ಮಕ್ಕಳಾಗಲಿ ಅಂತಾ ಕಂಡ ಕಂಡ ದೈವಗಳಿಗೆ ಮೊರೆ ಹೋಗೋದನ್ನು ನೋಡಿದ್ದೀವಿ. ಆದರೆ ಇಲ್ಲೊಬ್ಬ ಶತಮೂರ್ಖ ತಂದೆ ಯಾರೋ ಏನೋ ಹೇಳಿದ್ರೂ ಅಂತಾ ತನ್ನ ಕರುಳ ಬಳ್ಳಿಯನ್ನೇ ಕತ್ತರಿಸಿ ಹಾಕಿದ್ದಾನೆ. 6 ವರ್ಷಗಳ ಕಾಲ ಸಾಕಿ ಸಲುಹಿದ ಮಗನನ್ನೇ ಸಾಯಿಸಿದ್ದಾನೆ. ನಿನ್ನ ಮಗ ನೋಡೋದಕ್ಕೆ ನಿನ್ನ ರೀತಿಯ ಹೋಲಿಕೆ ಇಲ್ಲ ಅಂತಾ ಊರಿನಲ್ಲಿ ಚೇಡಿಸ್ತಿದ್ದರಂತೆ. ಆ ಹೇಳಿಕೆ ಮಾತನ್ನು ನಂಬಿದ ಮೂರ್ಖ ತಂದೆ, ಹೌದು ನನ್ನ ಮಗ ನೋಡೋದಕ್ಕೆ ನನ್ನ ರೀತಿ ಕಾಣ್ತಿಲ್ಲ. ಇವನು ನನ್ನ ಮಗ ಅಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದ. ಮಾರ್ಚ್ ಕಡೇ ವಾರ ಮಹಾರಾಷ್ಟ್ರಕ್ಕೆ ಹೋಗಿ ಕೃಷ್ಣಾ ನದಿಗೆ ತಳ್ಳಿ ಬಂದಿದ್ದಾನೆ.

ಮಾರ್ಚ್ ತಿಂಗಳ ಅಂತ್ಯದಲ್ಲಿ ಮಗನನ್ನು ಹಾಸ್ಟೆಲ್ಗೆ ಸೇರಿಸಿ ಬರ್ತೀನಿ ಅಂತಾ ಮನೆಯಿಂದ ಕರೆದುಕೊಂಡು ಹೋದವನು, ಏನೂ ಅರಿಯದ ಬಾಲಕನನ್ನ ಜಲಸಮಾಧಿ ಮಾಡಿದ್ದಾನೆ. 6 ವರ್ಷದ ಪುಟ್ಟ ಕಂದಮ್ಮ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ ಶಾಲೆಗೆ ಹೋಗಿ ಬಂದು ಅಮ್ಮನ ಆಸರೆಯಲ್ಲಿ ಬೆಳೆಯಬೇಕಿತ್ತು. ಆದರೆ ಅಪ್ಪನ ಅನುಮಾನಕ್ಕೆ ಹೆಣವಾಗಿ ಹೋಗಿದೆ. ವಿಜಯಪುರ ಜಿಲ್ಲೆ ನಾಗಠಾಣ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಅರಕೇರಿ, ಇಷ್ಟೆಲ್ಲಾ ಆಗೋದಕ್ಕೂ ಮೊದಲು ಮಗನ ಜೊತೆಗೆ ಚೆನ್ನಾಗಿಯೇ ಇದ್ದ. ಮೊದಲ ಮೂರ್ನಾಲ್ಕು ವರ್ಷ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಣೆ ಮಾಡುತ್ತಾ ಪ್ರೀತಿಯಿಂದ ಇದ್ದ. ಆದ್ರೆ, ಇತ್ತೀಚಿಗೆ ಯಾವಾಗ ಊರಿನ ಕೆಲವು ಪುಂಡರು ನಿನ್ನ ಮಗನ ಲಕ್ಷಣ ನಿನ್ನ ರೀತಿಯಿಲ್ಲ ಎನ್ನುತ್ತಿದ್ದರೋ ಆಗ ತನ್ನ ಮನಸ್ಸು ಬದಲಿಸಿದ್ದ.

ಮಾರ್ಚ್ 16ರಂದು ಮಗನನ್ನು ಕೊಂದು ಬರಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದ ಮಲ್ಲಿಕಾರ್ಜುನ ಅರಕೇರಿ, ಮಗನನ್ನು ಒಳ್ಳೆ ಹಾಸ್ಟೆಲ್ ವ್ಯವಸ್ಥೆ ಇರುವ ಶಾಲೆಗೆ ಸೇರಿಸ್ತೀನಿ ಅಂತಾ ಮನೆಯವ್ರಿಗೆ ಹೇಳಿ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿಗೆ ಕರೆದೊಯ್ದಿದ್ದ. ಅಪ್ಪ ಎಲ್ಲಿಗೆ ಕರೆದೊಯ್ಯುತ್ತಿದ್ದಾನೆ ಅನ್ನೋದನ್ನು ಅರಿಯದ ಮುದ್ದು ಕಂದಮ್ಮ ಅಪ್ಪ ಹೇಳಿದಂತೆ ಕೃಷ್ಣಾ ನದಿ ದಡಕ್ಕೆ ಹೋಗಿ ನಿಂತಿತ್ತು. ಯಾರೂ ಇಲ್ಲದ ಸಮಯ ನೋಡ್ಕೊಂಡು ನದಿಗೆ ತಳ್ಳಿ ಬಿಟ್ಟಿದ್ದ. ಮಗ ನೀರಲ್ಲಿ ಬಿದ್ದು ಒದ್ದಾಡಿದರೂ ಮಗನ ರಕ್ಷಣೆ ಮಾಡದೆ ವಾಪಸ್ ಬಂದು ಬಿಟ್ಟಿದ್ದ. ಯಾವಾಗ ತಾಯಿ ಮಗನ ಬಗ್ಗೆ ವಿಚಾರಿಸಲು ಶುರು ಮಾಡಿದಳೋ ಆಗ ಕೊಲೆಗಾರ ತಂದೆಗೆ ಟೆನ್ಷನ್ ಶುರುವಾಗಿತ್ತು.

