ರಾಜ್ಯ ರಾಜಕಾರಣದಲ್ಲಿ ಹೊಸ ಕ್ರಾಂತಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಸಿಎಂ ಸಿದ್ದರಾಮಯ್ಯ ಸಂಪುಟದ ಎರಡನೇ ವಿಕೆಟ್ ಪತನವಾಗಿದೆ. ನಾಗೇಂದ್ರ ವಾಲ್ಮೀಕಿ ಹಗರಣದಲ್ಲಿ ಆರೋಪಿಯಾಗಿ ಅರೆಸ್ಟ್ ಆಗುವ ಭಿತಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಇದೀಗ ರಾಜಣ್ಣ ಯಾವುದೇ ಆರೋಪ ಇಲ್ಲದೆ ಇದ್ದರೂ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ರಾಜಣ್ಣ ಒಂದೇ ಒಂದು ಮಾತಿಗೆ ರಾಜೀನಾಮೆ ನೀಡುವಂತೆ ಆಯ್ತಾ..? ಎಂದರೆ ಖಂಡಿತ ಇಲ್ಲ. ರಾಜಣ್ಣ ಸಾಲು ಸಾಲು ತಪ್ಪುಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಒಂದಲ್ಲ, ಎರಡಲ್ಲ.. ಮೂರು ತಪ್ಪುಗಳನ್ನು ಮಾಡಿದ ರಾಜಣ್ಣನ ಮೇಲೆ ಹೈಕಮಾಂಡ್ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಆ ಬ್ರಹ್ಮಾಸ್ತ್ರದ ಹಿಂದೆ ಡಿ.ಕೆ ಶಿವಕುಮಾರ್ ಇದ್ದಾರೆ ಅನ್ನೋದು ಕಾಂಗ್ರೆಸ್ ಮೂಲಗಳ ಮಾಹಿತಿ. ಡಿಕೆ ಶಿವಕುಮಾರ್ಗೆ ಸಿಎಂ ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದಾರೆ. ಅದಕ್ಕೂ ಒಂದು ಕಾರಣವಿದೆ.
ಸಿದ್ದರಾಮಯ್ಯ ಪರವಾಗಿ ಪದೇ ಪದೇ ವಾಗ್ದಾಳಿ ಮಾಡ್ತಿದ್ದ ರಾಜಣ್ಣ ವಿರುದ್ಧ ಡಿ.ಕೆ ಶಿವಕುಮಾರ್ ಒಂದೊಂದೇ ಅಸ್ತ್ರಗಳನ್ನು ಜೋಡಿಸುತ್ತಾ ಬಂದಿದ್ದರು. ಮೊದಲಿಗೆ ಸೆಪ್ಟೆಂಬರ್ ಕ್ರಾಂತಿ ಆಗುತ್ತದೆ ಎಂದಿದ್ದ ರಾಜಣ್ಣು ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದರು. ಆ ಬಳಿಕ ಸುರ್ಜೇವಾಲ ಕರೆದಿದ್ದ ಸಭೆಗೆ ಹಾಜರಾಗದ ಕೆ.ಎನ್ ರಾಜಣ್ಣ, ವಿದೇಶ ಪ್ರವಾಸ ಕೈಗೊಂಡಿದ್ದರು. ವಿದೇಶದಿಂದ ವಾಪಸ್ ಆದ ಬಳಿಕ ಸುರ್ಜೇವಾಲ ಅಧಿಕಾರಿಗಳ ಸಭೆ ನಡೆಸಿದ್ದು ತಪ್ಪು ಎಂದು ಖಂಡತುಂಡವಾಗಿ ಖಂಡಿಸಿದ್ದರು. ಆ ನಂತರ ಸೆಪ್ಟೆಂಬರ್ಗೆ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಈ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ಇಂಚಿಂಚೂ ಮಾಹಿತಿ ತಲುಪಿಸಲಾಗಿತ್ತು. ಅಷ್ಟು ಮಾತ್ರವಲ್ಲದೆ ಹನಿಟ್ರ್ಯಾಪ್ ವಿಚಾರವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಕತ್ತಿ ಮಸೆದಿದ್ದ ರಾಜಣ್ಣನನ್ನು ಸಂಪುಟದಿಂದ ತೆಗೆಸುವುದಕ್ಕೆ ಸಕಾಲಕ್ಕಾಗಿ ಕಾದು ಕುಳಿತಿದ್ದ ಡಿಕೆಶಿಗೆ ರಾಹುಲ್ ವಿರುದ್ಧದ ಹೇಳಿಕೆ ಬ್ರಹ್ಮಾಸ್ತ್ರವೇ ಸಿಕ್ಕಂತಾಯ್ತು.

