ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ಕಣ್ಣಿಗೆ ಕಾಣೋ ದೇವರು ಅಂತಾನೇ ಜನ ಭಾವಿಸ್ತಾರೆ. ಯಾಕಂದ್ರೆ ಏನಾದರೂ ಆರೋಗ್ಯ ಸಮಸ್ಯೆ ಆದಾಗ ವೈದ್ಯರು ಜೀವ ಉಳಿಸ್ತಾರೆ ಅನ್ನೋದು ನಂಬಿಕೆ. ಆದರೆ, vಐದ್ಯರಲ್ಲೂ ಕೆಲವರು ಹೆಣ್ಣುಬಾಕ ವೈದ್ಯರು, ಕಾಮಿಷ್ಟ ವೈದ್ಯರು ಇರೋದು ನಿಜಕ್ಕೂ ಅಚ್ಚರಿಯ ಸಂಗತಿ. ಜೀವ ಉಳಿಸೋರೇ, ಜೀವ ತೆಗೆಯೋ ಕೆಲಸಕ್ಕೆ ನಿಂತು ಬಿಟ್ಟರೆ ನಂಬುವುದು ಯಾರನ್ನು ಅನ್ನೋ ಪ್ರಶ್ನೆ ಎದುರಾಗುತ್ತದೆ. ಕಾಮದ ಹುಚ್ಚೋ, ಹಣದ ಮೇಲಿನ ವ್ಯಾಮೋಹವೋ ಆದರೆ ಅಮಾಯಕ ಹೆಣ್ಣು ಮಕ್ಕಳ ಬದುಕನ್ನೇ ಹಾಳು ಮಾಡಿ ಬಿಡ್ತಾರೆ. ಮೈಸೂರಿನಲ್ಲಿ ಕೇಳಿಬಂದಿರುವ ಆರೋಪವೂ ಇದೇ ರೀತಿ ಆಗಿದೆ. ವೈದ್ಯನೊಬ್ಬ ಒಬ್ರಲ್ಲ, ಇಬ್ರಲ್ಲ. ಮೂವರು ಹೆಣ್ಮಕ್ಕಳ ಬದುಕನ್ನ ಸರ್ವನಾಶ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ಒಬ್ಬರು ಡಾಕ್ಟರ್, ಮತ್ತೊಬ್ಬರು ಚಾರ್ಟೆಡ್ ಅಕೌಂಟೆಡ್. ಇನ್ನೊಬ್ಬಳು ಅಮಾಯಕಿ. ಹೀಗೆ ಮೂವರ ಬದುಕಲ್ಲೂ ವೈದ್ಯನೊಬ್ಬ ಪ್ರೇಮ ಹೆಸರಲ್ಲಿ ಕಾಮದಾಟ ಆಡಿದ್ದಾನೆ ಅನ್ನೋದು ಆರೋಪ. ಮೂಲತಃ ಮೈಸೂರು ನಿವಾಸಿ ಆಗಿರುವ ಡಾ. ವಿನಯ್ ಕುಮಾರ್, ಹಲವು ವರ್ಷಗಳ ಹಿಂದೆ ಖಾಸಗಿ ಕಾಲೇಜಿನ ಆಯುರ್ವೇದ ವಿಭಾಗದಲ್ಲಿ ಪ್ರಾಕ್ಟಿಸ್ ಮಾಡುವಾಗ ಡಾ. ನಾಗಶ್ರೀ ಎಂಬುವರ ಹಿಂದೆ ಬಿದ್ದಿದ್ನಂತೆ. ಸೀನಿಯರ್ ಹಿಂದೆ ಬಿದ್ದವ, ಪ್ರೀತಿ ಪ್ರೇಮ ಅಂತಾ ಹತ್ತಾರು ಕನಸು ಕಟ್ಟಿದ್ದ. ಒಂದಿಷ್ಟು ದಿನ ಖುಷಿ ಖುಷಿಯಾಗೇ ಇದ್ದವರು, 2014ರಲ್ಲಿ ಮಾಡಬಾರದ ಕೃತ್ಯಕ್ಕೆ ಕೈ ಹಾಕಿದ್ದು, ನೀನು ವಯಸ್ಸಲ್ಲಿ ನನಗಿಂತ ದೊಡ್ಡವಳು ಅನ್ನೋ ಕಾರಣಕ್ಕೆ ನಮ್ಮನೆಯಲ್ಲಿ ಮದುವೆಗೆ ಒಪ್ತಿಲ್ಲ ಅಂತಾ ಕ್ಯಾತೆ ತೆಗೆದಿದ್ದ. ಆ ಬಳಿಕ ಶ್ರೀರಂಗಪಟ್ಟಣದ ಲಾಡ್ಜ್ ಒಂದಕ್ಕೆ ಕರೆಸಿಕೊಂಡು, ನಾವಿಬ್ರು ಇಲ್ಲೇ ಸಾಯೋಣ ಅಂತಾ ನಂಬಿಸಿ ನಿದ್ದೆ ಮಾತ್ರೆ ಕೊಟ್ಟಿದ್ದ. ಆ ಬಳಿಕ ನಾಗಶ್ರೀಗೆ ಓವರ್ ಡೋಸ್ ಇಂಜೆಕ್ಷನ್ ಕೂಡ ನೀಡಿದ್ದ. ತಾನೂ ಕೂಡ ಸಾಯೋ ನಾಟಕ ಆಡಿದ್ದ ಡಾಕ್ಟರ್ ವಿನಯ್ ಕುಮಾರ್ ಒಂದೇ ದಿನದಲ್ಲಿ ಚೇತರಿಸಿಕೊಂಡ. ಆದರೆ ಡಾಕ್ಟರ್ ನಾಗಶ್ರೀ ಮಾತ್ರ ಜೀವನ್ಮರಣದ ಹೋರಾಟ ಮಾಡಿದ್ದು 12 ವರ್ಷಗಳ ಕಾಲ.

