ಕನ್ನಡ ಹೋರಾಟಗಾರರು ಹಿಂದಿಯನ್ನು ವಿರೋಧ ಮಾಡಿದ್ರು ಅನ್ನೋ ಕಾರಣಕ್ಕೆ ರಾಜ್ಯ ಸರ್ಕಾರ ಪರೀಕ್ಷಾ ಸಮಯದಲ್ಲಿ ಹಿಂದಿ ಭಾಷೆಯ ಅಂಕಗಳನ್ನು ಪರಿಗಣಿಸದೆ ಗ್ರೇಡ್ ನೀಡುತ್ತೇವೆ ಎನ್ನುವ ನಿರ್ಧಾರ ಮಾಡಿತ್ತು. ಆದರೆ ಆ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಅಂಕಗಳನ್ನೇ ನೀಡುವಂತೆ ನಿರ್ದೇಶನ ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ದ್ವಸದಸ್ಯ ಪೀಠ, ಈ ವರ್ಷ ಹಳೇ ಪದ್ದತಿಯನ್ನೇ ಮುಂದುವರಿಸಿ, ಮುಂದಿನ ವರ್ಷದಿಂದ ಬೇಕಿದ್ದರೆ ಹೊಸ ನಿಯಮ ಜಾರಿ ಮಾಡಿ ಎಂದು ಸೂಚಿಸಿ ಅರ್ಜಿಯನ್ನು ಇತ್ಯರ್ಥ ಮಾಡಿದೆ.

ಸರ್ಕಾರದ ಪರವಾಗಿ ಹಾಜರಿದ್ದ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಸಂಬಂಧ 2025ರ ಅಕ್ಟೋಬರ್ 28 ರಂದು ಸುತ್ತೋಲೆ ಹೊರಡಿಸಲಾಗಿದೆ. ಬಳಿಕ ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ಪರೀಕ್ಷೆ ನಡೆದಿದೆ. ದಿನಪತ್ರಿಕೆ ವರದಿ ಆಧಾರದ ಪಿಐಎಲ್ ಸಲ್ಲಿಕೆಯಾಗಿತ್ತು. ಆ ಪಿಐಎಲ್ ವಜಾ ಆಗಿದೆ. ನಂತರ ಎರಡು ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಇಲ್ಲಿ ಹಿಂದಿ ತೃತೀಯ ಭಾಷೆ ವಿಚಾರಕ್ಕೆ ಗ್ರೇಡಿಂಗ್ ಸಿಸ್ಟಮ್ ತರಲಾಗಿದೆ. ಹಿಂದಿ ಭಾಷೆಯಿಂದ ವಿದ್ಯಾರ್ಥಿಗಳ ಮೇಲೆ ಹೊರೆ ಜಾಸ್ತಿಯಾಗಿದೆ. ನಾವು ಬೇರೆ ವಿಷಯಗಳ ಬಗ್ಗೆ ಹೇಳುತ್ತಿಲ್ಲ. ತೃತೀಯ ಭಾಷೆ ಹಿಂದಿ ಬಗ್ಗೆಯಷ್ಟೆ. ಶೇಕಡಾ 80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಿಂದ ಫೇಲ್ ಆಗ್ತಿದ್ದಾರೆ ಎಂದು ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ರು.

