ಪ್ರೀತಿ ಪ್ರೇಮ ಅನ್ನೋದು ಕೊಲೆ ಮಾಡುವ ಹಂತಕ್ಕೆ ಬಂದು ನಿಂತಿದೆ. ಪ್ರೀತಿ ಅಂದ್ರೆ ತ್ಯಾಗ ಅನ್ನೋ ಮಾತೊಂದು ಇತ್ತು. ಆದರೆ, ಈಗಿನ ಕಾಲದಲ್ಲಿ ಹುಡುಗಿ, ಹುಡುಗರಿಗೆ ತ್ಯಾಗದ ವಿಚಾರವೇ ಗೊತ್ತಿಲ್ಲ. ಸಿಕ್ಕರೆ ನನಗೇ ಸಿಗ್ಬೇಕು. ಇಲ್ಲದಿದ್ರೆ ನನ್ನಿಂದಲೇ ಕೊನೆ ಆಗ್ಬೇಕು ಅನ್ನೋ ಮನಸ್ಥಿತಿ ಹೆಚ್ಚಾಗಿದೆ. ಹುಚ್ಚು ಪ್ರೀತಿಯ ಹಿಂದೆ ಬಿದ್ದವರು ಬಂಗಾರದಂತಹ ಬದುಕನ್ನೇ ಹಾಳು ಮಾಡ್ಕೊಳ್ತಿದ್ದಾರೆ. ಬರೀ ತಮ್ಮ ಬದುಕನ್ನಷ್ಟೇ ನಾಶ ಮಾಡಿಕೊಳ್ತಿಲ್ಲ. ಬದಲಿಗೆ ಬೇರೊಬ್ಬರ ಬದುಕನ್ನೂ ಸರ್ವನಾಶ ಮಾಡುವ ಕೆಲಸ ಆಗಿದೆ. ತಾನು ಪ್ರೀತಿಸಿದ ಹುಡುಗಿ ಜೊತೆ ಮದುವೆ ಆಗಲು ಒಪ್ಲಿಲ್ಲ ಅಂತಾ ಹುಡುಗಿಯ ಅಕ್ಕನ ಗಂಡನನ್ನೇ ಕೊಂದು ಹಾಕಿದ್ದಾನೆ.. ಹೆಣ್ಣು ಕೇಳೋದಕ್ಕೆ ಮನೆಗೆ ಹೋಗಿ ಹುಡುಗಿ ಮನೆಯಲ್ಲೇ ನೆತ್ತರ ಓಕುಳಿ ಹರಿಸಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ನಿವಾಸಿ ವರುಣ್ ತನ್ನ ಪ್ರೀತಿಗಾಗಿ ಭಾವನ ಪ್ರಾಣ ತೆಗೆದಿದ್ದಾನೆ. ಕಳೆದ ಎರಡು ವರ್ಷದಿಂದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ತೆಂಗಿನ ಮನೆಯ ಹೆಣ್ಣು ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದ. ಹುಡುಗಿ ಕೂಡಾ ಈತನ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ, ಇಬ್ಬರದ್ದೂ ಬೇರೆ ಬೇರೆ ಜಾತಿ ಅನ್ನೋ ಕಾರಣಕ್ಕೆ ಮದುವೆ ಅನ್ನೋದು ಗಗನ ಕುಸುಮ ಆಗಿತ್ತು. ಯಾವುದೇ ಕಾರಣಕ್ಕೂ ನಮ್ಮ ಮನೆಯ ಹೆಣ್ಣುಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲ್ಲ ಅಂತಾ ಹುಡುಗಿ ಮನೆಯವರು ಹಠಕ್ಕೆ ಬಿದ್ದಿದ್ದರು. ಎಷ್ಟು ಬಗೆ ಬಗೆಯಾಗಿ ಕೇಳಿಕೊಂಡರೂ ಮದುವೆ ಒಪ್ಪಿರಲಿಲ್ಲ.. ಸೋಮವಾರ ಏಕಾಏಕಿ ಹುಡುಗಿ ಮನೆಗೆ ಹೋದ ವರುಣ್, ನಮ್ಮಿಬ್ಬರ ಮದುವೆ ಮಾಡಿಸಿ ಅಂತಾ ಕಾಟ ಕೊಡೋದಕ್ಕೆ ಶುರು ಮಾಡಿದ್ದಾನೆ. ಯಾವಾಗ ಇವನ ರಂಪಾಟ ಜಾಸ್ತಿ ಆಯ್ತೋ ಆಗ ಮನೆಯರು ತಮ್ಮ ಹಿರಿಮಗಳ ಗಂಡ ರಾಜೇಶ್ನನ್ನ ಕರೆಸಿಕೊಂಡಿದ್ದರು.