ಓವರ್ ಡೋಸ್ ಇಂಜೆಕ್ಷನ್ ನೀಡಿದ್ರಿಂದ 12 ವರ್ಷಗಳ ಕಾಲ ನರಕದ ಬದುಕು ಅನುಭವಿಸಿದ ನಾಗಶ್ರೀ ಯಾರ ನೆನಪೂ ಇಲ್ಲದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಆದ್ರೆ, ಡಾಕ್ಟರ್ ವಿನಯ್ ಕುಮಾರ್ ಮಾತ್ರ, ಆತ್ಮಹತ್ಯೆಯೆ ಕಳ್ಳಾಟ ಆಡಿದ ಬಳಿಕ ಒಂದೇ ದಿನಕ್ಕೆ ಗುಣಮುಖನಾಗಿ ಮನೆಗೆ ಸೇರಿದವನು, ನಾಗಶ್ರೀ ಕೋಮಾಗೆ ಜಾರುತ್ತಿದ್ದಂತೆ ಮತ್ತೊಬ್ಬ ಹೆಣ್ಮಗಳ ಹಿಂದೆ ಬಿದ್ದಿದ್ದ ಆರೋಪವೂ ಇದೆ. ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಗೌತಮಿಯನ್ನ ಮರಳು ಮಾಡಿ, ತನ್ನ ಕಾಮದಾಸೆಗೆ ಬಳಸಿಕೊಂಡಿದ್ದ ಅನ್ನೋದು ಆರೋಪ. ಈತನ ಟಾರ್ಚರ್ಗೆ ನೊಂದು ಬೆಂದು ಹೋದ ಗೌತಮಿ ಕೂಡಾ ಸಾವಿನ ಮನೆ ಸೇರಿದ್ರಂತೆ. ಆ ಕೇಸ್ನಲ್ಲೂ ಹಣಬಲದಿಂದ ಬಿ-ರಿಪೋರ್ಟ್ ಹಾಕಿಸಿಕೊಂಡ ಡಾಕ್ಟರ್ ವಿನಯ್, ಮೂರನೇ ಹೆಣ್ಣು ವಿನೋದಾ ಎಂಬಾಕೆ ಜೊತೆಗೆ ಮದ್ವೆಯಾಗಿದ್ದ. ಆದರೆ ಸಂಸಾರ ಹಳ್ಳ ಹಿಡಿದಿತ್ತು.

ವಿನೋದಾ ಜೊತೆಗೆ ಸಂಸಾರ ಮಾಡಿದ್ದು ಕೇವಲ ಒಂದೇ ಒಂದು ತಿಂಗಳು. ಪ್ರತಿ ದಿನವೂ ಕುಡಿದು ಬರ್ತಿದ್ದ ಡಾಕ್ಟರ್ ವಿನಯ್, ಕೊಡಬಾರದ ಕಾಟ ಕೊಡ್ತಿದ್ನಂತೆ. ಗನ್ ತೋರಿಸಿ ಆಸ್ತಿ ಬರೆಸಿಕೊಂಡು ಬಾ ಅಂತಾ ಧಮ್ಕಿ ಹಾಕೋದು. ಅಷ್ಟೇ ಅಲ್ಲ ಮೊದಲೇ ಡೆತ್ ನೋಟ್ ರೆಡಿ ಮಾಡಿ ಸಹಿ ಹಾಕಿಸಿಕೊಂಡಿದ್ದ ಅನ್ನೋ ಆರೋಪವೂ ಕೇಳಿ ಬಂದಿದೆ. ನನಗಾದ ಸ್ಥಿತಿ ಇನ್ಯಾವ ಹೆಣ್ಣಿಗೂ ಬರಬಾರದು ಅಂತಾ ವಿನೋದಾ ಆಕ್ರೋಶ ವ್ಯಕ್ತಪಡಿಸ್ತಾರೆ. ಇನ್ನು ವಿನೋದಾ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಾಕ್ಟರ್ ವಿನಯ್, ನನ್ನ ಮೇಲೆ ಮಾಡ್ತಿರೋ ಆರೋಪಗಳೆಲ್ಲಾ ಸುಳ್ಳು. ಮದ್ವೆಯಾದ 1 ತಿಂಗಳಿಗೆ ಆಕೆಯೇ ಮನೆಯಿಂದ ಹೊರಹೋಗಿದ್ದಾಳೆ ಎಂದಿದ್ದಾರೆ. ಹುಣಸೂರು ತಾಲೂಕು ಹನಗೂಡಿನಲ್ಲಿ ಕ್ಲಿನಿಕ್ ನಡೆಸ್ತಿರೋ ಡಾಕ್ಟರ್ ವಿನಯ್ ಕುಮಾರ್ ಸುತ್ತ ಹತ್ತಾರು ಕಥೆಗಳು ಹುಟ್ಕೊಂಡಿವೆ. ಆದರೆ ಎಲ್ಲವೂ ಹಣದ ಎದುರು ಮಂಕು ಕವಿದಿದೆ ಎನ್ನಲಾಗಿದೆ.



