ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನನಲ್ಲಿ ಬಿಜೆಪಿಯಿಂದ ರಸ್ತೆ ತಡೆ ಚಳುವಳಿ ನಡೆಸಲಾಗಿದೆ. ಯಲಹಂಕದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್, ತಾವೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಗುಂಡಿಗಳನ್ನು ಇನ್ನು ಮುಚ್ಚದ ಸರ್ಕಾರದ ವಿರುದ್ಧ ಮಹಾಲಕ್ಷ್ಮಿ ಲೇಔಟ್ನಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿದೆ. ಕಂಠೀರವ ಸ್ಟುಡಿಯೋ ಮುಂಭಾಗದಲ್ಲಿ ಗುಂಡಿ ಮುಚ್ಚಿ ಪ್ರತಿಭಟನೆ ಮಾಡಿದ್ದಾರೆ, ತಾವೇ ರಸ್ತೆ ಗುಂಡಿಗೆ ಸಿಮೆಂಟ್ ಮಿಕ್ಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ ಕೇಸರಿ ಪಡೆ.

ಪ್ರತಿಭಟನೆಯಲ್ಲಿ ಬೆಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ಎಸ್ ಹರೀಶ್, ಎನ್ ಎಲ್ ನರೆಂದ್ರ ಬಾಬು , ರಾಘವೇಂದ್ರ ಶೆಟ್ಟಿ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ದರು. ಆದರೆ ಗುಂಡಿ ಚಳುವಳಿ ಹೋರಾಟಕ್ಕೆ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಆಸಕ್ತಿ ತೋರಿಸದೆ ತಮ್ಮ ಕ್ಷೇತ್ರದ ಹೋರಾಟಕ್ಕೇ ಗೈರಾಗಿದ್ದರು. ಪ್ರತಿಭಟನೆ ಬಳಿಕ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ಎಸ್ ಹರೀಶ್ ಮಾತನಾಡಿ, ಇಂದು ನಮ್ಮ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ 28 ಕ್ಷೇತ್ರದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಇವರ ಬಳಿ ಗುಂಡಿ ಮುಚ್ಚೊದಕ್ಕೆ ಹಣವಿಲ್ಲ. ಸಾವಿರ ಕೋಟಿ ಖರ್ಚು ಮಾಡಿದ್ದಕ್ಕೆ ಲೆಕ್ಕಕೊಡಿ ಎಂದು ಪ್ರಶ್ನಿಸಿದ್ದಾರೆ. ಇನ್ನು ನಾವು ಮಹಾಲಕ್ಷ್ಮಿ ಲೇಔಟ್ನಲ್ಲಿ ಸಾಂಕೇತಿಕವಾಗಿ ಗುಂಡಿ ಮುಚ್ಚಿದ್ದೇವೆ. ನಿಮಗೆ ಗುಂಡಿ ಮುಚ್ಚೋದಕ್ಕೆ ಆಗಲ್ಲ ಅಂದ್ರೆ ಹೇಳಿ ಎಂದು ಸರ್ಕಾರವನ್ನು ಕುಟುಕಿದ್ದಾರೆ.
ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕ ರವಿಸುಬ್ರಹ್ಮಣ್ಯ ನೇತೃತ್ವದಲ್ಲಿ ಕಾಮಾಕ್ಯ ಥಿಯೇಟರ್ ಬಳಿ ರಸ್ತೆ ಗುಂಡಿಗಳಿಗೆ ಸಿಮೆಂಟ್ ಮಿಕ್ಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಾಕ್ಯ ರಸ್ತೆಯಲ್ಲಿರುವ ಗುಂಡಿಗಳಿಗೆ ಸಿಮೆಂಟ್ ಮಿಕ್ಸ್ ಹಾಕಿದ್ದಾರೆ ಆರ್. ಅಶೋಕ್ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ. ಆ ಬಳಿಕ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ಹಣ ಇಲ್ಲ. ರಸ್ತೆ ಗುಂಡಿಗಳನ್ನು ನಾವೇ ಮುಚ್ಚೋಣ, ಜನ ಸಹಕಾರ ಮಾಡಿ. ಡಿ.ಕೆ. ಶಿವಕುಮಾರ್ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್ ಹತ್ತಿ ಅಮೆರಿಕಕ್ಕೆ ಹೋಗಿ ಟ್ರಂಪ್ ಮನೆ ಮುಂದೆ ಗುಂಡಿ ಇದ್ಯಾ ನೋಡಿ..? ಮೊದಲು ನಿಮ್ಮ ಮನೆ ನೋಡ್ರೀ. ಮೋದಿ, ಟ್ರಂಪ್ ಏನು ಮಾಡುತ್ತಿದ್ದಾರೆ ಅಂತಾ ನೋಡಲು ನಿಮ್ಮನ್ನು ಅಧಿಕಾರದಲ್ಲಿ ಇಟ್ಟಿಲ್ಲ ಎಂದು ಜರಿದಿದ್ದಾರೆ.

ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಅಂದ್ರೆ ಓಪನ್ ಆಗಿ ಡಿಕ್ಲೇರ್ ಮಾಡಿ, ಮುಚ್ಚಿರುವ ಗುಂಡಿ ಲೆಕ್ಕ ಹೇಳುತ್ತಿದ್ದೀರಲ್ಲಾ, ತೆರೆದಿರುವ ಗುಂಡಿಗಳ ಬಗ್ಗೆ ಹೇಳಿ ಎಂದು ಸರ್ಕಾರಕ್ಕೆ ಚುಚ್ಚಿದ್ದಾರೆ. ಸಾವಿರ ಗುಂಡಿ ಮುಚ್ಚಿದರೆ ಮರುದಿನ ಅದೇ ಸಾವಿರ ಗುಂಡಿ ಓಪನ್ ಆಗುತ್ತದೆ. ಇದು ಕಳ್ಳ ಪೊಲೀಸ್ ಆಟದ ರೀತಿ. ಬಿಜೆಪಿ ಸರ್ಕಾರ ಗುಂಡಿ ಮುಚ್ಚಿಲ್ಲ ಅಂತೀರಲ್ಲ. ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ, ಶಾಶ್ವತ ಅಲ್ಲ. ಇಡೀ ಕಾಂಗ್ರೆಸ್ ಸರ್ಕಾರ ಗುಂಡಿಗಳಲ್ಲಿ ಇದೆ. ರಸ್ತೆ ಗುಂಡಿಗಳು ಮರಣ ಕೂಪ ಆಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಬೇಕಾಗಿದೆ. ನೀವು 5000 ಕೋಟಿ ಡಾಂಬರೀಕರಣ ಮಾಡಿದ್ದರೆ ಗುಂಡಿ ಯಾಕೆ ಬೀಳುತ್ತಿತ್ತು..?ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ ಬಿದ್ದಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಎಲ್ಲಾ ರಸ್ತೆಗಳಿಗೆ ಇಂದಿನಿಂದಲೇ ಡಾಂಬರೀಕರಣ ಮಾಡಿ ಎಂದು ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಪ್ರತಿಭಟನೆ ಮಾಡಿದೆ. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಪರಾಜಿತ ಅಭ್ಯರ್ಥಿ ಸಪ್ತಗಿರಿ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಸಿಮೆಂಟ್ ಕಾಂಕ್ರಿಟ್ ಮಿಕ್ಸ್ ಹಾಕಿ ಗುಂಡಿಗಳ ಮುಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಶಾಸಕ ರವಿಸುಬ್ರಮಣ್ಯ ಮಾತನಾಡಿ, ರಸ್ತೆ ಗುಂಡಿ ಮುಚ್ಚಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಇನ್ನಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ, ಸರ್ಕಾರ ಕೂಡಲೇ ಬೇಕಿರುವ ಅನುದಾನ ಬಿಡುಗಡೆ ಮಾಡಲಿ ಎಂದು ಆಗ್ರಹ ಮಾಡಿದ್ದಾರೆ. ಈ ಸರ್ಕಾರ ದೆಹಲಿಯಲ್ಲಿ ಹೋಗಿ ಗುಂಡಿ ಮುಚ್ಚುವುದು ಬೇಡ. ಕರ್ನಾಟಕದಲ್ಲಿ ಇರುವ ಗುಂಡಿಗಳನ್ನು ಮುಚ್ಚಲಿ ಸಾಕು ಎಂದು ಡಿಸಿಎಂ ಡಿಕೆಶಿ ಮಾತಿಗೆ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಗುಂಡಿಗಳಿಲ್ಲ, ದೆಹಲಿಯ ಪ್ರಧಾನಿ ನಿವಾಸದ ಮುಂದೆಯೂ ಗುಂಡಿಗಳಿಗೆ ಎಂದಿದ್ದರು ಡಿಸಿಎಂ ಡಿ.ಕೆ ಶಿವಕುಮಾರ್.


