NEET ಪಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧ ಸಿಬಿಐ ತನಿಖೆ ಚುರುಕು ಮಾಡಿದೆ. ಪುಣೆಯ ಉಪನ್ಯಾಸಕಿ ಮನೀಷಾ ಮಾಂಧರೆಯನ್ನ ತೀವ್ರ ವಿಚಾರಣೆ ನಂತರ ಸಿಬಿಐ ಬಂಧಿಸಿತ್ತು. NEET ಪ್ರಶ್ನೆಪತ್ರಿಕೆ ತಜ್ಞರ ಸಮಿತಿಯಲ್ಲಿದ್ದ ಬಯಾಲಜಿ ಉಪನ್ಯಾಸಕಿ ಮನೀಷಾ ಮಾಂಧರೆ ವಿದ್ಯಾರ್ಥಿಗಳಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ದೆಹಲಿ ರೋಸ್ ಅವೆನ್ಯೂ ಕೋರ್ಟ್ ವಿಚಾರಣೆಗಾಗಿ 14 ದಿನ CBI ಕಸ್ಟಡಿಗೆ ನೀಡಿ ಆದೇಶಿಸಿದೆ.

ನೀಟ್ ಪರೀಕ್ಷೆ ಗೊಂದಲದಿಂದ ಮಕ್ಕಳ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಹಳ ದೊಡ್ಡ ದುರಂತ. 22 ಲಕ್ಷ ವಿದ್ಯಾರ್ಥಿಗಳಿಗೆ ಮೋಸವಾಗಿದೆ. ಇದು ಆಕಸ್ಮಿಕವಾಗಿ ಆಗಿರೋದು ಅಲ್ಲ, ವ್ಯವಸ್ಥಿತವಾಗಿ ಆಗಿರೋದು. ಇದರಲ್ಲಿ ಬಿಜೆಪಿ RSS ಕೈವಾಡವಿದೆ ಅಂತಾ ಆರೋಪಿಸಿದ್ದಾರೆ.. ಯಾಕೆ ಇನ್ನೂ ಒಬ್ಬರು ರಾಜೀನಾಮೆ ಕೊಡ್ತಿಲ್ಲ..? ವ್ಯವಸ್ಥಿತವಾಗಿ ಮಕ್ಕಳ ಭವಿಷ್ಯವನ್ನ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರನ್ನ ಸಂಪುಟದಿಂದ ಕಿತ್ತು ಹಾಕಬೇಕು. ಅವರಿಗೆ ಸ್ವಲ್ಪವಾದ್ರೂ ನಾಚಿಕೆ ಇದ್ರೆ ರಾಜೀನಾಮೆ ಕೊಡಬೇಕು ಅಂತಾ ಕಿಡಿಕಾರಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಚಾರವಾಗಿ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ, ಯೂತ್ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಂ ಭಂಡಾರಿ, ಸರ್ಕಾರವನ್ನು ಸರ್ಕಸ್ ತಂಡವನ್ನಾಗಿ ಮಾಡಿ ಇಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ನರಕವನ್ನು ತೋರಿಸುತ್ತಿದ್ದಾರೆ. ಪೇಪರ್ ಲೀಕ್ ಆದಲ್ಲೆಲ್ಲ ಬಿಜೆಪಿ ಸರ್ಕಾರವೇ ಇದೆ ಎಂದು ಕಿಡಿಕಾರಿದ್ದಾರೆ.

ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಭಾರತದಲ್ಲಿ ಇಷ್ಟು ದಿನ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿತ್ತು. ಈಗ ಇಂಡಿಯನ್ ಪೇಪರ್ ಲೀಕ್ ನಡೆಯುತ್ತಿದೆ. ರಾಜಸ್ಥಾನದ ಶಿಕ್ಷಣ ಸಚಿವರ ಆಪ್ತರು NEET ಪೇಪರ್ ಲೀಕ್ ಹಿಂದೆ ಇರುವವರು. ನೀಟ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಯಾಕೆ ಮಾತಾಡ್ತಾ ಇಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನುವುದು ಗೊತ್ತಾಗ್ತಿದ್ದ ಹಾಗೆ ಪರೀಕ್ಷೆಯನ್ನು ರದ್ದು ಮಾಡಿ ಜೂನ್ 21ರಂದು ಮರು ಪರೀಕ್ಷೆಗೆ ಆದೇಶ ಮಾಡಲಾಗಿದೆ. ಆದರೆ ಇಲ್ಲೀವರೆಗೂ ಸರ್ಕಾರದ ಮಟ್ಟದಲ್ಲಿ ಯಾರ ತಲೆದಂಡವೂ ಆಗಿಲ್ಲ.


