ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ 20ಕ್ಕೆ 3 ವರ್ಷ ತುಂಬುವ ಹಿನ್ನೆಲೆಯಲ್ಲಿ ತುಮಕೂರಲ್ಲಿ ಇಂದು ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸಾರ್ಥಕ ಸೇವೆಗಳ ಸಮರ್ಪಣೆ ಹೆಸರಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಲಿರುವ 682 ಕೋಟಿ ಮೌಲ್ಯದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ.

ವಿವಿಧ ಇಲಾಖೆಯ 1 ಲಕ್ಷದ 52 ಸಾವಿರದ 492 ಫಲಾನುಭವಿಗಳಿಗೆ ಸವಲತ್ತು ಸೌಲಭ್ಯ ವಿತರಣೆ ಮಾಡಲಿದ್ದಾರೆ. ಸಾಂಕೇತಿಕವಾಗಿ 20 ಸಾವಿರ ಮಂದಿಗೆ ಕಂದಾಯ ಗ್ರಾಮ ಯೋಜನೆಯಡಿ ಸಿಎಂ ಸಿದ್ದರಾಮಯ್ಯ, ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ. ಇನ್ನು ಸಮಾರಂಭದಲ್ಲಿ 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಸಾಧನಾ ಸಮಾವೇಶ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಲಿದೆ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹೀಗಾಗಿ ಇಂಗ್ಲೆಂಡ್ನಿಂದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನ ಅಧಿಕಾರಿಗಳು ಭಾಗಿಯಾಗ್ತಿದ್ದಾರೆ.

ತುಮಕೂರಿಗೆ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್ ಸಚಿವರು ಆಗಮಿಸ್ತಿರೋದ್ರಿಂದ ಪೊಲೀಸ್ರು ಬಂದೋಬಸ್ತ್ ಮಾಡ್ಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೊರಟು 10.45ಕ್ಕೆ ತುಮಕೂರಿನ ಹೈಸ್ಕೂಲ್ ಮೈದಾನಕ್ಕೆ ಬರಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ 4 ಗಂಟೆಗೆ ತುಮಕೂರಿನಿಂದ ವಾಪಸ್ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ನಿನ್ನೆ ಸಂಜೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ವೇದಿಕೆಗೆ ಭೇಟಿ ಕೊಟ್ಟು ಕಾರ್ಯಕ್ರಮದ ಸಿದ್ಧತೆ ಪರೀಶೀಲನೆ ನಡೆಸಿದ್ರು. ಮೈಕ್ ಚೆಕ್ ಮಾಡಿ ವಿಘ್ನೇಶ್ವರ ಸ್ತೋತ್ರ ಹೇಳಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭಾ ಸ್ತೋತ್ರ ಪಠನೆ ಮಾಡಿದ್ದಾರೆ. ಸಾಧನ ಸಮಾವೇಶ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಳೀ ಏಮಧೂ ಗಣೇಶನನ್ನು ಪ್ರಾರ್ಥಿಸಿದ್ದಾರೆ ಹೋಂ ಮಿನಿಸ್ಟರ್ ಪರಮೇಶ್ವರ್.

ಸಾಧನಾ ಸಮಾವೇಶಕ್ಕೆ ಬರುವ ಜನರಿಗಾಗಿ ಜಿಲ್ಲಾಡಳಿತದಿಂದ ಸಾರಿಗೆ ವ್ಯವಸ್ಥೆ ಮಾಡಿದ್ದು, ಬರೊಬ್ಬರಿ 2,400 ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಸ್ಗಳ ಮೂಲಕ ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಒಟ್ಟು ಮೂರೂವರೆ ಸಾವಿರ ಪೊಲೀಸರು ಬಂದೋಬಸ್ತ್ನಲ್ಲಿ ಭಾಗಿಯಾಗ್ತಿದ್ದಾರೆ. 13 ಎಸ್ಪಿಗಳು, 28 ಡಿವೈಎಸ್ಪಿಗಳು, 83 ಇನ್ಸ್ಪೆಕ್ಟರ್ಗಳು, 195 ಪಿಎಸ್ಐಗಳು, 16 ಕೆಎಸ್ಆರ್ಪಿ ತುಕಡಿ, 15 ಡಿಎಆರ್ ತುಕಡಿಗಳು, 800 ಹೋಂ ಗಾರ್ಡ್ಸ್ಗಳಿಂದ ಬಂದೋಬಸ್ತ್ ಮಾಡಲಾಗಿದೆ.
ಕೆಲವು ಮಾರ್ಗ ಬದಲಾವಣೆ ಮಾಡಿದ್ದು, ಗುಬ್ಬಿ ಸರ್ಕಲ್ನಿಂದ ಬಟ್ವಾಡಿವರೆಗಿನ ಬಿ.ಹೆಚ್. ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ. ಬಿ.ಹೆಚ್. ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಬೆಂಗಳೂರು ಕಡೆಯಿಂದ ತುಮಕೂರಿಗೆ ಬರುವವರು ಕುಣಿಗಲ್ ರಿಂಗ್ ರೋಡ್ ಅಥವಾ ಹನುಮಂತಪುರ ಅಂಡರ್ಪಾಸ್ ಬಳಸಲು ಸೂಚನೆ ಕೊಟ್ಟಿದ್ದು, ತಿಪಟೂರು ಮತ್ತು ಕುಣಿಗಲ್ ಕಡೆಯಿಂದ ಬರುವ ವಾಹನ ಸವಾರರು ಗುಬ್ಬಿ ರಿಂಗ್ ರೋಡ್ ಮೂಲಕ ಸಂಚಾರ ಮಾಡಬೇಕಿದೆ. ಗುಬ್ಬಿ ಗೇಟ್ನಿಂದ ಶಿರಾ ಕಡೆಗೆ ಹೋಗುವ ಸಾರ್ವಜನಿಕರು 80 ಫೀಟ್ ರಸ್ತೆ ಹಾಗೂ ದಿಬ್ಬೂರ್ ಜಂಕ್ಷನ್ ಮೂಲಕ ಸಾಗಬೇಕು. ಯಾವುದೇ ರೀತಿಯ ಪ್ರತಿಭಟನೆ, ಹೋರಾಟಗಳಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಇಲ್ಲ. ಪ್ರತಿಭಟನೆಗೆ ಯತ್ನಿಸಿದರೆ ಕಠಿಣ ಶಿಕ್ಷೆ ಜರುಗಿಸಲು ವಿಶೇಷ ಟೀಮ್ ನೇಮಕ ಮಾಡಲಾಗಿದೆ.