ಮನೆಯ ಹಿರಿ ಅಳಿಯ ಬರ್ತಿದ್ದಂತೆ ಗಲಾಟೆ ಮತ್ತಷ್ಟು ಜಾಸ್ತಿ ಆಗಿತ್ತು. ಯಾವುದೇ ಕಾರಣಕ್ಕೂ ಜಾತಿ ಬಿಟ್ಟು ಜಾತಿಗೆ ಮದುವೆ ಮಾಡಲ್ಲ ಅಂತಾ ಪಟ್ಟು ಹಿಡಿದಿದ್ರು. ಮಾತಿಗೆ ಮಾತು ಬೆಳೀತಿದ್ದಂತೆ ವರುಣ್, ರಾಜೇಶನಿಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯವಾಗ್ತಿದ್ದಂತೆ ಮನೆಯ ಹಿರಿ ಅಳಿಯ ಅಲ್ಲೇ ಕುಸಿದು ಬಿದ್ದಿದ್ದ. ಯಾವಾಗ ಮನೆಯಲ್ಲಿ ರಕ್ತದ ಕೋಡಿ ಹರಿಯುತ್ತಿದ್ದ ಹಾಗೆ ಹಂತಕ ವರುಣ್, ಅಲ್ಲಿಂದ ಕಾಲ್ಕತ್ತಿದ್ದ. ರಾಜೇಶ್ನನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮನೆಯ ಸಮಸ್ಯೆ ಬಗಹರಿಸಲು ಬಂದ ಹಿರಿಯ ಅಳಿಯ ಮಾವನ ಮನೆಯಲ್ಲೇ ಹೆಣವಾಗಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಡಗದ್ದೆಯ ಕಾಫಿ ತೋಟದಲ್ಲಿ ತಲೆಮರೆಸಿಕೊಂಡಿದ್ದ ವರುಣ್ನನ್ನು ಬಂಧಿಸಿದ್ದಾರೆ. ದುಡುಕಿ ಕೋಪದ ಕೈಗೆ ಬುದ್ಧಿ ಕೊಟ್ಟ ಯುವಕ ಕೊಲೆಗಾರನಾಗಿ ಕಂಬಿ ಹಿಂದೆ ಸೇರಿದ್ದಾನೆ. ತನ್ನ ಹುಡುಗಿಗಾಗಿ ಮಾಡಬಾರದ ಕೆಲಸ ಮಾಡಿದ್ದಾನೆ.. ಪ್ರೀತಿಯ ಹುಚ್ಚಲ್ಲಿ ಓರ್ವನ ಹೆಣ ಉರುಳಿಸಿ ಕಂಬಿ ಹಿಂದೆ ಸೇರುವಂತಾಗಿದೆ. ಆದರೆ ಪ್ರೀತಿಯನ್ನು ಮನೆಯವರು ಒಪ್ಪದಿದ್ರೆ ಕಾನೂನು ಮೂಲಕ ಮನೆಯಿಂದ ಹೊರ ಬಂದು ಮದುವೆ ಆಗಬಹುದಿತ್ತು. ಇಬ್ಬರೂ ವಯಸ್ಕರಾಗಿರುವ ಕಾರಣ ಕಾನೂನು ಕೂಡ ಸಹಾಯ ಮಾಡುತ್ತಿತ್ತು. ಆದರೆ ಮನೆಯವರನ್ನೂ ಒಪ್ಪಿಸಲಾಗದೆ, ಕಾನೂನು ರಕ್ಷಣೆಯನ್ನೂ ಪಡೆಯುವ ಬುದ್ಧಿವಂತಿಕೆ ಇಲ್ಲದೆ ಕೊಲೆಗೈದು ಕಂಬಿ ಹಿಂದೆ ಸೇರಿದ್ದಾನೆ. ಆದರೆ ಈ ಹುಡುಗಿ ಪ್ರಿಯಕರನೂ ಇಲ್ಲದೆ, ಪ್ರೀತಿಯ ಅಕ್ಕನ ಗಂಡನೂ ಇಲ್ಲದೆ, ಕುಟುಂಬಸ್ಥರ ಪ್ರೀತಿಯೂ ಇಲ್ಲದೆ ಬದುಕುವಂತಾಗಿದೆ.


