ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ರಾಜೀನಾಮೆಗೆ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹೇರಿಲ್ಲ. ನಾನೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ಯಾರ ಒತ್ತಡದಿಂದಲೂ ನಾನು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹೈಕಮಾಂಡ್ಗೆ ನಾನು ಈ ಹಿಂದೆ ಮಾತು ಕೊಟ್ಟಂತೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆಗೆ ಆಯ್ಕೆ ಆಗಿ ಹೋಗ್ತಾರೆ ಅನ್ನೋ ಮಾತಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಈ ಬಗ್ಗೆ ಒತ್ತಡ ಹೇರುತ್ತಿದೆ. ನೀವು ರಾಜ್ಯಸಭೆಗೆ ಹೋಗ್ತೀರಾ..? ಅನ್ನೋ ಪ್ರಶ್ನೆಗೆ ನಾನು ರಾಜ್ಯಸಭೆಗೆ ಹೋಗಲ್ಲ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ. ನನಗೆ ಇನ್ನೂ 2 ವರ್ಷ ಶಾಸಕನಾಗಿ ಸೇವೆ ಮಾಡಲು ಅವಕಾಶವಿದೆ. ಹೀಗಾಗಿ ಸಕ್ರಿಯ ರಾಜಕಾರಣದಲ್ಲಿ ಇರ್ತೀನಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ನಾನು ಅಧಿಕಾರ, ಹಣದ ಹಿಂದೆ ಎಂದಿಗೂ ಹೋದವನಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ನಾನು ಆಸ್ತಿ-ಪಾಸ್ತಿ ಮಾಡಿಕೊಂಡವನಲ್ಲ. ಮತದಾರ ದೇವರುಗಳಿಗೆ ಎಂದೂ ದ್ರೋಹ ಮಾಡಿಲ್ಲ. ಕಳೆದ 50 ವರ್ಷಗಳ ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಣಬಲ ಇರೋರು ಮಾತ್ರ ರಾಜಕೀಯದಲ್ಲಿ ಉಳಿಯಲು ಸಾಧ್ಯ. ನಾನು ನಂಬಿಕೊಂಡ ಮೌಲ್ಯ, ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂದು ತಿಳಿಸಿದ್ರು.
ಜೆಡಿಎಸ್ ಪಕ್ಷದಿಂದ ನನ್ನನ್ನು ಹೊರಕ್ಕೆ ಹಾಕಿದಾಗ, ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೆ. ದಿವಂಗತ ಅಹ್ಮದ್ ಪಟೇಲ್ ನನ್ನನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿದ್ರು. ಕೋಮುವಾದಿಗಳ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಇರುತ್ತದೆ. ಸಂವಿಧಾನ ಇರೋದಕ್ಕೆ ನಾನು ಇಲ್ಲಿ ತನಕ ಬಂದಿದ್ದೇನೆ. ನಾನು ಬುದ್ಧ ಬಸವ ಅಂಬೇಡ್ಕರ್, ಗಾಂಧಿಯಲ್ಲಿ ನಂಬಿಕೆ ಇಟ್ಟವನು ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನನ್ನ ಕೊನೆ ಉಸಿರು ಇರುವ ತನಕ ಸಂವಿಧಾನಕ್ಕೆ ಧಕ್ಕೆ ತರುವವರು, ಕೋಮುವಾದಿಗಳ ವಿರುದ್ಧ ಹೋರಾಟ ಮಾಡ್ತೀನಿ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಡಾ.ರಾಜ್ಕುಮಾರ್ ಅಭಿಮಾನಿ ದೇವರು ಅಂತಾ ಜನರನ್ನು ಕರೀತಿದ್ರು. ನಾನು ರಾಜಕಾರಣಿ.. ಸಂವಿಧಾನವನ್ನೇ ಧರ್ಮ ಅಂದುಕೊಂಡಿದ್ದೇನೆ. ಮತದಾರರೇ ನಮ್ಮ ಅಭಿಮಾನಿ ದೇವರು ಎಂದು ಮತದಾರರ ಬಗ್ಗೆ ತನಗಿರುವ ಅಭಿಮಾನವನ್ನು ಮೆಲುಕು ಹಾಕಿದ್ರು. ಕರ್ನಾಟಕದ 7 ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ನನಗೆ 2 ಬಾರಿ ಸಿಎಂ ಹಾಗೂ 2 ಬಾರಿ ಪ್ರತಿಪಕ್ಷ ನಾಯಕನ ಅವಕಾಶ ಸಿಕ್ಕಿತ್ತು. ನನಗೆ ಅವಕಾಶ ಕೊಟ್ಟಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಧನ್ಯವಾದ ಅಂತಾ ಸಿದ್ದರಾಮಯ್ಯ ತಿಳಿಸಿದ್ರು.


