ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅನಂತನ ಅವಾಂತರ ಎನ್ನುವಂತಾಗಿದೆ. ದೇಶ-ವಿದೇಶ ಸೇರಿದಂತೆ ವಿಶ್ವದೆಲ್ಲೆಡೆ ಅಸಂಖ್ಯಾತ ಭಕ್ತರನ್ನು ಹೊಂದಿರುವ ತಿರುಮಲ ಗಿರಿವಾಸ ವೆಂಕಟೇಶ್ವರನಿಗೂ ಸಂಕಷ್ಟಗಳು ತಪ್ಪಿದ್ದಲ್ಲ ಎನ್ನುವಂತಾಗಿದೆ. ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ದೇಗುಲ ಅನ್ನೋ ಖ್ಯಾತಿ ಪಡೆದಿರುವ ತಿಮ್ಮಪ್ಪನ ಸನ್ನಿಧಾನಕ್ಕೆ ದಿನನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗ್ತಾರೆ. ಆದರೆ ಇತ್ತೀಚೆಗೆ ತಿಮ್ಮಪ್ಪನ ಪುಣ್ಯಕ್ಷೇತ್ರ ಇಲ್ಲ ಸಲ್ಲದ ವಿಚಾರಗಳಿಗೆ ಸುದ್ದಿಯಾಗ್ತಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಹಗರಣ ಸಾಲುಗಳೇ ತೆರೆದುಕೊಳ್ತಿವೆ. ರೇಷ್ಮೆ ಬಟ್ಟೆ ಬದಲು ಪಾಲಿಸ್ಟಾರ್ ಬಟ್ಟೆ ಪೂರೈಕೆ ಮಾಡಿದ್ದಾರೆ. 2015 ರಿಂದ 2025 ರವರೆಗಿನ ದುಪ್ಪಟ್ಟ ಪೂರೈಕೆ ಟೆಂಡರ್ನಲ್ಲಿ 10 ವರ್ಷಗಳ ಅವಧಿಯಲ್ಲಿ ₹54 ಕೋಟಿ ವಂಚನೆ ಮಾಡಲಾಗಿದೆ ಅನ್ನೋದು ಗೊತ್ತಾಗಿದೆ.

ಆಂಧ್ರ ಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿ ಸಿಎಂ ಆಗಿದ್ದ ವೇಳೆ ಲಡ್ಡು ಹಗರಣ ನಡೆದಿದ್ದು, ತನಿಖೆ ನಡೆಯುತ್ತಿದೆ. ತಿಮ್ಮಪ್ಪನ ಭಕ್ತರು ಭಕ್ತಿಯಿಂದ ಸ್ವೀಕರಿಸುವ ಲಡ್ಡು ಪ್ರಸಾದಕ್ಕೆ ಹಂದಿ ಮತ್ತು ದನದ ಕೊಬ್ಬಿನ ಜೊತೆಗೆ ರಾಸಾಯನಿಕ ಬಳಕೆ ಮಾಡಿದ್ದ ವಿಚಾರ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಆ ಬಳಿಕ ತಿಮ್ಮಪ್ಪನಿಗೆ ಭಕ್ತರು ಸಲ್ಲಿಸಿದ್ದ ಹುಂಡಿಯ ಹರಕೆ ಹಣ ದುರ್ಬಳಕೆ ಆಗಿರುವ ವಿಚಾರವೂ ಭಕ್ತ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ರೇಷ್ಮೆ ಹಗರಣ ಕೂಡ ಸೇರ್ಪಡೆಯಾಗಿದೆ. VIP, VVIPಗಳು, ದಾನಿಗಳು, ಮತ್ತು ವೇದಾಶಿರ್ವಾಚನದಂತಹ ಆಚರಣೆಗಳಲ್ಲಿ ಈ ಬಟ್ಟೆಗಳನ್ನ ಬಳಸಲಾಗ್ತಿತ್ತು.
