ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ವರು ಕೃಷಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಜೋಳದ ರಾಶಿ ಮಾಡ್ತಿದ್ದ ವೇಳೆ ಸಿಡಿಲು ಬಡಿದಿದೆ. ಪಾರ್ವತಿ, ನರಸಿಂಗ್, ಶಿವಾಜಿ, ಆಶಾ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿದೆ. ಕಲಬುರ್ಗಿಯಲ್ಲೂ ಸಿಡಿಲು ಬಡಿದು ಓರ್ವ ಯುವಕ ಬಲಿಯಾಗಿದ್ದಾನೆ. ಚಿಂಚೋಳಿ ತಾಲೂಕಿನ ಶಾದಿಪುರ್ ತಾಂಡದ ಹೊಲದಲ್ಲಿ ಮಹೇಶ್ ಕಿಶನ್ ಚೌಹಾಣ್ ಎಂಬ ಯುವಕ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

ಬೆಳಗಾವಿಯಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಬೆಳಗಾವಿಯ ಚೆನ್ನಮ್ಮ ವೃತ್ತ, ಕ್ಯಾಂಪ್, ಖಡೇಬಜಾರ, ಪೋರ್ಟ್ ರೋಡ್ ಪ್ರದೇಶದಲ್ಲಿ ಭಾರೀ ಮಳೆ ಆಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿ ಆಗಿದೆ. ಅಪರ ಜಿಲ್ಲಾಧಿಕಾರಿ ಕೊಠಡಿಗೂ ಮಳೆ ನೀರು ನುಗ್ಗಿದೆ. ಹುಬ್ಬಳ್ಳಿಯಲ್ಲೂ ಧಾರಾಕಾರ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಮಳೆಯ ಸಿಂಚನವಾಗಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆಯಿಂದ ಮನೆ ಕಡೆಗೆ ಹೊರಟಿದ್ದ ಸವಾರರು ಪರದಾಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗಾಳಿ ಮಳೆಗೆ ಟ್ರಾನ್ಸ್ಫಾರ್ಮರ್ ಕಂಬದ ಸಮೇತ ಮುರಿದು ಬಿದ್ದಿದೆ. ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಪರದಾಡುವಂತಾಗಿತ್ತು.

ಗದಗ ಜಿಲ್ಲೆಯ ಹಲವಡೆ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಹಲವು ಮನೆಗಳ ತಗಡಿನ ಶೀಟ್ ಹಾರಿ ಹೋಗಿ ಅವಾಂತರವೇ ಸೃಷ್ಟಿಯಾಗಿದೆ. ಶಿವಪ್ಪ ಲಮಾಣಿ ಎಂಬುವರ ಕಾಲಿಗೆ ಗಾಯಗಳಾಗಿದ್ದು, ಸೋಮವ್ವ ಲಮಾಣಿ ಕೈಮುರಿತ, ದೇವಪ್ಪ ಲಮಾಣಿಯ ತಲೆ, ಬೆನ್ನಿಗೆ ಗಾಯಗಳಾಗಿವೆ. ಹಾವೇರಿ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಗಿದೆ. ಬ್ಯಾಡಗಿ, ರಾಣೇಬೆನ್ನೂರು, ಸೇರಿದಂತೆ ಹಲವೆಡೆ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಗಾಳಿ-ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಗಡಿ ತಾಲೂಕು ಕಾರ್ಕಳದ ಮಾಳ ಗ್ರಾಮದಲ್ಲಿ ಹಳೆಯ ಮರವೊಂದಕ್ಕೆ ಸಿಡಿಲು ಬಡಿದು ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಸೇರಿದಂತೆ ಹಲವು ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು ಮಳೆಯಿಂದ ಜೋಳದ ತೆನೆ ಹಾಳಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಬೇಸಿಗೆ ಮಳೆ ಮುಂಗಾರು ಮಳೆಯನ್ನು ಮೀರಿಸುವಂತೆ ಆಗ್ತಿದ್ದು, ರೈತರ ಮೊಗದಲ್ಲಿ ಸಾಕಷ್ಟು ವಿಚಾರಕ್ಕೆ ಖುಷಿಗಿಂತಲೂ ದುಖಃವೇ ಹೆಚ್ಚಾಗಿದೆ. ಮಾವು, ಕಲ್ಲಂಗಡಿ, ಟೊಮ್ಯಾಟೋ ಸೇರಿದಂತೆ ಸಾಕಷ್ಟು ಬೆಳೆಗಳು ಹಾನಿಯಾಗಿವೆ.




