ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದೇ ಕಡೇ ದಿನವಾಗಿದ್ದು, ಇವತ್ತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಎರಡೂ ಕಡೆಯಲ್ಲೂ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ನಿನ್ನೆ ಬೆಂಗಳೂರಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಾಳೆ, ಸಿಎಂ ಸೇರಿದಂತೆ ಕೆಲ ನಾಯಕರು ಎರಡು ಕ್ಷೇತ್ರಗಳಿಗೆ ಹೋಗ್ತೇವೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ಕ್ಲಿಯರ್ ಆಗಿದೆ. ಉಮೇಶ್ ಮೇಟಿ ಅವರಿಗೆ ಬಾಗಲಕೋಟೆ ಟಿಕೆಟ್ ನೀಡಲಾಗಿದೆ. ನಾವು ಶಿಫಾರಸು ಮಾಡಿದಂತೆ ಟಿಕೆಟ್ ನೀಡಲಾಗಿದೆ ಎಂದಿದ್ದಾರೆ.

ಅಲ್ಪಸಂಖ್ಯಾತ ನಾಯಕರು, ಸಿಎಂ ಸಿದ್ದರಾಮಯ್ಯ ಹಾಗೂ ನಾನು ಸೇರಿ ಎಲ್ಲರು ಚರ್ಚೆ ಮಾಡಿದ್ದೇವೆ. ಎಲ್ಲರೂ ಒಟ್ಟಾಗಿ ಮಾತಾಡಿ ಒಮ್ಮತದ ತೀರ್ಮಾನ ಮಾಡಿದ್ದೇವೆ. ಪಕ್ಷದ ಸಂಪ್ರದಾಯದಂತೆ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ. ಒಮ್ಮತದಿಂದ ಚುನಾವಣೆ ಮಾಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದಾರೆ. ಬುಧವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಟಿಕೆಟ್ ಸಿಗುವ ನಂಬಿಕೆ ಮೇಲೆ ಸಮರ್ಥ್ ನಾಮಪತ್ರ ಹಾಕಿದ್ದರು. ಪಕ್ಷ ಹೇಳಿದಂತೆ, ಎಲ್ಲರೂ ಫಾಲೊ ಮಾಡ್ತಾರೆ. ಅದನ್ನು ಮಲ್ಲಿಕಾರ್ಜುನ್ ಸಹ ಹೇಳಿದ್ದರು. ಮುಸ್ಲಿಂ ಸಮುದಾಯವರು ಟಿಕೆಟ್ ಕೇಳೊದು ತಪ್ಪಲ್ಲ, ಜನಸಂಖ್ಯೆ ಹೆಚ್ಚಿದೆ. ಆದರೆ ಸಮರ್ಥ್ಗೆ ಎಲ್ಲರ ಒಮ್ಮತ ಇದೆ ಎಂದಿದ್ದಾರೆ.

ದಾವಣಗೆರೆಯಲ್ಲಿ ಅಬ್ದುಲ್ ಜಬ್ಬಾರ್ಗೆ ಮೂರು ಬಾರಿ ಎಂಎಲ್ಸಿ ಮಾಡಿದ್ದೇವೆ. ಅವರ ಹಕ್ಕು ಇರೋದಕ್ಕೆ ನಾವು ಎಂಎಲ್ಸಿ ಮಾಡಿದ್ದು ಎಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಧಾರವಾಡದಲ್ಲಿ ಸಲೀಂಗೆ ಎಂಎಲ್ಸಿ ಮಾಡಿದ್ದೀವಿ. ಬಿಜೆಪಿ, ಜೆಡಿಎಸ್ನವ್ರು ಮುಸ್ಲಿಂ ಅಭ್ಯರ್ಥಿಗಳನ್ನ ಹಾಕಿಸೊ ಷಡ್ಯಂತ್ರ ಮಾಡ್ತಿದ್ದಾರೆ, ಮಾಡುತ್ತಾರೆ ಎಂದಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಎಲ್ಲರಿಗೂ ಧನ್ಯವಾದ ಹೇಳಿದ್ದು, ಅಲ್ಪಸಂಖ್ಯಾತರು, ಎಲ್ಲರು ಸೇರಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಯಾರು ಪಕ್ಷಕ್ಕೆ ದುಡಿಯುತ್ತಾರೆ ಅವರನ್ನ ಗುರುತಿಸುವ ನಿಯತ್ತು ಕಾಂಗ್ರೆಸ್ ಪಕ್ಷದಲ್ಲಿದೆ. ಅಲ್ಪಸಂಖ್ಯಾತರು ನಾವು ಅಣ್ಣ ತಮ್ಮಂದಿರ ರೀತಿ ಇದ್ದೇವೆ ಸಣ್ಣಪುಟ್ಟ ಕಿಡಿಗೇಡಿಗಳು ಗೊಂದಲ ಮೂಡಿಸಿರಬಹುದು. ಆದರೆ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ, ಯಾರು ವಿರೋಧ ಇಲ್ಲ. ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ ಬಾಂಧವ್ಯ ಚೆನ್ನಾಗಿದೆ. ನಲವತ್ತು ವರ್ಷದಿಂದ ನಮ್ಮ ಕುಟುಂಬ ಎಲ್ಲರ ವಿಶ್ವಾಸ ಗಳಿಸಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಸುರ್ಜೇವಾಲಾ ಮತ್ತು ಎಲ್ಲಾ ಸೇರಿ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಅಂತ ಟಿಕೆಟ್ ನೀಡಲಾಗಿದೆ. ಬಿ ಫಾರ್ಮ್ ನೀಡಲಾಗಿದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ ಎಂದಿದ್ದೆ. ಇನ್ಮೇಲೆ ಕೆಲಸ ಕಾರ್ಯ ಶುರುವಾಗುತ್ತದೆ. ಯಾವುದೇ ಗೊಂದಲ, ಮನಸ್ಥಾಪ ಇಲ್ಲ. ಚುನಾವಣೆ ಅಂದ್ಮೇಲೆ ನಾನು ನಿಲ್ಲುತ್ತೇನೆ ಅಂತಾರೆ. ನಮ್ಮ ಕುಟುಂಬ ಕಾಂಗ್ರೆಸ್ ನಿಷ್ಠೆ ಇದೆ. ಎಲ್ಲರೂ ಒಮ್ಮತದಿಂದ ಸಮರ್ಥ್ಗೆ ಟಿಕೆಟ್ ನೀಡಿ ಎಂದರು, ಅದರಂತೆ ಟಿಕೆಟ್ ನೀಡಲಾಗಿದೆ ಎಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯ ಮಾತ್ರ ಕೊತಕೊತನೆ ಕುದಿಯುತ್ತಿದೆ.