ಮತಗಳ್ಳತ ಆರೋಪ ಮಾಡಿದ್ದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಆಗಿರುವ ಕೆ.ಎನ್ ರಾಜಣ್ಣ, ಕಾಂಗ್ರೆಸ್ ಸರ್ಕಾರದ ತಪ್ಪೂ ಇದೆ. ಲೋಖಸಭಾ ಚುನಾವಣೆ ನಡೆದಾಗ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇತ್ತಲ್ಲವೇ..? ಎನ್ನುವ ಮೂಲಕ ಸ್ವತಃ ರಾಹುಲ್ ವಿರುದ್ಧವೇ ನಿಲ್ಲುವ ಧೈರ್ಯ ಮಾಡಿದ್ದರು. ಯಾವಾಗ ರಾಹುಲ್ ಮಾಡಿದ್ದ ಆರೋಪ ಸರಿಯಲ್ಲ ಅನ್ನೋ ಮಾತನ್ನು ರಾಜಣ್ಣ ಹೇಳಿದ್ರೋ ಆ ಮಾತುಗಳ ಸಂಪೂರ್ಣ ಮಾಹಿತಿ ದೆಹಲಿ ತಲುಪಿತ್ತು. ರಾಜಣ್ಣ ಪಕಜ್ಷದ ವಿರುದ್ಧವಾಗಿ ಇದೀಗ ಮಾತ್ರ ಮಾತನಾಡ್ತಿಲ್ಲ. ಪದೇ ಪದೇ ಇದೇ ರೀತಿ ಹೇಳಿಕೆ ಕೊಡುವ ಕೆಲಸ ಮಾಡ್ತಿದ್ದಾರೆ. ಹೈಕಮಾಂಡ್ ನಾಯಕರ ಎಚ್ಚರಿಕೆಗೂ ಕ್ಯಾರೇ ಎನ್ನಲ್ಲ. ರಾಜ್ಯ ಉಸ್ತುವಾರಿಗೂ ಬೆಲೆ ಕೊಡಲ್ಲ ಅನ್ನೋದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಜೊತೆಗೆ ರಾಜಣ್ಣ ಆತ್ಮೀಯತೆ ಹೊಂದಿದ್ದರು. ಆದರೂ ರಾಜಣ್ಣನನ್ನು ಉಳಿಸಿಕೊಳ್ಳಲು ಆಗಲಿಲ್ವಾ.? ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಅದಕ್ಕೂ ಉತ್ತರ ಇದೆ.
ಸಿದ್ದರಾಮಯ್ಯ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಆ ಕಾರ್ಯಕ್ರಮದಲ್ಲಿ ಹಾಸನದ ನಗರಸಭಾ ಅಧ್ಯಕ್ಷನ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ನಿರ್ಧಾರವನ್ನು ರಾಜಣ್ಣ ಪ್ರಶ್ನಿಸಿದ್ದರು. ಹಾಸನದ ನಗರಾಸಭಾ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ನಾಯಕರಿಗೆ ನೀಡುವುದಕ್ಕೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಹುಡಾ ಅಧ್ಯಕ್ಷ ಸ್ಥಾನವನ್ನು ಅರಸೀಕೆರೆಯ ಕುರುಬ ಸಮುದಾಯದ ನಾಯಕನಿಗೆ ಕೊಡಬೇಕು ಎಂದು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು. ಆ ಮಾತಿಗೆ ರಾಜಣ್ಣ ಸಾಧ್ಯವಿಲ್ಲ. ಸ್ಥಳೀಯ ನಾಯಕರನ್ನೇ ಆಯ್ಕೆ ಮಾಡಬೇಕು ಎಂದಿದ್ದರು. ಆದರೆ ಈ ವಿಚಾರವಾಗಿ ಸಿದ್ದರಾಮಯ್ಯ ಜೊತೆಗೆ ಮುನಿಸಿಕೊಂಡಿದ್ದ ರಾಜಣ್ಣ ಸಭೆಯಿಂದ ಮಧ್ಯದಲ್ಲೇ ಎದ್ದು ಹೋಗಿದ್ದರು. ಆ ಬಳಿಕ ಸಿಎಂ ಸಿದ್ದರಾಮಯ್ಯ ಜೊತೆಗೂ ರಾಜಣ್ಣ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ರಾಜಣ್ಣ ತಪ್ಪುಗಳನ್ನು ತೋರಿಸಿ ಹೈಕಮಾಂಡ್ ಮನವೊಲಿಸಿದ್ದ ಡಿ.ಕೆ ಶಿವಕುಮಾರ್ಗೆ ಸಿದ್ದರಾಮಯ್ಯ ಮೌನವೇ ಸಮ್ಮತಿ ಎನ್ನುವಂತಿತ್ತು. ಅನಿವಾರ್ಯವಾಗಿ ರಾಜಣ್ಣ ರಾಜೀನಾಮೆ ಕೊಡುವಂತೆ ಆಯ್ತು ಎನ್ನುವುದು ಕಾಂಗ್ರೆಸ್ ಒಳಮನೆಯ ಮಾತುಗಳು.


