೇನು ಅಲ್ಲ. ಅಲೆಗಳು ದಡಕ್ಕೆ ಅಪ್ಪಳಿಸುವಂತೆ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಸುಖಗಳು ನಮ್ಮ ಜೀವನಕ್ಕೆ ಬಂದು ಅಪ್ಪಳಿಸುತ್ತಿರುತ್ತವೆ. ಎಲ್ಲಾ ಕಾಲಕ್ಕು ಸರಿಯೊಂದುವಂತೆ ನಾವು ಬದುಕುವದನ್ನು ಕಲಿಯಬೇಕು. ಇರುವುದರಲ್ಲಿಯೇ ಜೀವನ ಮಾಡುವುದನ್ನು ಕಲಿತವರು ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪಕ್ಕದ ಮನೆಯಲ್ಲಿ ಕಾರು ಕೊಂಡರು ಎಂದ ಕಾರಣಕ್ಕೆ ನಾವೂ ಕಾರು ಕೊಂಡರೆ ಬದುಕು ಕೊಚ್ಚಿ ಹೋಗುತ್ತದೆ. ಅಥವಾ ಪಕ್ಕದ ಮನೆಯವರು ಕಾರು ಕೊಂಡರು ನಮಗೆ ಕಾರು ಇಲ್ಲ ಎಂದು ನೊಂದುಕೊಂಡರೂ ಬದಕು ಹಳ್ಳ ಹಿಡಿಯಿತು ಎಂದೇ ಅರ್ಥ. ಆದರೂ ಸುವರ್ಣ ಮತ್ತು ಕಾರುಣ್ಯಳ ಸಾವು ಅನುಮಾನ ಮೂಡಿಸುತ್ತಿದೆ.