ಗ್ರೇಡಿಂಗ್ ಕೊಡುವ ನಿಮ್ಮ ಅಧಿಸೂಚನೆಯ ಉದ್ದೇಶ ಏನು..? ಎಂದು ಹೈಕೋರ್ಟ್ ಪ್ರಶ್ನಿಸಿದಾಗ ಕಳೆದ ವರ್ಷ 1.75 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ರು ಅದಕ್ಕಾಗಿ ಅಂದ್ರು. ಹಾಗಿದ್ರೆ ಎಲ್ಲರನ್ನೂ ಪಾಸ್ ಮಾಡೋದಾ ನಿಮ್ಮ ಅಧಿಸೂಚನೆ…? ನಿಮ್ಮ ಉದ್ದೇಶ ಅದಾಗಿರೋದಿಲ್ಲ. ಮಕ್ಕಳು ಫೇಲ್ ಆಗ್ತಿದ್ರೆ ಒಳ್ಳೆಯ ಶಿಕ್ಷಕರರನ್ನು ನೇಮಕ ಮಾಡಿ. ಹಿಂದಿ ಭಾಷೆ ಕಲಿಯಲಿ ಬಿಡಿ. ತೃತೀಯ ಭಾಷೆ ಕೆಲವರಿಗೆ ಕನ್ನಡವೂ ಆಗಿರಲಿದೆ ಅಲ್ವಾ..? ಎಂದ ನ್ಯಾಯಮೂರ್ತಿಗಳು, ಈ ವರ್ಷ ಹೀಗೆ ಇರಲಿ. ಮುಂದಿನ ವರ್ಷದಿಂದ ನೀವು ಇದನ್ನು ಮಾಡಬಹುದು. ಮುಂದಿನ ವರ್ಷ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಅಲ್ವಾ..? ಮೂರನೇ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದರೆ ಹೆಚ್ಚಿನ ಶ್ರೇಣಿ ಪಡೆಯಲು ಅನುಕೂಲವಾಗುತ್ತದೆ. 2025-26 ನೇ ಸಾಲಿಗೆ ಅಂಕಗಳನ್ನು ನೀಡಲು ನಿರ್ದೇಶನ ನೀಡಿದ ಹೈಕೋರ್ಟ್, ಸರ್ಕಾರ ಸಲ್ಲಿಸಿದ ಮರು ಪರಿಶೀಲನಾ ಅರ್ಜಿ ಇತ್ಯರ್ಥ ಪಡಿಸಿದೆ.

ಮಾರ್ಚ್ 18 ರಿಂದ ಏಪ್ರಿಲ್ 2 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದಿದೆ. ಕರಡು ನಿಯಮಗಳನ್ನು ಏಪ್ರಿಲ್ 10 ರಂದು ಹೊರಡಿಸಲಾಗಿದೆ. ಹೀಗಾಗಿ ತನ್ನ ಆದೇಶ ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದ್ದು, 2025 ಆಕ್ಟೋಬರ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೂ ಮುನ್ನ ಹೊರಡಿಸಿರುವ ಸುತ್ತೋಲೆ ಪ್ರಕಾರ ಅಂಕಳನ್ನು ನೀಡಲು ಹೈಕೋರ್ಟ್ ನಿರ್ದೇಶನ ನೀಡಿದೆ. ಎಸ್ಎಸ್ಎಲ್ಸಿ ಹಿಂದಿ ವಿಷಯಕ್ಕೆ ಅಂಕ ನೀಡುವಂತೆ ಹೈಕೋರ್ಟ್ ಆದೇಶ ಹಿನ್ನೆಲೆ, ರಾಜ್ಯ ಸರ್ಕಾರಕ್ಕೆ ಮುಖಭಂಗ ಆದಂತೆ ಆಗಿದೆ. ಪರೀಕ್ಷೆ ಮಧ್ಯೆ ಅಂಕಗಳ ಬದಲು ಗ್ರೇಡ್ ಎಂದಿದ್ದ ಶಿಕ್ಷಣ ಸಚಿವರು ಹಾಗೂ ಸರ್ಕಾರಕ್ಕೆ ಮಂಗಳಾರತಿ ಆಗಿದೆ. ಈ ಆದೇಶ ಏನಿದ್ದರೂ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ. ಆದರೆ ಹಿಂದಿಗೆ ಗ್ರೇಡ್ ಕೊಡ್ತಾರೆ, ಅದಕ್ಕೇನು ಹೆಚ್ಚಿನ ಒತ್ತು ನೀಡುವುದು ಬೇಡ ಎಂದು ಮಕ್ಕಳು ನಿರ್ಲಕ್ಷ್ಯ ಮಾಡಿದ್ದರೆ..! ಅಂತಹ ಮಕ್ಕಳ ಶೇಕಡವಾರು ಅಂಕಗಳ ಮೇಲೆ ಸರ್ಕಾರ ಹೊಡೆತ ಕೊಟ್ಟಂತಾಗಿದೆ.