ಈ ಬಟ್ಟೆ ರೇಷ್ಮೆ ಬಟ್ಟೆಯದ್ದಲ್ಲ, ಪಾಲಿಸ್ಟಾರ್ ಬಟ್ಟೆ ಅನ್ನೋದು ಆಂತರಿಕ ಜಾಗೃತದಳದ ತನಿಖೆ ವೇಳೆ ಬಟಾ ಬಯಲಾಗಿದೆ. ಅಷ್ಟೇ ಅಲ್ಲದೆ, ದುಪಟ್ಟಗಳ ಮಾದರಿಗಳನ್ನು ಕೇಂದ್ರ ರೇಷ್ಮೆ ಮಂಡಳಿ ಪ್ರಯೋಗಾಲಯ ಸೇರಿದಂತೆ ಎರಡು ಪ್ರಯೋಗಾಲಯಗಳಿಗೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿತ್ತು. ಎರಡೂ ಪರೀಕ್ಷೆಗಳು, ಆ ಬಟ್ಟೆಗೆ ಬಳಸಿದ್ದ ವಸ್ತು ಪಾಲಿಸ್ಟರ್ ಅನ್ನೋದು ದೃಢಪಟ್ಟಿದೆ. ಟೆಂಡರ್ನಲ್ಲಿ TTDಗೆ ರೇಷ್ಮೆ ಬಟ್ಟೆ ಪೂರೈಕೆಗೆ ಕರಾರು ಮಾಡಿಕೊಂಡಿದ್ದರು. ಶುದ್ಧ ಮಲ್ಬೆರಿ ರೇಷ್ಮೆ ಬಟ್ಟೆ ಬಳಕೆಗೆ ಒಪ್ಪಂದ ಆಗಿತ್ತು. ಒಂದು ದುಪ್ಪಟ್ಟಗೆ ಟಿಟಿಡಿಗೆ ₹1,400 ಬಿಲ್ ಮಾಡಿದ್ದರು. ಆದರೆ ಗುತ್ತಿಗೆದಾರ ಪೂರೈಸ್ತಿದ್ದ ಬಟ್ಟೆ ಮೌಲ್ಯ ಕೇವಲ ₹100 ಆಗಿದೆ.
ಶುದ್ಧ ರೇಷ್ಮೆ ಶಾಲುಗಳನ್ನು ಪೂರೈಸಬೇಕಿದ್ದ ಗುತ್ತಿಗೆದಾರ ಪಾಲಿಸ್ಟರ್ ಶಾಲುಗಳನ್ನು ನೀಡಿದ್ದ ಎನ್ನುವುದು ಬಯಲಾಗಿದೆ. ಇದರ ಜೊತೆಗೆ ನಿಜವಾದ ರೇಷ್ಮೆ ಉತ್ಪನ್ನಗಳನ್ನು ದೃಢೀಕರಿಸಲು ಬಳಸುವ ರೇಷ್ಮೆ ಹಾಲೊಗ್ರಾಮ್ ಕೂಡ ಕಾಣೆಯಾಗಿರೋದು ಗೊತ್ತಾಗಿದೆ. ಇನ್ನು ಪ್ರಕರಣ ಬಯಲಾಗ್ತಿದ್ದಂತೆ, ಆರೋಪಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ, ಭ್ರಷ್ಟಾಚಾರ ನಿಗ್ರಹ ದಳ ಟಿಟಿಡಿಗೆ ಶಿಫಾರಸು ಮಾಡಿದೆ. ಆದರೂ ವಿಶ್ವದಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ವಿಚಾರದಲ್ಲಿ ಪದೇ ಪದೇ ಈ ರೀತಿ ಎಡವಟ್ಟುಗಳು ನಡೆಯುತ್ತಿರುವುದು ಭಕ್ತರನ್ನ ಆತಂಕಕ್ಕೆ ದೂಡಿದೆ ಅನ್ನೋದು ಮಾತ್ರ ಸತ್ಯ.


