ಚಾಮರಾಜನಗರದಲ್ಲಿ ಶೂಟೌಟ್ ಪ್ರಕರಣದ ಬಳಿಕ ಮೈಸೂರಿನ ಶವಾಗಾರಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿದ್ದರು. ಡಿಸಿ ರೂಪ ಕೂಡ ಭೇಟಿ ನೀಡಿದ್ದು, ಕುಟುಂಬಸ್ಥರ ಜೊತೆ ಸಚಿವ ಪುಟ್ಟರಂಗ ಶೆಟ್ಟಿ ಮಾತುಕತೆ ಮಾಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಪುಟ್ಟರಂಗಶೆಟ್ಟಿ ಪ್ರಕರಣ ಸಂಬಂಧ ಮಾಹಿತಿ ಪಡೆದಿದ್ದಾರೆ. ಸಚಿವರಿಗೆ ಜಿಲ್ಲಾಧಿಕಾರಿ ಶ್ರೀರೂಪ, ಮಾಜಿ ಶಾಸಕ ನರೇಂದ್ರ ಸಾಥ್ ನೀಡಿದ್ದರು. ನ್ಯಾಯಾಂಗ ತನಿಖೆಗೆ ಕ್ರಮ ಕೈಗೊಳ್ತೇವೆ. ಅದೇ ರೀತಿ ಎನ್ಕೌಂಟರ್ ಮಾಡಿದವರ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಭರವಸೆ ನೀಡಿದ್ದಾರೆ.

ಸೋಮವಾರ ಅಧಿವೇಶನದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ. ಏಳು ಮಂದಿ ಅರಣ್ಯ ಸಿಬ್ಬಂದಿ ಇದ್ದರು ಎಂದು ಗೊತ್ತಾಗಿದೆ. ಎನ್ಕೌಂಟರ್ ಮಾಡಿದವರ ಅಮಾನತ್ತಿಗೆ ಕ್ರಮ ಕೈಗೊಳ್ತೇವೆ. ಕಾಡಿಗೆ ಹೋಗಿದ್ದ ನಾಲ್ವರ ಪೈಕಿ ಮೂವರು ಗುಂಡೇಟಿಗೆ ಬಲಿಯಾಗಿದ್ದಾರೆ. ಮತ್ತೊಬ್ಬ ಮೈಸೂರಿನಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾನೆ. ಘಟನೆ ಸಂದರ್ಭದಲ್ಲಿ ಏನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಅರಣ್ಯಾಧಿಕಾರಿಗಳು ನೀಡುತ್ತಿಲ್ಲ. ಇವರು ಏಕೆ ಹೋಗಿದ್ದರು ಎಂಬುದರ ಬಗ್ಗೆ ಗ್ರಾಮಸ್ಥರು ಸಹ ಹೇಳುತ್ತಿಲ್ಲ. ಯಾರೂ ಸತ್ಯ ಹೇಳುತ್ತಿಲ್ಲ. ಎಲ್ಲವು ತನಿಖೆಯಿಂದ ಗೊತ್ತಾಗಲಿದೆ. ಪರಿಹಾರದ ಬಗ್ಗೆ ಕಾನೂನು ಪ್ರಕಾರ ಕ್ರಮ ಎಂದಿದ್ದಾರೆ ಸಚಿವ ಸಿ ಪುಟ್ಟರಂಗಶೆಟ್ಟಿ.
ಚಾಮರಾಜನಗರದಲ್ಲಿ ಬೇಟೆಗಾರ ಮೇಲೆ ಶೂಟೌಟ್ ಪ್ರಕರಣದ ಬಗ್ಗೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ನನಗೆ ಬೆಳಗ್ಗೆ 5 ಗಂಟೆಯಿಂದಲೇ ಎಲ್ಲಾ ಮಾಹಿತಿ ತಲುಪಿದೆ. ವಾಸ್ತವಾಂಶ ಕೂಡ ನನಗೆ ತಿಳಿದಿದೆ. ಮಾಧ್ಯಮಗಳೂ ಕೂಡ ಹಲವು ವಿಷಯಗಳನ್ನು ತೋರಿಸ್ತಾ ಇದ್ದಾರೆ. ಅಲ್ಲಿ ಅರಣ್ಯ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದೆ. ಬೇಟೆಗಾರ ಬಳಿ ಇದ್ದ ಬಂದೂಕು ಸೇರಿ ಎಲ್ಲವನ್ನೂ ಸೀಜ್ ಮಾಡಲಾಗಿದೆ. ಒಬ್ಬರನ್ನು ಸಾಗಾಣೆ ಮಾಡುವ ಟೈಮ್ನಲ್ಲಿ ಸಾವು ಆಗಿದೆ. ಉಳಿದವರನ್ನೆಲ್ಲ ವಶಕ್ಕೆ ಪಡೆಯಲಾಗಿದೆ. ಶರೀರಗಳ ಪರಿಶೀಲನೆ ಕೂಡ ನಡೀತ್ತಿದೆ. ಮ್ಯಾಜಿಸ್ಟ್ರೇಟ್ ತನಿಖೆ ಮಾಡಿದ ನಂತರ ಮಿಕ್ಕ ವಿಷಯ ರಾಜ್ಯದ ಜನರಿಗೆ ತಿಳಿಸ್ತೇನೆ ಎಂದಿದ್ದಾರೆ.
