ಈಗಾಗಲೇ ಜೆಡಿಎಸ್ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ಕಾಂಗ್ರೆಸ್ ಹಾಲಿ ಶಾಸಕ ವಿನಯ್ ಕುಲಕರ್ಣಿ ಕೂಡ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ದಟ್ಟವಾಗಿದೆ. ಧಾರವಾಡದ ಯೋಗೇಶ್ಗೌಡರ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ನಿನ್ನೆ ತೀರ್ಪು ನೀಡಿದೆ. 2016ರ ಜೂನ್ 16 ರಂದು ಯೋಗೇಶ್ಗೌಡರ್ ಕೊಲೆ ನಡೆದಿತ್ತು. ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದ ಯೋಗೇಶ್ಗೌಡರ್ ನೀರಿನ ಸಮಸ್ಯೆ ಬಗ್ಗೆ ದನಿ ಎತ್ತಿದ್ರು ಅನ್ನೋ ಕಾರಣಕ್ಕೆ ಕೊಲೆ ನಡೆದಿತ್ತು ಎನ್ನಲಾಗಿತ್ತು.

ರಾಜ್ಯ ಸರ್ಕಾರ 2019 ರಲ್ಲಿ ಯೋಗೇಶ್ಗೌಡರ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 21 ಮಂದಿ ಮೇಲೆ ಚಾರ್ಜ್ಶೀಟ್ ಹಾಕಿದ್ದರು. 2021ರ ಏಪ್ರಿಲ್ 1 ರಂದು ಕೋರ್ಟ್ನಲ್ಲಿ ಟ್ರಯಲ್ ಶುರುವಾಗಿತ್ತು. 6 ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ಕೋರ್ಟ್, ಕೊಲೆ ಪ್ರಕರಣ ಸಂಬಂಧ 113 ಸಾಕ್ಷಿಗಳನ್ನು ವಿಚಾರಣೆ ಮಾಡಿ ನಿನ್ನೆ ಮಹತ್ವದ ತೀರ್ಪು ಪ್ರಕಟಿಸಿದ್ದು ನಾಲ್ವರನ್ನು ಹೊರತುಪಡಿಸಿ ಉಳಿದ 17 ಮಂದಿ ಆರೋಪಿಗಳು ದೋಷಿ ಎಂದು ತೀರ್ಮಾನಿಸಿದೆ. ಇವತ್ತು ಶಿಕ್ಷೆಯ ಪ್ರಮಾಣ ಪ್ರಕಟ ಆಗಲಿದ್ದು, ಯಾರು ಯಾರಿಗೆ ಯಾವ ತಪ್ಪಿಗೆ ಎಷ್ಟು ಶಿಕ್ಷೆ ಎನ್ನುವುದು ಗೊತ್ತಾಗಲಿದೆ. ಎಲ್ಲಾ ಅಪರಾಧಿಗಳನ್ನು ನಿನ್ನೆಯೇ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದು, ಇವತ್ತು ಮತ್ತೆ ಕೋರ್ಟ್ ಎದುರು ಹಾಜರು ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

2020ರಲ್ಲಿ ವಿನಯ್ ಕುಲಕರ್ಣಿಯನ್ನ ಬಂಧಿಸಿದ್ದ ಸಿಬಿಐ ಅಧಿಕಾರಿಗಳು ಜೈಲಿಗೆ ಕಳುಹಿಸಿದ್ದರು. 2021ರಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆ ಬಳಿಕ 2025ರ ಜೂನ್ನಲ್ಲಿ ವಿನಯ್ ಕುಲಕರ್ಣಿ ಸಾಕ್ಷಿಗಳನ್ನು ಸಂಪರ್ಕಿಸಿದ್ರು ಅನ್ನೋ ಕಾರಣಕ್ಕೆ ಜಾಮೀನು ರದ್ದು ಆಗಿದ್ರಿಂದ ಮತ್ತೆ ಜೈಲಿಗೆ ಹೋಗಿದ್ರು. 2026 ಫೆಬ್ರವರಿ 27ರಂದು ವಿನಯ್ಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಇದೀಗ ದೋಷಿ ಎಂದು ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಕೊಲೆ ಕೇಸ್ನಲ್ಲಿ ಸಾಮಾನ್ಯವಾಗಿ 14 ವರ್ಷ ಜೀವಾವಧಿ ಶಿಕ್ಷೆ ನೀಡುವ ಸಾಧ್ಯತೆಯಿದೆ ಎಂದು ಕಾನೂನು ಬಲ್ಲವರ ಮಾತಾಗಿದೆ. ಕೊಲೆಯಲ್ಲೂ ಘೋರ, ಅಪರೂಪದಲ್ಲಿ ಅಪರೂಪ ಎಂದು ಕೋರ್ಟ್ ಭಾವಿಸಿದರೆ ಗಲ್ಲು ಶಿಕ್ಷೆಗೂ ಅವಕಾಶವಿದೆ ಅನ್ನೋ ಮಾತಿದೆ.
ಯೋಗೇಶ್ಗೌಡರ್ ಕೊಲೆ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳು ಎಂದು ಸಿಬಿಐ ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ A-20 ವಾಸುದೇವ ರಾಮ ನಿಲೇಕಣಿ ಹಾಗೂ A-21 ಸೋಮಶೇಖರ್ ಬಸಪ್ಪ ನ್ಯಾಮಗೌಡ ಇಬ್ಬರನ್ನೂ ನಿರ್ದೋಷಿಗಳು ಎಂದು ಕೋರ್ಟ್ ಖುಲಾಸೆ ಮಾಡಿದೆ. ಇನ್ನು A-1 ಬಸವರಾಜ್ ಹಾಗೂ A-17 ಶಿವಾನಂದ್ ಶ್ರೀ ಶೈಲ್ ಬಿರಾದರ್ ಇಬ್ಬರು ಕೂಡಾ ಸಾಕ್ಷಿಗಳನ್ನಾಗಿ ಪರಿವರ್ತಿಸಿದೆ. ಹೀಗಾಗಿ ನಾಲ್ವರು ಶಿಕ್ಷೆಯಿಂದ ಪಾರಾಗಿದ್ದಾರೆ. ಶಾಸಕ ವಿನಯ್ ಕುಲಕರ್ಣಿಯನ್ನು ಕ್ರಿಮಿನಲ್ ಒಳಸಂಚು ಆರೋಪ ಹಾಗೂ ಕೊಲೆ ಆರೋಪದಡಿ ದೋಷಿ ಎಂದು ತೀರ್ಪು ನೀಡಿದೆ. ಇವತ್ತಿನ ಶಿಕ್ಷೆ ಪ್ರಮಾಣದ ಮೇಲೆ ಎಲ್ಲರ ಚಿತ್ತ ಹರಿದಿದ್ದು, ಕೆಲವೇ ಗಂಟೆಗಳಲ್ಲಿ ಜೀವಾವಧಿ ಶಿಕ್ಷೆಯೋ ಅಥವಾ ಗಲ್ಲು ಶಿಕ್ಷೆಯೋ ಅನ್ನೋದು ಗೊತ್ತಾಗಲಿದೆ.