ಮಗನನ್ನ ಕೊಂದು ಮನೆಗೆ ಬಂದ ಮಲ್ಲಿಕಾರ್ಜುನ ಅರಕೇರಿ, ಹತ್ತಾರು ಕಥೆ ಕಟ್ಟೋದಕ್ಕೆ ಶುರು ಮಾಡಿದ್ದ. ಮಗ ಎಲ್ಲೋದ ಅಂತಾ ಪತ್ನಿ ಭಾಗ್ಯಶ್ರೀ ಕೇಳ್ತಿದ್ದ ಹಾಗೆ ಸಿಂದಗಿ ಬಳಿ ಶಾಲೆಗೆ ಸೇರಿಸಿದ್ದೇನೆ. ಅಲ್ಲೇ ಹಾಸ್ಟೆಲ್ನಲ್ಲಿ ಇಟ್ಟಿದ್ದೀನಿ ಅಂತಾ ಮನೆ ಮಂದಿಯನ್ನೆಲ್ಲಾ ನಂಬಿಸಿದ್ದ. ಹೀಗಾಗಿ ಮಲ್ಲಿಕಾರ್ಜುನ ಹೇಳಿದ್ದೇ ಸತ್ಯ ಅಂದ್ಕೊಂಡು ಎಲ್ಲರೂ ಸುಮ್ಮನಾಗಿದ್ರು. ಆದರೆ ಏಪ್ರಿಲ್ 1ರಂದು ಸಿದ್ಧಾರ್ಥನ ಹುಟ್ಟುಹಬ್ಬ ಇತ್ತು. ಹೀಗಾಗಿ ಮಗನನ್ನು ಮನಗೆ ಕರ್ಕೊಂಡು ಬಾ ಅಂತಾ ಪತ್ನಿ ಪಟ್ಟು ಹಿಡಿದು ಕೂತಿದ್ಲು. ಯಾವಾಗ ಮನೆಯವರೆಲ್ಲಾ ಸಿದ್ಧಾರ್ಥ ಎಲ್ಲಿ..? ಅಂತಾ ಪ್ರಶ್ನೆ ಮಾಡೋದಕ್ಕೆ ಶುರು ಮಾಡಿದ್ರೋ, ಮಲ್ಲಿಕಾರ್ಜುನ ಮನೆ ಬಿಟ್ಟು ಓಡಿ ಹೋಗಿದ್ದ. ಹೀಗಾಗಿ ಅನುಮಾನಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಗುವನ್ನು ಹುಡುಕುವುದಕ್ಕೆ ಶುರು ಮಾಡಿದ್ರು. ಅದರ ಜೊತೆಗೆ ಮಲ್ಲಿಕಾರ್ಜುನ ಅರಕೇರಿಯನ್ನು ಹುಡುಕಿ ಕರೆತಂದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಅಸಲಿ ಸತ್ಯ ಬಯಲಾಗಿದೆ. ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ತಳ್ಳಿ ಬಂದಿದ್ದಾಗಿ ಸತ್ಯ ಒಪ್ಕೊಂಡಿದ್ದಾನೆ. ಅತ್ತ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ಪೊಲೀಸರು ಕೂಡಾ ಅಪರಿಚಿತ ಬಾಲಕನ ಅಪರಿಚಿತ ಶವ ಸಿಕ್ಕಿದೆ ಎಂದು ಪ್ರಕಟಣೆ ಹೊರಡಿಸಿದ್ರು. ಹೀಗಾಗಿ ಸಿದ್ಧಾರ್ಥ್ ಸಾವು ತಿಂಗಳ ನಂತರ ಬಯಲಾಗಿದೆ. ತಂದೆ ಎನಿಸಿಕೊಂಡ ಮೂರ್ಖ ಮಲ್ಲಿಕಾರ್ಜುನ ಅರಕೇರಿ ಕೊಲೆ ಮಾಡಿ ಆರೋಪಿ ಆದರೆ, ಊರಿನಲ್ಲಿ ತಮಾಷೆಗೆ ಮಾಡಿದ್ದೋ..? ಅಥವಾ ದುರುದ್ದೇಶವೋ..? ಕೊಲೆಯಲ್ಲಿ ಗ್ರಾಮದ ಕೆಲವು ಪೋಲಿ ಪುಕಾರಿಗಳೂ ಭಾಗಿದಾರ ಆಗಿದ್ದಾರೆ. ಎಲ್ಲರಿಗೂ ತಕ್ಕ ಶಿಕ್ಷೆ ಆಗಬೇಕಿದೆ.


