ಹಾವೇರಿಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಸಾಲು ಸಾಲು ಅವಾಂತರ ಸೃಷ್ಟಿಯಾಗಿದೆ. ಹಾವೇರಿ ಜಿಲ್ಲೆಯ ಗೋಡಿಹಾಳ ಗ್ರಾಮದಲ್ಲಿ ಮನೆ ಮೇಲಿನ ತಗಡು ಹಾರಿ ಹೋಗಿದೆ. ರಾಣೇಬೆನ್ನೂರು ತಾಲೂಕಿನ ಗೋಡಿಹಾಳ ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಯ ತಗಡು ಹಾರಿ ಹೋಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಚಿಲ್ಲೂರು ಗ್ರಾಮದಲ್ಲಿ ಸರಕಾರಿ ಶಾಲೆಯ ಆವರಣದಲ್ಲಿದ್ದ ಬೃಹತ್ ಮರ ಮೈಲಾರಪ್ಪ ಎಂಬುವವರ ಮನೆ ಮೇಲೆ ಉರುಳಿ ಬಿದ್ದಿದೆ. ಶಿಗ್ಗಾವಿ ತಾಲೂಕಿನ ಶಿಡ್ಲಾಪುರ ಗ್ರಾಮದ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಮಳೆಯಿಂದ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದ್ದು, ಸಂಚಾರಕ್ಕೂ ಅಡಚಣೆ ಆಗಿತ್ತು.

ಹಾವೇರಿ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಸಂಜೆ ಸುರಿದ ಗಾಳಿ-ಮಳೆಗೆ ಜನಜೀವನ ಅಸ್ತವ್ಯಸ್ತ ಆಗಿತ್ತು. ಬ್ಯಾಡಗಿ ಮಾರುಕಟ್ಟೆಗೆ ಮಳೆ ನೀರು ನುಗ್ಗಿದ ಪರಿಣಾಮ ಮೊಣಕಾಲು ಉದ್ದ ನೀರಿನಲ್ಲಿ ವ್ಯಾಪಾರಸ್ಥರು ಪರದಾಡಿದ್ದಾರೆ. ಶನಿವಾರ ಸಂತೆ ನಡೆಯುವ ದಿನ ಆಗಿದ್ದು, ಶನಿವಾರವೇ ಮಳೆ ಆರ್ಭಟಿಸಿದ್ದು ವ್ಯಾಪಾರಿಗಳು, ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿತ್ತು. ಮಾರುಕಟ್ಟೆ ಸಂಪೂರ್ಣ ಮಳೆಯಿಂದ ಜಲಾವೃತ ಆಗಿತ್ತು. ಸುಮಾರು ಎರಡೂ ಗಂಟೆಗಳ ನಿರಂತರವಾಗಿ ಮಳೆರಾಯ ಅಬ್ಬರಿಸಿದ್ದಾನೆ.
ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಸೋಮಲಾಪುರ ಗ್ರಾಮಸ್ಥರು ತತ್ತರಿಸಿದ್ದಾರೆ. ರಾಣೇಬೆನ್ನೂರು ತಾಲೂಕಿನ ಸೋಮಲಾಪುರದಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿದ್ದವು. ಗ್ರಾಮದಲ್ಲಿದ್ದ ಬೃಹತ್ ಆಲದ ಮರ ನೆಲಕ್ಕುರುಳಿ ಆತಂಕ ಎದುರಾಗಿತ್ತು. ಕುರಿಗಳ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬದ ಅಡಿ ಸಿಲುಕಿದ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮತ್ತೊಂದೆಡೆ ಗಾಳಿ ಸಹಿತ ಭಾರೀ ಮಳೆಗೆ ಮನೆ ಗೋಡೆ ಕುಸಿತವಾಗಿದೆ. ಬಿರುಗಾಳಿ ಸಹಿತ ಮಳೆಗೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.

ಮಳೆಯ ಅಬ್ಬರಕ್ಕೆ ಹಾವೇರಿ ನಗರ ತತ್ತರಿಸಿದೆ. ಚರಂಡಿಯಲ್ಲಿ ಮಳೆ ನೀರು ತುಂಬಿ ಚರಂಡಿ ಮೇಲೆ ಹರಿದು ಹಾವೇರಿ ನಗರ ಪೊಲೀಸ್ ಠಾಣೆಯ ಆವರಣಕ್ಕೆ ಮಳೆ ನೀರು ನುಗ್ಗಿದೆ. ಚರಂಡಿ ಸಂಪೂರ್ಣ ತುಂಬಿ ಹಾವೇರಿ ನಗರ ಪೊಲೀಸ್ ಠಾಣೆಯ ಆವರಣ ನೀರಿನಿಂದ ಜಲಾವೃತ ಆಗಿತ್ತು. ಆ ಬಳಿಕ ಪೊಲೀಸ್ ಸಿಬ್ಬಂದಿ ಠಾಣೆಯ ಆವರಣ ಸ್ವಚ್ಚಗೊಳಿಸುವಂತಾಗಿತ್ತು. ಒಟ್ಟಾರೆ ಮುಂದಿನ ಮೂರು ದಿನಗಳ ಕಾಲ ಮಳೆರಾಯನ ಆರ್ಭಟ ಮುಂದುವರಿಯಲಿದ್ದು, ನಾಗರಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.