ಶಾಮನೂರು ಶಿವಶಂಕರಪ್ಪ ನಾನು ಇದೇ ಕಡೆ ಬಾರಿ ಮುಂದಿನ ಬಾರಿ ಮುಸ್ಲಿಮರಿಗೆ ಟಿಕೆಟ್ ಎಂದಿದ್ದರು. ಅದರಂತೆ ಈ ಬಾರಿ ಟಿಕೆಟ್ ಕೊಡಬೇಕು ಅನ್ನೋದು ಮುಸ್ಲಿಂ ನಾಯಕರ ಪಟ್ಟು ಆಗಿತ್ತು. ಅಷ್ಟೇ ಅಲ್ಲ ಸಚಿವ ಜಮೀರ್ ಅಹ್ಮದ್ ನಾಯಕತ್ವದಲ್ಲಿ ಟಿಕೆಟ್ ಕೇಳಲು ಸಿಎಂ ಬಳಿ ಹೋಗಿದ್ದಾಗ, ಎಸ್.ಎಸ್ ಮಲ್ಲಿಕಾರ್ಜುನ್ ಕೆಂಡ ಕಾರಿದ್ದರು. ದಾವಣಗೆರೆಗೂ ಜಮೀರ್ಗೂ ಏನು ಸಂಬಂಧ..? ಅವನ್ಯಾಕೆ ನಮ್ಮ ಜಿಲ್ಲೆ ವಿಚಾರದಲ್ಲಿ ಮಾತನಾಡಬೇಕು ಎನ್ನುವ ಮೂಲಕ ಒಂದು ಬಾರಿ ವಾಗ್ವಾದವೇ ನಡೆದಿತ್ತು. ಆ ಬಳಿಕ ಪಕ್ಷದ ವೇದಿಕೆಯಲ್ಲೂ ವಾಕ್ಸಮರ ಮುಂದುವರಿದಿತ್ತು,. ಕಟ್ಟ ಕಡೆಯ ಗಳಿಗೆ ತನಕ ಟಿಕೆಟ್ ಪಡೆಯಲು ಜಮೀರ್ ಭಾರೀ ಹೋರಾಟ ನಡೆಸಿದರು. ಇದೀಗ ಸಮರ್ಥ್ಗೆ ಟಿಕೆಟ್ ಕೊಡಲಾಗಿದೆ. ಮುಸ್ಲಿಮರು ಕಾಂಗ್ರೆಸ್ ಅನ್ನೋ ಕಾರಣಕ್ಕೆ ಮತ ಹಾಕ್ತಾರೆ ಅನ್ನೋ ಮಾತಿದೆ. ಆದರೆ ಸಮರ್ಥ್ ಒಮ್ಮೆ ಗೆದ್ದರೆ ಇನ್ನು ಎಂದಿಗೂ ಕ್ಷೇತ್ರ ಮುಸ್ಲಿಮರ ಕೈ ಸೇರಲ್ಲ ಅನ್ನೋ ಮಾತು ಕೂಡ ಹರಿದಾಡ್ತಿದೆ. ಮುಂದೇನು ಅನ್ನೋದು ಶೀಘ್ರದಲ್ಲೇ ಬಹಿರಂಗ ಆಗಲಿದೆ.