ಬೆಂಗಳೂರಲ್ಲಿ ಅರಣ್ಯ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಬೆಳಗ್ಗೆ 6.30 ಕ್ಕೆ ಕೋಲಾರಕ್ಕೆ ಹೋಗುವಾಗಲೇ ನನಗೆ ಮಾಹಿತಿ ಬಂತು. ಹಿರಿಯ ಅಧಿಕಾರಿ ಪುಷ್ಕರ್ರವರು ಮಾಹಿತಿ ನೀಡಿದರು. ವನ್ಯಜೀವಿ ತಾಣದಲ್ಲಿ ಜಿಂಕೆ ಕೊಂದು ಮಾಂಸ ತರುತ್ತಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಫೈರಿಂಗ್ ಆಗಿದೆ ಅಂದ್ರು. ಹನೂರು ತಾಲ್ಲೂಕಿನ ಶಾಗ್ಯ ಶಾಖೆಯ ಹೊಳೆ ಮುರಿದಡ್ಡಿ, ಚಿಕ್ಕನಲ್ಲೂರು ಅರಣ್ಯದಲ್ಲಿ ಘಟನೆ ನಡೆದಿದೆ. ನಾಡ ಬಂದೂಕುಧಾರಿಗಳು ಅರಣ್ಯ ಪ್ರವೇಶಿಸಿದ್ರು. ಮಾಹಿತಿ ಆಧರಿಸಿ ಆರ್ಎಫ್ಓ ಶೇಖರ್ ಹಾಗು ಸಿಬ್ಬಂದಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ನಾಲ್ಕು ಬ್ಯಾಗ್ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ.
ಇನ್ನೂ ಸಿಎಂ ಡಿ.ಕೆ ಶಿವಕುಮಾರ್ ನ್ಯಾಯಾಂಗ ತನಿಖೆ ಮಾಡಿಸ್ತೀವಿ ಅಂತ ಹೇಳಿದ್ದಾರೆ. ತನಿಖೆ ಆದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ. ನಾಡ ಬಂದೂಕುಧಾರಿಗಳು ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ. ಅರಣ್ಯ ಸಿಬ್ಬಂದಿಗಳಾದ ಶೇಖರಪ್ಪ, ರೋಹಿತ್, ಶಿವರಾಜ್ ಕೂಡ ಹೋಗಿದ್ದಾರೆ. ಸಿಬ್ಬಂದಿ ಮೇಲೆ ದಾಳಿ ಮಾಡಲಾಗಿದೆ. ನಾಲ್ಕು ಬ್ಯಾಗ್ ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ. ಅಂಟೋನಿಸ್ವಾಮಿ ಪರಿಯನಾಗಂ, ಜಾನ್ ಪೀಟರ್ , ಸವಾರಿಯಪ್ಪನ್ ಸಾವನ್ನಪ್ಪಿದ್ದಾರೆ. ಮಹಿಮ್ ದಾಸ್ ತಪ್ಪಿಸಿಕೊಂಡು ಹೋಗಿದ್ದಾನೆ. ರಾತ್ರಿಯೆಲ್ಲಾ ಬೇಟೆಯಾಡಿದ್ದಾರೆ. ತನಿಖೆ ಆದ ಮೇಲೆ ಸರಿಯಾಗಿ ಗೊತ್ತಾಗುತ್ತದೆ ಎಂದಿದ್ದಾರೆ.
ಮಲಗಿದ್ದವರ ಮೇಲೆ ಶೂಟ್ಔಟ್ ಮಾಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ. ಸಿಎಂ ಮ್ಯಾಜಿಸ್ಟ್ರೇಟ್ ತನಿಖೆಗೆ ಒಪ್ಪಿಸಿದ್ದಾರೆ. ತಮ್ಮ ಇಲಾಖೆ ಸಿಬ್ಬಂದಿ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಉದ್ದೇಶಪೂರ್ವಕವಾಗಿ ಮಾಡಿದ್ದಾರಾ..? ಅನ್ನೋ ಬಗ್ಗೆಯೂ ತನಿಖೆ ಮಾಡುತ್ತೇವೆ ಅಂತಾ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.


